ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ಕಾರಣವಾದ ಬಾರಾಮತಿ ವಿಮಾನ ಅಪಘಾತವು ದೇಶಾದ್ಯಂತ ತೀವ್ರ ಆಘಾತ ಮೂಡಿಸಿದೆ. ಈ ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕೆಂದು ಪ್ರಬಲವಾಗಿ ಆಗ್ರಹಿಸಿದ್ದಾರೆ.
ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಸುಪ್ರೀಂ ತನಿಖೆಗೆ ಆಗ್ರಹ
ಅಜಿತ್ ಪವಾರ್ ಸಾವು “ತೀವ್ರ ಆಘಾತಕಾರಿ” ಎಂದು ಹೇಳಿರುವ ಮಮತಾ ಬ್ಯಾನರ್ಜಿ ಅವರು, ಸತ್ಯಾಸತ್ಯತೆ ತಿಳಿಯಲು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ. ಇವರಿಗೆ ಧ್ವನಿಗೂಡಿಸಿರುವ ಅಖಿಲೇಶ್ ಯಾದವ್, “ಇದರ ಸತ್ಯ ಹೊರಬರಬೇಕಾದರೆ ಸುಪ್ರೀಂ ಕೋರ್ಟ್ನ ಮೇಲ್ವಿಚಾರಣೆಯಲ್ಲಿಯೇ ತನಿಖೆ ನಡೆಯಬೇಕು ” ಎಂದು ಆಗ್ರಹಿಸಿದ್ದಾರೆ.
ರಾಮದಾಸ್ ಅಠಾವಳೆ ತನಿಖೆಗೆ ಒತ್ತಾಯ
ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು ಅಜಿತ್ ಪವಾರ್ ಅಗಲಿಕೆಯನ್ನು “ದೇಶಕ್ಕೆ ಮತ್ತು ಮಹಾರಾಷ್ಟ್ರಕ್ಕೆ ಆದ ದೊಡ್ಡ ನಷ್ಟ” ಎಂದು ಕರೆದಿದ್ದಾರೆ. ಅಲ್ಲದೆ, ಈ ದುರಂತದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಅವರೂ ಸಹ ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮನೆಮುರುಕ ಮಹಾ‘ನಾಯಕ’ ಮೊದಲಿಗನಲ್ಲ, ಕಡೆಯವನೂ ಆಗಿರುವುದಿಲ್ಲ!
ರಾಜ್ಯ ಸರ್ಕಾರದಿಂದ ತನಿಖೆ ಎಂದ ಏಕನಾಥ್ ಶಿಂಧೆ
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ, ವಿಮಾನ ಅಪಘಾತದ ಕಾರಣವನ್ನು ಪತ್ತೆಹಚ್ಚಲು ರಾಜ್ಯ ಸರ್ಕಾರವು ತನಿಖೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಳಪೆ ಹವಾಮಾನ ಎಂದ ರಾಮ್ ಮೋಹನ್ ನಾಯ್ಡು
ಅಪಘಾತಕ್ಕೆ ಕಾರಣವೇನಿರಬಹುದು ಎಂಬ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, “ವಿಮಾನ ಪತನವಾದ ಸಮಯದಲ್ಲಿ ಆ ಪ್ರದೇಶದಲ್ಲಿ ‘ಗೋಚರತೆ’ ತೀರಾ ಕಳಪೆಯಾಗಿತ್ತು. ಹವಾಮಾನ ವೈಪರೀತ್ಯವೇ ದುರಂತಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ,” ಎಂದು ತಿಳಿಸಿದ್ದಾರೆ.
ದುರಂತದಲ್ಲಿ ಯಾವುದೇ ಪಿತೂರಿಯಿಲ್ಲ: ಶರದ್ ಪವಾರ್
ಅಜಿತ್ ಪವಾರ್ ಅವರ ಚಿಕ್ಕಪ್ಪ ಹಾಗೂ ಎನ್ಸಿಪಿ ನಾಯಕರಾದ ಶರದ್ ಪವಾರ್, “ಇದು ಸಂಪೂರ್ಣವಾಗಿ ಅಪಘಾತ ಮಾತ್ರ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ, ಇದನ್ನು ಭರ್ತಿ ಮಾಡಲು ಸಾಧ್ಯವಿಲ್ಲ. ಇದನ್ನು ರಾಜಕೀಯಗೊಳಿಸಬೇಡಿ” ಎಂದು ಹೇಳಿದ್ದಾರೆ.





