ಕಾಂಗ್ರೆಸ್ನೊಂದಿಗೆ ಇರುವ ಗೊಂದಲಗಳ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ನಿರಾಕರಿಸಿದ್ದು,ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಳ್ಳಲು ರಾಹುಲ್ ಗಾಂಧಿ ಅವರೊಂದಿಗೆ ಯಾವುದೇ ಮನಸ್ತಾಪವಿಲ್ಲ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಅಮೇಥಿ ಹಾಗೂ ರಾಯ್ಬರೇಲಿಯಲ್ಲಿ ನಡೆಯುವ ಭಾರತ್ ಜೋಡೋ ನ್ಯಾಯಯಾತ್ರೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್ ಯಾದವ್, ಶೀಘ್ರದಲ್ಲೇ ಎಲ್ಲವೂ ಸ್ಪಷ್ಟವಾಗುತ್ತದೆ. ಉಳಿದ ವಿಷಯಗಳು ಹಳೆಯದಾಗಿವೆ. ಎಲ್ಲವೂ ಚೆನ್ನಾಗಿದೆ, ಚೆನ್ನಾಗಿಯೇ ಕೊನೆಗೊಳ್ಳುತ್ತದೆ. ಯಾವುದೇ ವಿವಾದಗಳಿಲ್ಲ. ಮೈತ್ರಿ ಇರುತ್ತದೆ ಎಂದು ತಿಳಿಸಿದರು.
ಸಮಾಜವಾದಿ ಪಕ್ಷವು ಸಾಧ್ಯವಾದಷ್ಟು ಜನರನ್ನು ಸಂಪರ್ಕಿಸಲು ಪ್ರಯತ್ನಿಸುತ್ತದೆ. ಸಮಯ ಬಂದಾಗ ಜನರಿಗೆ ಜವಾಬ್ದಾರಿ ನೀಡಲಾಗುವುದು. ಇಂದು ಸಂಜೆಯೇ ಸೀಟು ಹಂಚಿಕೆ ಘೋಷಣೆಯಾಗಬಹುದು ಎಂದು ನಂಬಲಾಗಿದೆ ಎಂದು ಅಖಿಲೇಶ್ ಯಾದವ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆರಕ್ಷಕ ಇಲಾಖೆ ಯಾತಕ್ಕಾಗಿ, ಪೊಲೀಸರು ಇರುವುದು ಯಾರ ರಕ್ಷಣೆಗಾಗಿ?
ಮುಂಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಮಾತುಕತೆ ನಡೆದಿದೆ. ಮೈತ್ರಿ ಸೂತ್ರಕ್ಕೆ ಎರಡೂ ಪಕ್ಷಗಳು ಬಹುತೇಕ ಒಪ್ಪಿಗೆ ಸೂಚಿಸಿವೆ. ಇಂದು ಸಂಜೆಯೊಳಗೆ ಸೀಟು ಹಂಚಿಕೆ ಘೋಷಣೆಯಾಗಲಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಸ್ಪಿ ಮತ್ತು ಕಾಂಗ್ರೆಸ್ ಒಟ್ಟಿಗೆ ಸ್ಪರ್ಧಿಸಲಿವೆ.
ಎರಡೂ ಪಕ್ಷಗಳ ರಾಜ್ಯ ಘಟಕಗಳು ಮೈತ್ರಿಯನ್ನು ಘೋಷಿಸಿವೆ. ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಸ್ಥಾನಗಳಿವೆ. ಮೂರು ಸ್ಥಾನಗಳಿಗೆ ಹಕ್ಕು ಸಾಧಿಸಲು ಎರಡೂ ಪಕ್ಷಗಳ ನಡುವೆ ಜಟಾಪಟಿ ನಡೆದಿದೆ. ಮೂಲಗಳ ಪ್ರಕಾರ, ಎಸ್ಪಿ ಈಗ ಕಾಂಗ್ರೆಸ್ಗೆ 17 ರಿಂದ 19 ಸ್ಥಾನಗಳನ್ನು ನೀಡಲು ಒಪ್ಪಿಗೆ ನೀಡಿದೆ.





