ಅನಿಲ್ ಅಂಬಾನಿ, ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ (ಎಡಿಎಜಿ) ಹಾಗೂ ಗ್ರೂಪ್ನ ಕೆಲ ಕಂಪನಿಗಳನ್ನು ಒಳಗೊಂಡ ಬೃಹತ್ ಬ್ಯಾಂಕಿಂಗ್ ಮತ್ತು ಕಾರ್ಪೊರೇಟ್ ವಂಚನೆ ಪ್ರಕರಣವನ್ನು ‘ನ್ಯಾಯಯುತ, ‘ತ್ವರಿತ’ ಹಾಗೂ ‘ನಿಷ್ಪಕ್ಷಪಾತ’ವಾಗಿ ತನಿಖೆ ನಡೆಸುವಂತೆ ಸಿಬಿಐ ಮತ್ತು ಇಡಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಅನಿಲ್ ಅಂಬಾನಿ ಮತ್ತು ಸಂಬಂಧಿತ ಕಂಪನಿಗಳ ವಿರುದ್ಧ ಸಾರ್ವಜನಿಕ ನಿಧಿಯ ದುರ್ಬಳಕೆ, ನಕಲಿ ಹಣಕಾಸು ಹೇಳಿಕೆಗಳನ್ನು ರೂಪಿಸಿದ ಆರೋಪಗಳಿವೆ. ಈ ಆರೋಪಗಳಿಗೆ ಸಂಬಂಧಿಸಿದ ಪ್ರಕರಣವನ್ನು ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿವೆ. ಅನಿಲ್ ಅಂಬಾನಿ ದೇಶಬಿಟ್ಟು ಹೋಗದಂತೆ ನಿರ್ದೇಶನ ನೀಡಬೇಕೆಂದು ಕೋರಿ ಸಿಬಿಐ ಮತ್ತು ಇಡಿ ಅರ್ಜಿ ಸಲ್ಲಿಸಿದ್ದವು.
ಆ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಹಾಗೂ ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠವು ವಿಚಾರಣೆ ನಡೆಸಿದೆ. ಅಂಬಾನಿ ಮತ್ತು ಎಡಿಎಜಿ ಸಂಸ್ಥೆಗಳ ವಿರುದ್ಧದ ಪ್ರಕರಣದ ತನಿಖೆಗಳಲ್ಲಿ ಆಗಿರುವ ಪ್ರಗತಿಯ ಕುರಿತು ಸಿಬಿಐ ಮತ್ತು ಇಡಿ – ಎರಡೂ ನಾಲ್ಕು ವಾರಗಳಲ್ಲಿ ಹೊಸ ಸ್ಥಿತಿ ವರದಿ ನೀಡುವಂತೆ ಸೂಚಿಸಿದೆ.
ಈ ಲೇಖನ ಓದಿದ್ದೀರಾ?: ಎಪ್ಸ್ಟೀನ್ ಸಂದೇಶಗಳಿಂದ ಬಹಿರಂಗ: ಟ್ರಂಪ್ ಮುಂದೆ ಮೋದಿ ಅಜೆಂಡಾ ತರಲು ಅನಿಲ್ ಅಂಬಾನಿಯಿಂದ ಲೈಂಗಿಕ ಅಪರಾಧಿಯ ಬಳಕೆ!
ತನಿಖಾ ಸಂಸ್ಥೆಗಳು ತನಿಖೆಯನ್ನು ಪ್ರಾರಂಭಿಸಲು ಈಗಾಗಲೇ ಸಮಯ ತೆಗೆದುಕೊಂಡಿವೆ. ಆದಾಗ್ಯೂ, ತನಿಖೆ ಪೂರ್ಣಗೊಂಡಿಲ್ಲ ಎಂಬುದನ್ನು ಗಮನಿಸಿರುವ ಪೀಠವು, ಪ್ರಕರಣದ ತನಿಖೆಗಾಗಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸುವಂತೆ ಇಡಿಗೆ ಸೂಚಿಸಿದೆ.
ಅನಿಲ್ ಅಂಬಾನಿ ಪರ ವಕೀಲ ಮುಕುಲ್ ರೋಹತ್ಗಿ ಮತ್ತು ಶ್ಯಾಮ್ ದಿವಾನ್ ವಾದಮಂಡಿಸಿದ್ದಾರೆ. ಅಂಬಾನಿ ದೇಶ ಬಿಟ್ಟು ಹೋಗದಂತೆ ನಿರ್ದೆಶನ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ರೋಹಟ್ಗಿ ವಿರೋಧಿಸಿದ್ದಾರೆ. ‘ಅಂಬಾನಿ ಭಾರತದಲ್ಲೇ ಇರುತ್ತಾರೆ. ನ್ಯಾಯಾಲಯದ ಅನುಮತಿಯಿಲ್ಲದೆ ಅವರ ಹೊರಹೋಗುವುದಿಲ್ಲ’ ಎಂದು ಹೇಳಿದ್ದಾರೆ.
ಈಗಾಗಲೇ ಅನಿಲ್ ಅಂಬನಿ ವಿರುದ್ಧ ಲುಕ್ಔಟ್ ನೋಟಿಸ್ಗಳು ಜಾರಿಯಲ್ಲಿವೆ!




