ಪಂಜಾಬ್ ರಾಜ್ಯ ಗೋದಾಮು ನಿಗಮದ (ಪಿಎಸ್ಡಬ್ಲ್ಯೂಸಿ) ಜಿಲ್ಲಾ ವ್ಯವಸ್ಥಾಪಕ ಗಗನ್ದೀಪ್ ಸಿಂಗ್ ರಾಂಧವಾ ಅವರ ಆತ್ಮಹತ್ಯೆ ವಿವಾದದ ನಡುವೆ ಪಂಜಾಬ್ ಸಾರಿಗೆ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ಶನಿವಾರ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮ ರಾಜಕೀಯ ಸಹಾಯಕರಿಗೆ ಗೋದಾಮು ಟೆಂಡರ್ ನೀಡುವಂತೆ ಭುಲ್ಲರ್, ರಾಂಧವಾ ಅವರ ಮೇಲೆ ಒತ್ತಡ ಹೇರಿದ್ದಾರೆ. ಇದಕ್ಕೆ ನಿರಾಕರಿಸಿದಾಗ ಅವರನ್ನು ಸಚಿವರ ನಿವಾಸಕ್ಕೆ ಕರೆಸಿ, ಹಲ್ಲೆ ನಡೆಸಿ, ಬ್ಲ್ಯಾಕ್ಮೇಲ್ ಮಾಡಲು 10 ಲಕ್ಷ ರೂ. ಲಂಚ ಸ್ವೀಕರಿಸಿರುವುದಾಗಿ ಕ್ಯಾಮೆರಾದಲ್ಲಿ ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಪ.ಬಂಗಾಳ | ಜಡ್ಜ್ ಹುದ್ದೆಗೆ ರಾಜೀನಾಮೆ ನೀಡಿದ್ದ ಅಭಿಜಿತ್ ಗಂಗೋಪಾಧ್ಯಾಯ ಬಿಜೆಪಿ ಸೇರ್ಪಡೆ
ಗುರುವಾರ ಸಂಜೆ ರಾಂಧವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೂ ಮುನ್ನ ಒಂದು ವಿಡಿಯೋ ಮಾಡಿಕೊಂಡಿದ್ದು, ಅದರಲ್ಲಿ, “ನಿಮ್ಮ ಸ್ನೇಹಿತ ಸಚಿವ ಲಾಲ್ಜಿತ್ ಭುಲ್ಲರ್ ಅವರ ಭಯದಿಂದ ವಿಷ ಸೇವಿಸಿದೆ. ನಾನು ಇನ್ನು ಬದುಕುಳಿಯುವುದಿಲ್ಲ” ಎಂದು ಹೇಳಿದ್ದರು.
ಘಟನೆಯ ನಂತರ, ರಾಜೀನಾಮೆ ನೀಡುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರು ಲಾಲ್ಜಿತ್ ಸಿಂಗ್ ಭುಲ್ಲರ್ ಅವರಿಗೆ ಸೂಚಿಸಿದ್ದಾರೆ. ಹಾಗೆಯೇ ಈ ಪ್ರಕರಣದ ತನಿಖೆ ನಡೆಸುವಂತೆ ಪಂಜಾಬ್ ಮುಖ್ಯ ಕಾರ್ಯದರ್ಶಿ ಕೆಎಪಿ ಸಿನ್ಹಾ ಅವರಿಗೆ ಸೂಚಿಸಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ | ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಒಂದು ದಿನದ ಬಳಿಕ ಬಿಜೆಪಿ ಸೇರಿದ ಅಶೋಕ್ ಚವಾಣ್
ಇನ್ನು ಸಿಎಂ ಸೂಚನೆಯಂತೆ ರಾಜೀನಾಮೆ ನೀಡಿರುವ ಭುಲ್ಲರ್, ಆರೋಪಗಳನ್ನು ಆಧಾರರಹಿತ ಮತ್ತು ಸುಳ್ಳು ಎಂದು ತಳ್ಳಿಹಾಕಿದ್ದಾರೆ. ನ್ಯಾಯಯುತ ತನಿಖೆಗೆ ಅನುವು ಮಾಡಿಕೊಡಲು ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಈ ಘಟನೆಯು ರಾಜಕೀಯ ಟೀಕೆಗೆ ಒಳಗಾಗಿದ್ದು, ವಿಪಕ್ಷಗಳು ಭುಲ್ಲರ್ ವಿರುದ್ಧ ಪ್ರಕರಣ ದಾಖಲಿಸುವಂತೆ, ಬಂಧಿಸುವಂತೆ ಒತ್ತಾಯಿಸಿದೆ. ಸಿಬಿಐ ತನಿಖೆಗೆ ಆಗ್ರಹಿಸಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ, “ರಾಂಧವಾ ಅವರು ಎಎಪಿ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ಅವರಿಂದ ನಿರಂತರ ಕಿರುಕುಳಕ್ಕೆ ಒಳಗಾಗಿದ್ದಾರೆ. ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು ಮತ್ತು ಯಾವುದೇ ವಿಳಂಬವು ಜನರಲ್ಲಿ ಅನುಮಾನ ಹೆಚ್ಚಿಸುತ್ತದೆ. ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಇದು ರಾಜಕೀಯವಲ್ಲ, ನ್ಯಾಯದ ಪ್ರಶ್ನೆ ಇಲ್ಲಿದೆ” ಎಂದು ಹೇಳಿದ್ದಾರೆ.





