ದೇಶದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಮತ್ತು ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರ ಮತ್ತು ಕೇಂದ್ರ ತನಿಖಾ ದಳಕ್ಕೆ(ಸಿಬಿಐ) ನೋಟಿಸ್ ನೀಡಿದೆ. ಹಾಗೆಯೇ ಇಂತಹ ಅಪರಾಧಗಳನ್ನು ನಿಗ್ರಹಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಘಟಿತ ಪ್ರಯತ್ನ ತುರ್ತಾಗಿ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸೆಪ್ಟೆಂಬರ್ 1ರಿಂದ 16ರ ನಡುವೆ ಅಂಬಾಲಾದ ಹಿರಿಯ ನಾಗರಿಕ ದಂಪತಿಗಳು ಡಿಜಿಟಲ್ ಬಂಧನಕ್ಕೆ ಒಳಗಾಗಿ ತಮ್ಮ ಜೀವಮಾನದ ಉಳಿತಾಯವೆಲ್ಲವನ್ನೂ ಕಳೆದುಕೊಂಡಿದ್ದಾರೆ. ಈ ಸಂಬಂಧ ದಂಪತಿ ಸೆಪ್ಟೆಂಬರ್ 16ರಂದು ದೂರು ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯಮಾಲಾ ಬಾಗ್ಚಿ ಅವರ ಪೀಠವು ಕೇಂದ್ರ ಮತ್ತು ಸಿಬಿಐಗೆ ನೋಟಿಸ್ ನೀಡಿದೆ. ಸುಪ್ರೀಂ ಕೋರ್ಟ್ ಹರಿಯಾಣ ಸರ್ಕಾರ ಹಾಗೂ ಅಂಬಾಲಾದ ಸೈಬರ್ ಅಪರಾಧ ಘಟಕಕ್ಕೂ ನೋಟಿಸ್ ನೀಡಿದೆ.
ಇದನ್ನು ಓದಿದ್ದೀರಾ? 86 ವರ್ಷದ ವೃದ್ಧೆಗೆ 2 ತಿಂಗಳು ಡಿಜಿಟಲ್ ಅರೆಸ್ಟ್: 20 ಕೋಟಿ ರೂ. ವಂಚನೆ
ಸಿಬಿಐ, ಗುಪ್ತಚರ ಬ್ಯೂರೋ ಮತ್ತು ನ್ಯಾಯಾಂಗ ಅಧಿಕಾರಿಗಳೆಂದು ಹೇಳಿಕೊಂಡು ವಿಡಿಯೋ ಕರೆ, ದೂರವಾಣಿ ಕರೆ ಮೂಲಕ ವಂಚಕರು ದಂಪತಿಯನ್ನು ಸಂಪರ್ಕಿಸಿದ್ದಾರೆ. ವಾಟ್ಸಾಪ್ ಮತ್ತು ವಿಡಿಯೋ ಕರೆ ಮೂಲಕ ವಂಚಕರು ಸುಪ್ರೀಂ ಕೋರ್ಟ್ನ ನಕಲಿ ಆದೇಶ ಪ್ರತಿಗಳನ್ನು ತೋರಿಸಿದ್ದಾರೆ. ಇದರಲ್ಲಿ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನಕಲಿ ಸಹಿಯೂ ಇತ್ತು ಎಂದು ಹೇಳಲಾಗಿದೆ.
ಬಂಧನದ ಆತಂಕಕ್ಕೆ ಒಳಗಾದ ದಂಪತಿಗಳು ಬೇರೆ ಬೇರೆ ಬ್ಯಾಂಕ್ಗಳ ಮೂಲಕ ಒಟ್ಟಾಗಿ ಈ ವಂಚಕರಿಗೆ 1.5 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ. ವಂಚನೆಗೆ ಒಳಗಾಗಿರುವುದು ತಿಳಿದ ಬಳಿಕ ದೂರು ನೀಡಿದ್ದು, ಅಂಬಾಲಾದ ಸೈಬರ್ ಅಪರಾಧ ಶಾಖೆಯಲ್ಲಿ ಎರಡು ಎಫ್ಐಆರ್ಗಳನ್ನು ದಾಖಲಿಸಲಾಗಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯ ಕಾಂತ್, “ವಂಚಕರು ಸುಪ್ರೀಂ ಕೋರ್ಟ್ ಹೆಸರಲ್ಲಿ ವಂಚನೆ ಮಾಡಿದ್ದಾರೆ ಎಂದು ತಿಳಿದು ಆಘಾತವಾಗಿದೆ. ಅದೂ ಇಡಿ ಅಧಿಕಾರಿಗಳ ಸಹಿಗಳು, ನ್ಯಾಯಾಲಯದ ಮುದ್ರೆಯೂ ನಕಲಿ ಕೋರ್ಟ್ ಆದೇಶ ಪ್ರತಿಯಲ್ಲಿತ್ತು ಎಂಬುದು ತಿಳಿದು ಆಘಾತವಾಗಿದೆ” ಎಂದು ಹೇಳಿದ್ದಾರೆ.
ಇನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಕಾಲ್ ಸೆಂಟರ್ ಕಚೇರಿ ತೆರೆದು ಅದರಲ್ಲೇ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಅಮೆರಿಕ, ಕೆನಡಾದ ಪ್ರಜೆಗಳನ್ನು ವಂಚಿಸುತ್ತಿದ್ದ ವಿವಿಧ ರಾಜ್ಯಗಳ 16 ಮಂದಿಯನ್ನು ಎಚ್ಎಸ್ಆರ್ ಲೇಔಟ್ನ ಪೊಲೀಸರು ಬಂಧಿಸಿದ್ದಾರೆ. ‘ಸಿಬಿಟ್ಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಹೆಸರಲ್ಲಿ ಕಂಪನಿಯನ್ನು ನಡೆಸಲಾಗುತ್ತಿತ್ತು.





