ಕೆನಡಾದಲ್ಲಿ ನಡೆದಿದ್ದ ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ನಿಗೂಢ ಹತ್ಯೆ ಪ್ರಕರಣದಲ್ಲಿ ಈಗ ಅನುಮಾನದ ಕಣ್ಣು ಭಾರತದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಡೆ ತಿರುಗಿದೆ. ಕೆನಡಾ ಅಧಿಕಾರಿಗಳ ಆರೋಪಗಳನ್ನು ಉಲ್ಲೇಖಿಸಿ ಮಾಡಿರುವ ವಿಶೇಷ ವರದಿಯಲ್ಲಿ ʼವಾಷಿಂಗ್ಟನ್ ಪೋಸ್ಟ್ʼ ಈ ಪ್ರಕರಣದಲ್ಲಿ ಅಮಿತ್ ಶಾ ಕೈವಾಡ ಇದೆ ಎಂದು ಹೇಳಿದೆ.
ಅಮಿತ್ ಶಾ ಮತ್ತು ಭಾರತದ ವಿದೇಶಿ ಗುಪ್ತಚರ ಸಂಸ್ಥೆ ‘ರಾ’ ದ ಹಿರಿಯ ಅಧಿಕಾರಿಗಳು ನಿಜ್ಜರ್ ಹತ್ಯೆಗೆ ಅನುಮತಿ ನೀಡಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಕೆನಡಾದ ಉನ್ನತ ಭದ್ರತಾ ಮತ್ತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಡುವೆ ಅಕ್ಟೋಬರ್ 12 ರಂದು ಸಿಂಗಾಪುರದಲ್ಲಿ ನಡೆದ ರಹಸ್ಯ ಸಭೆಯ ವೇಳೆ ಈ ಮಾಹಿತಿಯನ್ನು ಹಂಚಿಕೊಂಡಿರುವುದಾಗಿ ವರದಿಯಾಗಿದೆ.
ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡದ ಕುರಿತು ಕೆನಡಾ ಅಧಿಕಾರಿಗಳು ಹಸ್ತಾಂತರ ಮಾಡಿರುವ ದಾಖಲೆಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ʼವಾಷಿಂಗ್ಟನ್ ಪೋಸ್ಟ್ʼ, ಭಾರತ ಬಿಷ್ಣೋಯ್ ಗ್ಯಾಂಗ್ ಅನ್ನು ಬಳಸಿ ಕಾರ್ಯಾಚರಣೆ ನಡೆಸಿದ ಕುರಿತ ಮಾಹಿತಿ ಇದೆ ಎಂದು ವರದಿಯಲ್ಲಿ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪೊಲೀಸರಿಗೆ-ಸರ್ಕಾರಕ್ಕೆ ಸವಾಲಾಗಿರುವ ಸೈಬರ್ ಕ್ರೈಮ್
ಈ ಬಗ್ಗೆ ತನಗೆ ಸಿಕ್ಕಿರುವ ಮಾಹಿತಿಯ ಬಗ್ಗೆ ವಿವರವಾಗಿ ತನಿಖೆ ಮಾಡಲು ಭಾರತೀಯ ರಾಜತಾಂತ್ರಿಕರನ್ನು ವಿಚಾರಣೆಗೆ ಒಳಪಡಿಸಲು ಕೆನಡಾ ಬಯಸಿರಬಹುದು. ಆದರೆ ಆ ರಾಜತಾಂತ್ರಿಕರಿಗಿದ್ದ ವಿನಾಯಿತಿಯನ್ನು ರದ್ದು ಪಡಿಸಲು ಭಾರತ ಸರಕಾರ ಒಪ್ಪದೇ ಇದ್ದಿದ್ದಕ್ಕೆ ಭಾರತೀಯ ಹೈಕಮಿಷನರ್ ಸಹಿತ ಆರು ಮಂದಿ ರಾಜತಾಂತ್ರಿಕರನ್ನು ಕೆನಡಾ ದೇಶ ಬಿಡುವಂತೆ ಹೇಳಿದೆ ಎಂದು ವರದಿಯಾಗಿದೆ.
ʼವಾಷಿಂಗ್ಟನ್ ಪೋಸ್ಟ್ʼ ವರದಿ ಮತ್ತು ಅಮಿತ್ ಶಾ ಭಾಗಿಯಾಗಿರುವುದರ ಕುರಿತ ಕೆನಡಾ ಅಧಿಕಾರಿಗಳ ಆರೋಪಕ್ಕೆ ವಿದೇಶಾಂಗ ವ್ಯವಹಾರ ಅಥವಾ ಗೃಹ ವ್ಯವಹಾರಗಳ ಸಚಿವಾಲಯಗಳು ಪ್ರತಿಕ್ರಿಯಿಸಿಲ್ಲ ಎಂದು ವರದಿ ಹೇಳಿದೆ.
ಆದರೆ, ನಿವೃತ್ತ ಭಾರತೀಯ ರಾಜತಾಂತ್ರಿಕರನ್ನು ಮಾತನಾಡಿಸಿರುವುದಾಗಿ ಹೇಳಿರುವ ‘ದಿ ವೈರ್’ ಸುದ್ದಿತಾಣ , ಕ್ಯಾಬಿನೆಟ್ ಮಂತ್ರಿಯೊಬ್ಬರು ಇಂಥ ಕಾರ್ಯಾಚರಣೆಯಲ್ಲಿ ಅದೂ ಸಾಗರದಾಚೆಗಿನ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಆ ನಿವೃತ್ತ ಅಧಿಕಾರಿ ಅಚ್ಚರಿ ವ್ಯಕ್ತಪಡಿಸಿರುವುದಾಗಿ ಹೇಳಿದೆ.
ಕೆನಡಾದ ಅಧಿಕಾರಿಗಳು ಅರೋಪಿಸಿರುವಂಥ ಯಾವುದೇ ರೀತಿಯಲ್ಲಿ ಶಾ ತೊಡಗಿಸಿಕೊಂಡಿಲ್ಲ ಎಂದು ಗುಪ್ತಚರ ಸಂಸ್ಥೆಯ ಮಾಜಿ ಮುಖ್ಯಸ್ಥ ತಿಳಿಸಿರುವುದಾಗಿಯೂ ‘ದಿ ವೈರ್’ ಹೇಳಿದೆ.
ವಾಷಿಂಗ್ಟನ್ ಪೋಸ್ಟ್ ನ ಈ ಹಿಂದಿನ ವರದಿಯಲ್ಲಿ ಅಮಿತ್ ಶಾ ಹೆಸರು ಇರಲಿಲ್ಲ. ಭಾರತದ ಹಿರಿಯ ಸಚಿವರು ಮತ್ತು ‘ರಾ’ ದ ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಮಾತ್ರ ಹೇಳಲಾಗಿತ್ತು. ಆದರೆ ನಂತರ ಪರಿಷ್ಕರಿಸಿದ ವರದಿಯಲ್ಲಿ ಪತ್ರಿಕೆ ತನ್ನ ಮೂಲಗಳಿಂದ ಲಭ್ಯವಾದ ಹೆಚ್ಚು ವಿವರವಾದ ಇನ್ಪುಟ್ ಆಧಾರದ ಮೇಲೆ ಅಮಿತ್ ಶಾ ಹೆಸರನ್ನು ನೇರವಾಗಿ ಉಲ್ಲೇಖಿಸಿದೆ.
ಶಾ ವಿರುದ್ಧ ಇಂಥ ಕೃತ್ಯದ ಆರೋಪ ಬರುತ್ತಿರುವುದು ಇದೇ ಮೊದಲೇನೂ ಆಲ್ಲ. ದಶಕದ ಹಿಂದೆ ಗುಜರಾತ್ ನ ಗೃಹ ಸಚಿವರಾಗಿದ್ದಾಗ ಸೊಹ್ರಾಬುದ್ದೀನ್, ಅವರ ಪತ್ನಿ ಕೌಸರ್ ಬಿ ಮತ್ತು ಸಹಚರ ತುಳಸಿರಾಮ್ ಪ್ರಜಾಪತಿಯನ್ನು ನಕಲಿ ಪೊಲೀಸ್ ಎನ್ಕೌಂಟರ್ಗಳ ಮೂಲಕ ಕೊಲ್ಲುವ ಸಂಚಿನಲ್ಲಿ ಭಾಗಿಯಾಗಿದ್ದಾಗಿ ಸಿಬಿಐ ಆರೋಪಿಸಿತ್ತು. ಆದರೆ ಮೋದಿ ಪ್ರಧಾನಿಯಾದ ಕೂಡಲೇ ಶಾ ಅವರನ್ನು ವಿಚಾರಣಾ ನ್ಯಾಯಾಲಯ ಪ್ರಕರಣದಿಂದ ಬಿಡುಗಡೆ ಮಾಡಲಾಯಿತು ಮತ್ತು ಸಿಬಿಐ ಮೇಲ್ಮನವಿ ಸಲ್ಲಿಸಲು ಮುಂದಾಗಿರಲಿಲ್ಲ.





