ನ್ಯಾಯಾಲಯದ ಮೂಲಕ ದಂಪತಿ ವಿಚ್ಛೇದನ ಪಡೆದಾಗ, ಪತ್ನಿಯು ಗಂಡನಿಂದ ಜೀವನಾಂಶ ಪಡೆಯುವುದು ಆಕೆಯ ಹಕ್ಕು. ಆಕೆಗೆ ನೀಡುವುದು ದಾನವಲ್ಲ, ಪತಿಯ ಕರ್ತವ್ಯ ಎಂದು ಆಂಧ್ರಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಚಿನ್ನಂ ಕಿರಣ್ಮಯಿ ಸ್ಮೈಲಿ ಮತ್ತು ಅವರ ಪತಿ ಚಿನ್ನನ್ ಕಿಶೋರ್ ಕುಮಾರ್ ನಡುವಿನ ಜೀವನಾಂಶ ಸಂಬಂಧಿತ ಪ್ರಕರಣವನ್ನು ಆಂಧ್ರ ಹೈಕೋರ್ಟ್ ನ್ಯಾಯಮೂರ್ತಿ ವೈ. ಲಕ್ಷ್ಮಣ ರಾವ್ ವಿಚಾರಣೆ ನಡೆಸಿದ್ದಾರೆ. “ಪತಿಯು ಪತ್ನಿಗೆ ಜೀವನಾಂಶ ನೀಡಬೇಕು. ಅದು ಯಾವುದೇರೀತಿಯ ದಾನವಲ್ಲ, ಕರ್ತವ್ಯ. ಸ್ಮೈಲಿ ಅವರಿಗೆ ಆಕೆಯ ಪತಿ ಮಾಸಿಕ 7,500 ರೂ. ಮತ್ತು ಅವರ ಅಪ್ರಾಪ್ತ ವಯಸ್ಕ ಮಗನಿಗೆ ತಿಂಗಳಿಗೆ 5,000 ರೂ. ನಿರ್ವಹಣಾ ವೆಚ್ಚ ನೀಡಬೇಕು” ಎಂದು ಆದೇಶಿಸಿದ್ದಾರೆ.
“ಜೀವನಾಂಶ ಕೊಡುವುದೆಂದರೆ ಅದು ದಾನವಲ್ಲ, ಬದಲಾಗಿ ಒಂದು ಹಕ್ಕು ಎಂದು ನ್ಯಾಯಾಲಯಗಳು ಸತತವಾಗಿ ಪುನರುಚ್ಚರಿಸಿವೆ. ಸಮಾನತೆ, ನ್ಯಾಯ ಮತ್ತು ಉತ್ತಮ ಆತ್ಮಸಾಕ್ಷಿಯನ್ನು ಎತ್ತಿಹಿಡಿಯಲು ಅದರ ಜಾರಿ ಅತ್ಯಗತ್ಯ. ಹೀಗಾಗಿ, ಭಾರತದ ಕಾನೂನಿನ ಪ್ರಕಾರ ಪೋಷಣೆ ಮಾಡಬೇಕಾದವರ ನಿರ್ಲಕ್ಷ್ಯದಿಂದಾಗಿ ಯಾವುದೇ ಹೆಂಡತಿ, ಮಗು ಅಥವಾ ಅವಲಂಬಿತ ಪೋಷಕರು ಬಡತನದಲ್ಲಿ ಕೊಳೆಯಬಾರದು ಎಂಬುದು ನ್ಯಾಯಾಂಗದ ದೃಢ ಸಂಕಲ್ಪವಾಗಿದೆ” ಎಂದು ಹೇಳಿದ್ದಾರೆ.
2018ರ ಮಾರ್ಚ್ನಲ್ಲಿ ಸ್ಮೈಲಿ ಅವರಿಗೆ ಕಿಶೋರ್ ಜೀವನಾಂಶ ನೀಡಬೇಕೆಂದು ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು. ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಚಿನ್ನನ್ ಕಿಶೋರ್ ಕುಮಾರ್, “ಜೀವನಾಂಶ ನೀಡುವುದು ವಿಕೃತ ಮತ್ತು ತಾರತಮ್ಯದಿಂದ ಕೂಡಿದೆ” ಎಂದು ವಾದಿಸಿದ್ದರು. ಅವರ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.




