‘ಸತ್ಯಮೇವ ಜಯತೇ’ ಎಂಬ ವಾಕ್ಯವನ್ನು ‘ಸತ್ಯಮೇವ ಪರಾಜಯತೇ’ ಎಂದು ಬದಲಾಯಿಸಿ ಅಶೋಕ ಚಕ್ರ ಮತ್ತು ರಾಷ್ಟ್ರೀಯ ಲಾಂಛನವನ್ನು ವಿರೂಪಗೊಳಿಸಿದ್ದ ಆರೋಪ ಹೊತ್ತಿದ್ದ 60 ವರ್ಷದ ವಕೀಲರಿಗೆ ಆಂಧ್ರಪ್ರದೇಶ ಹೈಕೋರ್ಟ್ ಜಾಮೀನು ನೀಡಿದೆ.
ಅರ್ಜಿಯ ವಿಚಾರಣೆ ನಡೆಸಿದ ಡಾ. ನ್ಯಾಯಮೂರ್ತಿ ವೆಂಕಟ ಜ್ಯೋತಿರ್ಮಯಿ, ವಿಚಾರಣೆಗೆ ಮುನ್ನ ನಡೆಸುವ ಬಂಧನವು ಶಿಕ್ಷೆಯಲ್ಲ, ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಬಲವಾದ ಕಾರಣಗಳಿರಬೇಕು ಎಂದು ಅಭಿಪ್ರಾಯಿಸಿದ್ದಾರೆ. ಹಾಗೆಯೇ ವಕೀಲರು ಕಾನೂನು ಮತ್ತು ಸುವ್ಯವಸ್ಥೆ, ರಾಷ್ಟ್ರದ ಸಾರ್ವಜನಿಕ ಶಾಂತಿಗೆ ಅಪಾಯವನ್ನು ಉಂಟು ಮಾಡಿದ್ದಾರೆಂದು ಹೇಳಲು ಯಾವುದೇ ಪುರಾವೆಗಳನ್ನು ಸಲ್ಲಿಸಲಾಗಿಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಇದನ್ನು ಓದಿದ್ದೀರಾ? ಗಾತ್ರದಲ್ಲಿ ಕಿರಿಯ, ಗುಣದಲ್ಲಿ ಹಿರಿಯ – ಸಿರಿಧಾನ್ಯ ಮೇಳದಲ್ಲಿ ಜನವೋ ಜನ
ವಕೀಲರ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 152ರ ಅಡಿಯಲ್ಲಿ “ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆ ತಂದ” ಆರೋಪ ಹೊರಿಸಲಾಗಿತ್ತು. ಆದರೆ, ಆರೋಪಿತ ಕೃತ್ಯಗಳು ಈ ಸೆಕ್ಷನ್ ಅಡಿಯಲ್ಲಿ ಬರುತ್ತವೆ ಎಂದು ಅಂತಿಮವಾಗಿ ನಿರ್ಧರಿಸುವುದು ವಿಚಾರಣೆಯ ಹಂತದಲ್ಲಿ ನಡೆಯಬೇಕಾದ ಕೆಲಸ ಎಂದು ಕೋರ್ಟ್ ಹೇಳಿದೆ. ಹಾಗೆಯೇ ವಕೀಲರು ಯಾವುದೇ ಹಳೆಯ ಅಪರಾಧಗಳ ಹಿನ್ನೆಲೆ ಹೊಂದಿಲ್ಲ ಎಂಬ ಅಂಶವನ್ನು ಕೂಡ ನ್ಯಾಯಾಲಯ ಪರಿಗಣಿಸಿದೆ.
ಏನಿದು ಪ್ರಕರಣ, ನಡೆದಿದ್ದೇನು?
ಇಬ್ಬರು ಸಹ ಆರೋಪಿಗಳೊಂದಿಗೆ ಅರ್ಜಿದಾರರು ಅಶೋಕ ಚಕ್ರದಲ್ಲಿ ಮೂರು ಸಿಂಹಗಳ ಬದಲಿಗೆ ಎತ್ತಿನ ಮುಖಗಳನ್ನು ಹೊಂದಿರುವ ಬ್ಯಾನರ್ಗಳನ್ನು ಹಾಕಿದ್ದಾರೆ. ಹಾಗೆಯೇ ಪ್ಯಾಂಟ್ ಮತ್ತು ಪೊಲೀಸ್ ಬೆಲ್ಟ್ನಂತೆ ಮಾರ್ಫ್ ಮಾಡಿದ್ದಾರೆ. ಲಾಂಛನದ ಮಧ್ಯಭಾಗದಲ್ಲಿರುವ ಚಕ್ರವನ್ನು 24ಕ್ಕೂ ಹೆಚ್ಚು ಕಡ್ಡಿಗಳನ್ನು ಹೊಂದಿರುವಂತೆ ಚಿತ್ರಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಇದಲ್ಲದೆ, ಒಂದು ಬದಿಯಲ್ಲಿ ಕುದುರೆ ಮತ್ತು ಎತ್ತನ್ನು ಚಿತ್ರಿಸಲಾಗಿದ್ದು, ಬಂದೂಕಿನಿಂದ ಒಂದು ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಗುಂಡಿಕ್ಕುವಂತೆ ತೋರಿಸಲಾಗಿತ್ತು. ಇನ್ನೊಂದೆಡೆ ಸ್ವಸ್ತಿಕ ಚಿಹ್ನೆಯನ್ನು ತೋರಿಸಲಾಗಿತ್ತು. ಹಾಗೆಯೇ “ಸತ್ಯಮೇವ ಜಯತೇ” ಎಂಬ ಪದವನ್ನು “ಸತ್ಯಮೇವ ಪರಾಜಯತೇ” ಎಂದು ಬದಲಾಯಿಸಲಾಗಿತ್ತು. “ಹಿಂದೂ ಫ್ಯಾಸಿಸಂ ವಿರುದ್ಧ ಹೋರಾಡೋಣ” ಎಂದೂ ಬರೆಯಲಾಗಿದೆ ಎಂದು ಹೇಳಲಾಗಿತ್ತು.
ಇದನ್ನು ಓದಿದ್ದೀರಾ? ಸ್ವಾತಂತ್ರ್ಯ ದಿನಾಚರಣೆ ಪೋಸ್ಟರ್ | ಗಾಂಧಿಗಿಂತ ಸಾವರ್ಕರ್ಗೆ ಪ್ರಾಮುಖ್ಯತೆ ನೀಡಿದ ಕೇಂದ್ರ: ತೀವ್ರ ಆಕ್ರೋಶ
ಎರಡು ಸಮುದಾಯಗಳ ನಡುವೆ ಸಂಘರ್ಷವನ್ನು ಸೃಷ್ಟಿಸಲು ಉದ್ದೇಶಪೂರ್ವಕವಾಗಿ ಈ ಕೃತ್ಯವನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅರ್ಜಿದಾರರ ವಿರುದ್ಧ ಕಾನೂನು ಮತ್ತು ಸುವ್ಯವಸ್ಥೆ, ಸಾರ್ವಜನಿಕ ಶಾಂತಿಗೆ ಹಾನಿ ಉಂಟುಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಆದರೆ ತಮ್ಮ ಕಕ್ಷಿದಾರರ ಸಹಿಯನ್ನು ಬಲವಂತವಾಗಿ ಪಡೆಯಲಾಗಿದೆ ಎಂದು ವಕೀಲರು ವಾದಿಸಿದ್ದರು. ಹಾಗೆಯೇ ಕಸ್ಟಡಿ ಮುಂದುವರಿಸಲು ಬಲವಾದ ಕಾರಣವಿಲ್ಲ, ಹಾಗಿರುವಾಗ ಜಾಮೀನು ನಿರಾಕರಿಸುವುದು ಸಂವಿಧಾನದ 21 ನೇ ವಿಧಿ ಅಡಿಯಲ್ಲಿ ಅರ್ಜಿದಾರರ ಹಕ್ಕನ್ನು ಉಲ್ಲಂಘಿಸುತ್ತದೆ ಎಂದೂ ಹೇಳಿದ್ದರು.
ವಾದ ಆಲಿಸಿದ ಹೈಕೋರ್ಟ್, ಜಾಮೀನು ನೀಡಲು ಆಪಾದಿತ ಕೃತ್ಯಗಳು ಬಿಎನ್ಎಸ್ ಕಾಯ್ದೆಯ ಸೆಕ್ಷನ್ 152 ಅನ್ನು ಪೂರೈಸುತ್ತವೆಯೇ ಎಂದು ನಿರ್ಧರಿಸಲು ವಿವರವಾದ ವಿಶ್ಲೇಷಣೆ ಅಗತ್ಯವಿಲ್ಲ ಎಂದು ಹೇಳಿದೆ. ಅರ್ಜಿದಾರರು ಅಪರಾಧದ ಹಿನ್ನೆಲೆ ಹೊಂದಿಲ್ಲ, ಸಾಕ್ಷ್ಯವನ್ನು ನಾಶಪಡಿಸುವ ಸಾಧ್ಯತೆಯ ಅಪಾಯವಿಲ್ಲ. ಯಾವುದೇ ಪುರಾವೆಗಳನ್ನು ಸಲ್ಲಿಸದೆ ಇರುವಾಗ ಅರ್ಜಿದಾರರನ್ನು ಕಸ್ಟಡಿಯಲ್ಲಿ ಇರಿಸುವುದು ಸಮರ್ಥನೀಯವಲ್ಲ ಎಂದು ಕೋರ್ಟ್ ಹೇಳಿದೆ.





