ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗ ಪಟ್ಟಣದ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಶನಿವಾರ ಕಾಲ್ತುಳಿತ ಸಂಭವಿಸಿ ಕನಿಷ್ಠ 9 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅರ್ಚಕ ಹರಿ ಮುಕುಂಡ ಪಾಂಡ, “ನನ್ನ ಭೂಮಿ, ನನ್ನ ದೇವಸ್ಥಾನ, ನಾನೇಕೆ ಪೊಲೀಸರಿಗೆ ಮಾಹಿತಿ ನೀಡಬೇಕು” ಎಂದು ಪ್ರಶ್ನಿಸಿದ್ದಾರೆ.
94 ವರ್ಷದ ವೆಂಕಟೇಶ್ವರ ಸ್ವಾಮಿ ಭಕ್ತ ಹರಿ ಮುಕುಂದ ಪಾಂಡ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಾಲ್ಕು ತಿಂಗಳ ಹಿಂದೆ ದೇವಸ್ಥಾನ ನಿರ್ಮಿಸಿದ್ದು ಇದನ್ನು ಸ್ಥಳೀಯವಾಗಿ ‘ಚಿನ್ನ ತಿರುಪತಿ’ ಅಥವಾ ‘ಮಿನಿ ತಿರುಪತಿ’ ಎಂದು ಕರೆಯಲಾಗುತ್ತಿದೆ. ಉನ್ನೂ ಪೂರ್ಣಗೊಳ್ಳದ ಈ ದೇವಾಲಯದಲ್ಲಿ ಏಕಾದಶಿಯಂದು ಭಾರಿ ಜನದಟ್ಟಣೆ ಉಂಟಾಗಿ ಕಾಲ್ತುಳಿತದಲ್ಲಿ ಎಂಟು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.
ಇದನ್ನು ಓದಿದ್ದೀರಾ? ಆಂಧ್ರಪ್ರದೇಶ | ಶ್ರೀಕಾಕುಳಂನ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಕಾಲ್ತುಳಿತ: ಕನಿಷ್ಠ 9 ಮಂದಿ ಸಾವು
ದೇವಸ್ಥಾನದಲ್ಲಿ ಏಕಾದಶಿ ಕಾರ್ಯಕ್ರಮ ನಡೆಯುವ ಬಗ್ಗೆ ಅರ್ಚಕ ಪಾಂಡ ಅವರು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿಲ್ಲ. “ಅವರು ಮೊದಲೇ ಪೊಲೀಸರಿಗೆ ಮಾಹಿತಿ ನೀಡಿದ್ದರೆ, ಜನಸಂದಣಿಯನ್ನು ನಿರ್ವಹಿಸಲು ಪೊಲೀಸರು ವ್ಯವಸ್ಥೆ ಮಾಡಬಹುದಿತ್ತು” ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ದುರಂತಕ್ಕೆ ದೇವಸ್ಥಾನದ ಅಧಿಕಾರಿಗಳನ್ನು ದೂಷಿಸಿರುವ ಸಿಎಂ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅರ್ಚಕ ಪಾಂಡ, “ನಾನು ನನ್ನ ಖಾಸಗಿ ಭೂಮಿಯಲ್ಲಿ ದೇವಸ್ಥಾನವನ್ನು ನಿರ್ಮಿಸಿದೆ. ನಾನೇಕೆ ಪೊಲೀಸರಿಗೆ ಅಥವಾ ಆಡಳಿತಕ್ಕೆ ಮಾಹಿತಿ ನೀಡಬೇಕು” ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ “ನೀವು ಹಲವು ಎಷ್ಟು ಪ್ರಕರಣವನ್ನಾದರೂ ದಾಖಲಿಸಬಹುದು. ನನಗೆ ಯಾವುದೇ ಸಮಸ್ಯೆಯಿಲ್ಲ” ಎಂದೂ ಹೇಳಿಕೊಂಡಿದ್ದಾರೆ.
“ದೇವಾಲಯಕ್ಕೆ ಸಾಮಾನ್ಯವಾಗಿ ಕಡಿಮೆ ಜನರು ಬರುತ್ತಾರೆ. ದೇವರ ದರ್ಶನದ ನಂತರ, ಭಕ್ತರು ಪ್ರಸಾದವನ್ನು ಸ್ವೀಕರಿಸುತ್ತಾರೆ, ಹೊರಟು ಹೋಗುತ್ತಾರೆ. ನಾನು ಏನನ್ನೂ ಕೇಳುವುದಿಲ್ಲ. ನಾನು ನನ್ನ ಸ್ವಂತ ಹಣದಿಂದ ಆಹಾರ ಮತ್ತು ಪ್ರಸಾದವನ್ನು ತಯಾರಿಸುತ್ತೇನೆ. ಆದರೆ ನಿನ್ನೆ, ಬೆಳಿಗ್ಗೆ 9 ಗಂಟೆಗೆ ಜನಸಂದಣಿ ಇದ್ದಕ್ಕಿದ್ದಂತೆ ಹೆಚ್ಚಾಯಿತು. ಪ್ರಸಾದ ಮುಗಿದು ಹೋಯಿತು. ಅಧಿಕ ಪ್ರಸಾದ ತಯಾರಿಸಲು ನಮಗೆ ಅವಕಾಶ ಸಿಗಲಿಲ್ಲ. ಏಕಾದಶಿಯಂದು ಇಷ್ಟೊಂದು ದೊಡ್ಡ ಜನಸಂದಣಿ ಸೇರುವ ನಿರೀಕ್ಷೆ ಇರಲಿಲ್ಲ” ಎಂದು ತಿಳಿಸಿದ್ದಾರೆ.
ಶನಿವಾರ ಕಾಲ್ತುಳಿತ ಉಂಟಾಗಿ ದೇವಸ್ಥಾನದಲ್ಲಿ ಒಟ್ಟು ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಅದಾದ ಬಳಿಕ ದೇವಾಲಯವನ್ನು ಮುಚ್ಚಲಾಗಿದೆ. ಪ್ರವೇಶದ್ವಾರದಲ್ಲಿ ಬೀಗ ಹಾಕಲಾಗಿದ್ದು ಇನ್ನೂ ಪೊಲೀಸರನ್ನು ನಿಯೋಜಿಸಲಾಗಿದೆ. ಕಿರಿದಾದ ಮಾರ್ಗ ಇರುವುದು ಮತ್ತು ಪ್ರವೇಶ-ನಿರ್ಗಮನಕ್ಕೆ ಒಂದೇ ದ್ವಾರ ಇರುವುದು ಈ ಕಾಲ್ತುಳಿತಕ್ಕೆ ಕಾರಣ ಎನ್ನಲಾಗಿದೆ.





