ಬಿಹಾರ ಸೇತುವೆ ಕುಸಿತ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಾ ಸಾಗುತ್ತಿದೆ. ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ಮುಂಜಾನೆ ಮತ್ತೊಂದು ಸೇತುವೆ ಕುಸಿದಿದ್ದು, ಮೂರು ವಾರಗಳಲ್ಲಿ 13ನೇ ಪ್ರಕರಣ ಇದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
“ಇದು ಸಣ್ಣ ಸೇತುವೆ ಎಂದು ಹೇಳಬಹುದು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ನಾವು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಹೆಚ್ಚುವರಿ ಜಿಲ್ಲಾಧಿಕಾರಿ (ಸಹರ್ಸಾ), ಜ್ಯೋತಿ ಕುಮಾರ್ ಹೇಳಿದರು.
ಸಿವಾನ್, ಸರನ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್ಗಂಜ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇತ್ತೀಚಿನ ಸೇತುವೆ ಕುಸಿತ ಘಟನೆಗಳು ನಡೆಯುತ್ತಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಬಿಹಾರ ಸರ್ಕಾರ ಕನಿಷ್ಠ 15 ಎಂಜಿನಿಯರ್ಗಳನ್ನು ಅಮಾನತುಗೊಳಿಸಿವೆ.
ಇದನ್ನು ಓದಿದ್ದೀರಾ? 17 ದಿನಗಳಲ್ಲಿ 12 ಬ್ರಿಡ್ಜ್ಗಳು ಕುಸಿತ; ಬಿಹಾರ ಸೇತುವೆಗಳು ಬೀಳುತ್ತಿರುವುದೇಕೆ?
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಳೆದ ವಾರ ರಾಜ್ಯದ ಎಲ್ಲಾ ಹಳೆಯ ಸೇತುವೆಗಳ ಸಮೀಕ್ಷೆ ನಡೆಸಿ ತಕ್ಷಣ ದುರಸ್ತಿ ಮಾಡಬೇಕಾದ ಸೇತುವೆಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಹಲವು ರಾಜ್ಯಗಳಲ್ಲಿ ಭಾರೀ ಮಳೆಯ ಕಾರಣ ಅವಘಡಗಳು ಸಂಭವಿಸುತ್ತಿದೆ. ಆದರೆ ಈ ಪೈಕಿ ಅಧಿಕ ಸುದ್ದಿಯಾಗಿರುವುದು ಬಿಹಾರ. ‘ಸೇತುವೆಗಳು ಉರುಳುವ ರಾಜ್ಯ’ ಎಂದು ಬಿಹಾರವನ್ನು ಟ್ರೋಲ್ ಮಾಡಲಾಗುತ್ತಿದೆ. ಬಿಜೆಪಿ-ಜೆಡಿಯು ಸರ್ಕಾರವನ್ನು ಟೀಕಿಸಲಾಗುತ್ತಿದೆ.




