ಬೆಂಗಳೂರಿನಲ್ಲಿ ಕಂಪನಿ ತೆರೆದಿದ್ದ ಉದ್ಯಮಿಯೊಬ್ಬರು ತಮ್ಮ ಕಂಪನಿಯ ಕಚೇರಿಯನ್ನು ಬೆಂಗಳೂರಿನಿಂದ ಪುಣೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ನಡೆಯುತ್ತಿರುವ ‘ಭಾಷಾ ಅವಿವೇಕ’ (ಲಾಂಗ್ವೇಜ್ ನಾನ್ಸೆನ್ಸ್) ಕಾರಣ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ, ಬೆಂಗಳೂರಿನ ಚಂದಾಪುರದಲ್ಲಿರುವ ಎಸ್ಬಿಐ ಶಾಖೆಯ ಮಹಿಳಾ ಅಧಿಕಾರಿಯೊಬ್ಬರು ಕನ್ನಡ ಮಾತನಾಡಲು ನಿರಾಕರಿಸಿದ್ದರು. ‘ಇದು ಭಾರತ, ನಾನು ಕನ್ನಡವಳಲ್ಲ. ಹಿಂದಿಯಲ್ಲೇ ಮಾತನಾಡುತ್ತೇನೆ. ಯಾವುದೇ ಕಾರಣಕ್ಕೂ ಕನ್ನಡ ಮಾತನಾಡುವುದಿಲ್ಲ’ ಎಂದು ದುರ್ವರ್ತನೆ ತೋರಿದ್ದರು. ಅವರನ್ನು ಎಸ್ಬಿಐ ವರ್ಗಾವಣೆ ಮಾಡಿದೆ. ಈ ಬೆನ್ನಲ್ಲೇ, ಉದ್ಯಮಿ ಕೌಶಿಕ್ ಮುಖರ್ಜಿ ಎಂಬವರು ತಮ್ಮ ಕಂಪನಿಯ ಕಚೇರಿಯನ್ನು ಪುಣೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ‘ಎಕ್ಸ್’ನಲ್ಲಿ ಟ್ವೀಟ್ ಮಾಡಿರುವ ಮುಖರ್ಜಿ, “ಈ ಭಾಷಾ ಅವಿವೇಕತನ ಮುಂದುವರೆಯುತ್ತಿದೆ. ನನ್ನ ಕಂಪನಿಯ ಕನ್ನಡ ಮಾತನಾಡದ ಸಿಬ್ಬಂದಿಗಳು ಮುಂದಿನ ‘ಸಂತ್ರಸ್ತ’ರಾಗಬಾರದು. ಹೀಗಾಗಿ, ಮುಂದಿನ ಆರು ತಿಂಗಳೊಳಗೆ ನನ್ನ ಕಂಪನಿಯ ಕಚೇರಿಯನ್ನು ಪುಣೆಗೆ ಸ್ಥಳಾಂತರಿಸುತ್ತೇನೆ. ನನ್ನ ನೌಕರರು ವ್ಯಕ್ತಪಡಿಸಿದ ಕಳವಳವನ್ನು ಪರಿಗಣಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
ಎಸ್ಬಿಐ ಅಧಿಕಾರಿಯ ನಡೆಯನ್ನು ಖಂಡಿಸಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಹಂಚಿಕೊಂಡಿದ್ದ ಪೋಸ್ಟ್ಅನ್ನು ಉಲ್ಲೇಖಿಸಿ ಕೌಶಿಕ್ ಮುಖರ್ಜಿ ಅವರು ತಮ್ಮ ಟ್ವೀಟ್ ಮಾಡಿದ್ದಾರೆ. ಎಸ್ಬಿಐ ಅಧಿಕಾರಿಯ ನಡೆಯನ್ನು ಖಂಡಿಸಿದ್ದ ಸೂರ್ಯ, “ನೀವು ಕರ್ನಾಟಕದಲ್ಲಿ, ವಿಶೇಷವಾಗಿ ಬ್ಯಾಂಕಿಂಗ್ನಂತಹ ವಲಯದಲ್ಲಿ ಗ್ರಾಹಕ ಸಂಪರ್ಕ ಕೆಲಸವನ್ನು ಮಾಡುತ್ತಿರುವಾಗ, ಗ್ರಾಹಕರಿಗೆ ಅರ್ಥವಾಗುವ ಭಾಷೆಯಲ್ಲಿ ಸಂವಹನ ನಡೆಸುವುದು ಮುಖ್ಯ” ಎಂದಿದ್ದರು.
Today I took a decision to wind up our Bangalore office in the next 6 months and move it to Pune. If this language nonsense is to continue, I do not want my non Kannada speaking staff to be the next "victim".
— Kaushik Mukherjee 🇮🇳 (@kush07) May 22, 2025
This idea was mooted by the staff themselves.
I agreed to their POV. https://t.co/M9abD2OYOD
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಎಸ್ಬಿಐ ಅಧಿಕಾರಿಯ ಧೋರಣೆಯನ್ನು ಖಂಡಿಸಿದ್ದರು. ದೇಶಾದ್ಯಂತ ಬ್ಯಾಂಕಿಂಗ್ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ಸೂಕ್ಷ್ಮತೆಯ ತರಬೇತಿ ನೀಡಬೇಕೆಂದು ಕೇಂದ್ರ ಹಣಕಾಸು ಸಚಿವಾಲಯವನ್ನು ಒತ್ತಾಯಿಸಿದ್ದರು.
ಭಾರತೀಯ ರಿಸರ್ವ್ ಬ್ಯಾಂಕ್ ಮಾನದಂಡಗಳ ಪ್ರಕಾರ, ಎಲ್ಲ ಬ್ಯಾಂಕುಗಳು ಇಂಗ್ಲಿಷ್, ಹಿಂದಿ ಹಾಗೂ ಪ್ರಾದೇಶಿಕ ಭಾಷೆಯಲ್ಲಿ ಸೇವೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ.




