ಹಣದ ವಿಚಾರವಾಗಿ ಕುಟುಂಬದೊಳಗೆ ಜಗಳ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ತಂದೆ, ತಾಯಿ, ಅಜ್ಜಿ ಹಾಗೂ ಸಹೋದರಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ರಾಮಗಾಂವ್ ಹಳ್ಳಿಯಲ್ಲಿ ಭಾನುವಾರ ಮಧ್ಯರಾತ್ರಿ ಈ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆರೋಪಿ ತನ್ನ ಅಣ್ಣ ಗುರುದೇವ್ ಮೇಲೆಯೂ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.
ಮೃತರನ್ನು ಆರೋಪಿ ತಂದೆ ಬದ್ಲು ರಾಮ್ (60), ತಾಯಿ ಸಂಜು ದೇವಿ (56), ಸಹೋದರಿ ಪಾರ್ವತಿ(ಸುಮಾರು 42) ಹಾಗೂ ಅಜ್ಜಿ ಸಿತಾಲಾ (80) ಎಂದು ಗುರುತಿಸಲಾಗಿದೆ. ಆರೋಪಿಯನ್ನು ನಿರಂಕರ್ (30) ಎಂದು ಹೆಸರಿಸಲಾಗಿದೆ.
ನಿರಂಕರ್ ವಿರುದ್ಧ ಆತನ ಅಣ್ಣ ಗುರುದೇವ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಭೂಮಿ ಮತ್ತು ಆಭರಣಗಳ ಮಾರಾಟದಿಂದ ಬಂದ ಹಣಕ್ಕಾಗಿ ತನ್ನ ತಂದೆಯೊಂದಿಗೆ ಗಲಾಟೆ ಮಾಡಿದ್ದಾನೆ. ಗಲಾಟೆ ತಾರಕ್ಕೇರಿದ್ದು, ನಿರಂಕರ್ ತನ್ನ ಕುಟುಂಬದ ನಾಲ್ವರನ್ನು ಕೊಂದಿದ್ದಾನೆ ಎಂದು ಬಹ್ರೈಚ್ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಗ್ರಾಮೀಣ) ದುರ್ಗಾ ಪ್ರಸಾದ್ ತಿವಾರಿ ತಿಳಿಸಿದ್ದಾರೆ.
“ಗಲಾಟೆ ವೇಳೆ ಕುಪಿತಗೊಂಡ ಆರೋಪಿ ತನ್ನ ಕುಟುಂಬ ಸದಸ್ಯರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ” ಎಂದು ಅವರು ವಿವರಿಸಿದ್ದಾರೆ.
ಘಟನೆಯ ಸಮಯದಲ್ಲಿ, ಆರೋಪಿ ತನಗೆ ತಾನೇ ಹಲವು ಬಾರಿ ಇಟ್ಟಿಗೆಯಿಂದ ಹೊಡೆದುಕೊಂಡಿದ್ದಾನೆ. ಆತನಿಗೂ, ಗಂಭೀರವಾಗಿ ಗಾಯಗಳಾಗಿವೆ. ಆತನನ್ನು ವಶಕ್ಕೆ ಪಡೆಯಲಾಗಿದ್ದು, ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.




