ಅಬಕಾರಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಎರಡು ದಿನಗಳಲ್ಲಿ ತಿಹಾರ್ ಜೈಲಿನ ಪೊಲೀಸರಿಗೆ ಶರಣಾಗಬೇಕಿರುವ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸುದ್ದಿಗಾರರೊಂದಿಗೆ ಮಾತನಾಡಿದರು
“ಎಷ್ಟು ದಿನಗಳ ಕಾಲ ಜೈಲಿನಲ್ಲಿರುತ್ತೇನೆ ಎಂಬುದು ತಿಳಿದಿಲ್ಲ. ಸರ್ವಾಧಿಕಾರದಿಂದ ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ಜೈಲಿಗೆ ವಾಪಸಾಗುತ್ತಿರುವುದರಿಂದ ನನ್ನ ಉತ್ಸಾಹ ಮತ್ತಷ್ಟು ಹೆಚ್ಚಾಗಿದೆ. ಅದಲ್ಲದೆ ವೈದ್ಯರು ನನಗೆ ನನ್ನ ದೇಹದಲ್ಲಿ ಗಂಭೀರ ಕಾಯಿಲೆಯ ಲಕ್ಷಣಗಳಿವೆ ಎಂದು ಹೇಳಿದ್ದಾರೆ” ಎಂದರು.
“ಬಿಜೆಪಿಯವರು ಹಲವು ಮಾರ್ಗಗಳಲ್ಲಿ ನನ್ನನ್ನು ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಯಶಸ್ವಿಯಾಗುವುದಿಲ್ಲ. ಜೈಲಿನಲ್ಲಿದ್ದಾಗ ನನಗೆ ಹಲವು ರೀತಿಯಲ್ಲಿ ಕಿರುಕುಳ ನೀಡಿದ್ದಾರೆ. ನನಗೆ ಔಷಧಿ ಕೊಡುವುದನ್ನು ನಿಲ್ಲಿಸಿದರು. ಜೈಲಿಗೆ ಹೋಗುವಾಗ ನನ್ನ ತೂಕ 70 ಕೆಜಿಯಷ್ಟಿತ್ತು. ಈಗ 64 ಕೆಜಿಗೆ ಇಳಿದಿದ್ದೇನೆ. ಜೈಲಿನಿಂದ ಬಿಡುಗಡೆಯಾದರೂ ನನ್ನ ತೂಕ ಹೆಚ್ಚುಗೊಂಡಿಲ್ಲ. ವೈದ್ಯರು ನನಗೆ ಗಂಭೀರ ಕಾಯಿಲೆಯ ಲಕ್ಷಣಗಳಿವೆ ಎಂದು ಹೇಳಿದ್ದಾರೆ. ಹಲವು ಪರೀಕ್ಷೆಗಳನ್ನು ಮಾಡಿಸಬೇಕಾಗಿದೆ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೋರಾಟಗಳನ್ನು ಹತ್ತಿಕ್ಕಿದ ಗೌಡರ ಹಾಸನದಲ್ಲಿ ಮತ್ತೆ ಮೊಳಗಿದ ಹೋರಾಟದ ಕೂಗು
“ಸುಪ್ರೀಂ ಕೋರ್ಟ್ ಚುನಾವಣೆಯಲ್ಲಿ ಪ್ರಚಾರ ಮಾಡಲು 21 ದಿನಗಳ ಸಮಯ ನೀಡಿತ್ತು.ನಾಡಿದ್ದು ನಾನು ತಿಹಾರಿ ಜೈಲಿಗೆ ಹೋಗಬೇಕಿದೆ. ಮಧ್ಯಾಹ್ನ 3 ಗಂಟೆಗೆ ಹೋಗಿ ಶರಣಾಗುತ್ತೇನೆ. ಬಿಜೆಪಿಯವರು ನನಗೆ ಇನ್ನಷ್ಟು ತೊಂದರೆ ನೀಡುವ ಸಾಧ್ಯತೆಯಿದೆ. ಆದರೆ ಇದಕ್ಕೆಲ್ಲ ನಾನು ಬಗ್ಗುವುದಿಲ್ಲ. ನಾನು ಹೊರಗಿರಲಿ ಅಥವಾ ಒಳಗಿರಲಿ ದೆಹಲಿ ಕೆಲಸಗಳನ್ನು ನಿಲ್ಲಿಸಲು ಬಿಡುವುದಿಲ್ಲ” ಎಂದು ಕೇಜ್ರಿವಾಲ್ ತಿಳಿಸಿದರು.
“ನಿಮ್ಮ ಉಚಿತ ವಿದ್ಯುತ್, ಮೊಹಲ್ಲ ಕ್ಲಿನಿಕ್ಗಳು, ಉಚಿತ ಔಷಧಿ, ಚಿಕಿತ್ಸೆ, 24 ಗಂಟೆ ವಿದ್ಯುತ್ ಒಳಗೊಂಡ ಹಲವು ಸೇವೆಗಳು ಮುಂದುವರೆಯುತ್ತವೆ. ಜೈಲಿನಿಂದ ಹೊರಬಂದ ನಂತರ ಪ್ರತಿ ತಿಂಗಳು ದೆಹಲಿಯ ಸೋದರಿಯರಿಗೆ 1 ಸಾವಿರ ನೀಡುವ ಯೋಜನೆಯನ್ನು ಪ್ರಾರಂಭಿಸುತ್ತೇನೆ” ಎಂದು ಕೇಜ್ರಿವಾಲ್ ಹೇಳಿದರು.
“ನನ್ನ ಪೋಷಕರಿಗೆ ತುಂಬಾ ವಯಸ್ಸಾಗಿದೆ. ನಮ್ಮ ತಾಯಿ ತುಂಬ ಅನಾರೋಗ್ಯದಿಂದಾರೆ. ನಾನು ಜೈಲಿನಲ್ಲಿ ಅವರ ಬಗ್ಗೆ ತುಂಬ ಚಿಂತೆ ಮಾಡುತ್ತೇನೆ. ನನ್ನ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಿ ಅವರಿಗಾಗಿ ಪ್ರಾರ್ಥಿಸಿ” ಎಂದು ಕೇಜ್ರಿವಾಲ್ ದೆಹಲಿ ಜನತೆಗೆ ಮನವಿ ಮಾಡಿದರು.
ಅಬಕಾರಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮೇ.10 ರಂದು ಜೂನ್ 2ರವರೆಗೆ ಮಧ್ಯಂತರ ಜಾಮೀನು ನೀಡಿತ್ತು.





