ಏಷ್ಯಾದ ಅತ್ಯಂತ ಹಿರಿಯ ಆನೆ ‘ವತ್ಸಲಾ’ ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯ ಹುಲಿ ಅಭಯಾರಣ್ಯದ ಆನೆ ಶಿಬಿರದಲ್ಲಿ ಮೃತಪಟ್ಟಿದೆ. ವತ್ಸಲಾಗೆ 100 ವರ್ಷಗಳಿಗಿಂತ ಹೆಚ್ಚು ವಯಸ್ಸಾಗಿದ್ದು, ದೀರ್ಘ ಕಾಲದವರೆಗೆ ಪನ್ನಾ ಕಾಡಿನಲ್ಲಿಯೇ ವಾಸವಿತ್ತು. ವತ್ಸಲಾ ಏಷ್ಯಾದ ಅತ್ಯಂತ ಹಿರಿಯ ಆನೆ ಎಂದು ಪರಿಗಣಿಸಲಾಗಿತ್ತು. ಅಭಯಾರಣ್ಯದ ಆನೆಗಳ ಗುಂಪನ್ನು ‘ವತ್ಸಲಾ’ ಮುನ್ನಡೆಸುತ್ತಿದ್ದಳು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಅರಣ್ಯ ಸಿಬ್ಬಂದಿ ಮತ್ತು ವನ್ಯ ಜೀವಿ ಪ್ರಿಯರು ‘ವತ್ಸಲಾ’ಳನ್ನು ಪ್ರೀತಿಯಿಂದ ‘ದಾದಿ’ ಮತ್ತು ‘ದಾಯಿ ಮಾ’ ಎನ್ನುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವತ್ಸಲಾ ಆನೆಯ ಮುಂದಿನ ಕಾಲು ಬೆರಳಿನ ಉಗುರುಗಳಿಗೆ ಗಾಯವಾಗಿತ್ತು. ಹೀಗಾಗಿ ಕೆಲವು ದಿನಗಳಿಂದ ಹಿನೌಟಾ ಪ್ರದೇಶದ ಖೈರೈಯಾನ್ ನಾಲಾ ಬಳಿ ಮಲಗಿತ್ತು. ಎಷ್ಟೇ ಪ್ರಯತ್ನ ಮಾಡಿದರೂ ಎದ್ದೇಳಲು ಸಾಧ್ಯವಾಗಿರಲಿಲ್ಲ. ಮಂಗಳವಾರ(ಜು.08) ಮಧ್ಯಾಹ್ನ 1.30 ರ ಸುಮಾರಿಗೆ ಮೃತಪಟ್ಟಿದೆ. ಶಿಬಿರದಲ್ಲಿಯೇ ವತ್ಸಲಾ ಅಂತ್ಯಕ್ರಿಯೆಯನ್ನು ನಡೆಸಲಾಯಿತು.
ವತ್ಸಲಾಳನ್ನು ಕೇರಳದ ನರ್ಮದಾಪುರಂನ ನೀಲಂಬೂರು ಕಾಡಿನಲ್ಲಿ ಹಿಡಿದು 1971ರಲ್ಲಿ ಪನ್ನಾ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಬಿಡಲಾಗಿತ್ತು. ವತ್ಸಳಾ ಬೆಳದಿದ್ದು ಬೋರಿಯ ವನ್ಯಜೀವಿ ಅಭಯಾರಣ್ಯದಲ್ಲಿ. ವತ್ಸಲಾ ಮೀಸಲು ಅರಣ್ಯ ಪ್ರದೇಶದಲ್ಲಿ ಅತ್ಯಂತ ಹಿರಿಯ ಆನೆಯಾಗಿದ್ದು,ಆನೆಗಳ ಗುಂಪೊಂದರ ನಾಯಕಿಯಾಗಿತ್ತು. ಇತರ ಆನೆಗಳು ಮರಿಗಳಿಗೆ ಜನ್ಮ ನೀಡುವಾಗ ವತ್ಸಲಾ ಅಜ್ಜಿಯ ಪಾತ್ರವನ್ನು ವಹಿಸುತ್ತಿತ್ತು ಮತ್ತು ಪ್ರವಾಸಿಗಳ ಪ್ರಮುಖ ಆಕರ್ಷಣೆಯಾಗಿತ್ತು.
ಪನ್ನಾ ಜಿಲ್ಲೆಯ ಹುಲಿ ಅಭಯಾರಣ್ಯದಲ್ಲಿ ಪಶುವೈದ್ಯರು ಮತ್ತು ವನ್ಯಜೀವಿ ತಜ್ಞರು ವತ್ಸಲಾಳ ಆರೋಗ್ಯವನ್ನು ನಿಯಮಿತವಾಗಿ ಪರಿಶೀಲಿಸುತ್ತಿದ್ದರು. ‘ವತ್ಸಲಾ’ಳನ್ನು ಹಿನೌಟಾ ಆನೆ ಶಿಬಿರದಲ್ಲಿ ಇರಿಸಲಾಗಿತ್ತು. ಪ್ರತಿದಿನ ಅದನ್ನು ಸ್ನಾನಕ್ಕಾಗಿ ಖೈರಾಯನ್ ಕಾಲುವೆಯ ಬಳಿ ಕರೆದೊಯ್ಯಲಾಗುತ್ತಿತ್ತು ಮತ್ತು ಆಹಾರವನ್ನಾಗಿ ಗಂಜಿಯನ್ನು ನೀಡಲಾಗುತ್ತಿತ್ತು. ವಯಸ್ಸಿನ ಕಾರಣದಿಂದ 2004ರಲ್ಲಿ ‘ವತ್ಸಲಾ’ ದೃಷ್ಟಿಯನ್ನು ಕಳೆದುಕೊಂಡಿತ್ತು. ಆನಂತರದಲ್ಲಿ ವತ್ಸಲಾಳನ್ನು ಗಜಪಡೆ ಸೇರಿದಂತೆ ಮುಂತಾದ ಕಾರ್ಯಕ್ರಮಗಳ ನೇತೃತ್ವದಿಂದ ನಿವೃತ್ತಿಗೊಳಿಸಗಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದಾಖಲೆ ಬರೆದ ಶಕ್ತಿ ಯೋಜನೆ: ಆಡಿದ್ದನ್ನು ಮಾಡಿ ತೋರಿಸಿದ ಸರ್ಕಾರ
ಮಂಗಳವಾರ(ಜು.08) ತನ್ನ ಮುಂಗಾಲುಗಳಿಗೆ ಮೊಳೆಗಳು ಚುಚ್ಚಿ ಗಾಯಗೊಂಡಿದ್ದ ‘ವತ್ಸಲಾ’ ಮೀಸಲು ಕ್ಷೇತ್ರದ ಹಿನೌಟಾ ಪ್ರದೇಶದ ಖೈರಾಯನ್ ಕಾಲುವೆಯ ಬಳಿ ಕುಳಿತುಕೊಂಡಿತ್ತು. ಹೆಚ್ಚು ದೂರ ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಸರಿಯಾದ ಆರೈಕೆಯಿಂದಾಗಿ, ಅಭಯಾರಣ್ಯದ ವಿರಳ ಮತ್ತು ಒಣ ಅರಣ್ಯ ಪ್ರದೇಶದಲ್ಲಿ ವತ್ಸಲಾ ದೀರ್ಘಕಾಲ ಬದುಕಿತ್ತು. ಆನೆಯ ವಯಸ್ಸಿನ ಬಗ್ಗೆ ನಿಖರ ಮಾಹಿತಿಯಿಲ್ಲ. ಆದರೂ ವೈದ್ಯರು ಹಾಗೂ ಮಾವುತರು ಹೇಳಿಕೆಯಂತೆ ವತ್ಸಲಾಳಿಗೆ 100 ವರ್ಷಕ್ಕೂ ಹೆಚ್ಚು ವಯಸ್ಸಾಗಿದೆ.
ವತ್ಸಲಾಳ ಅಂತ್ಯಕ್ರಿಯೆಯನ್ನು ಶಿಬಿರದಲ್ಲಿಯೇ ಗೌರವಪೂರ್ವಕವಾಗಿ ನೆರವೇರಿಸಲಾಯಿತು. ಪನ್ನಾ ಅಭಯಾರಣ್ಯದ ಅಧಿಕಾರಿಗಳು, ಸಿಬ್ಬಂದಿ, ಮತ್ತು ಸ್ಥಳೀಯ ಗ್ರಾಮಸ್ಥರು ಆಕೆಗೆ ಭಾವಪೂರ್ಣ ವಿದಾಯವನ್ನು ನೀಡಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಆಕೆಯ ನಿಧನಕ್ಕೆ ಸಂತಾಪ ಸೂಚಿಸಿ, ವತ್ಸಲಾ ಕೇವಲ ಆನೆಯಾಗಿರದೆ, ಕಾಡಿನ ಮೌನ ರಕ್ಷಕಿಯಾಗಿದ್ದಳು ಎಂದು ಹೇಳಿದರು.
ವತ್ಸಲಾಳ ಜೀವನಕತೆಯು ವನ್ಯಜೀವಿ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಆಕೆಯ ದೀರ್ಘಾಯುಷ್ಯವು ಪನ್ನಾ ಅಭಯಾರಣ್ಯದ ಪರಿಸರದ ಸೊಬಗನ್ನು ಸೂಚಿಸುತ್ತದೆ. ಆಕೆಯ ನಿಧನವು ಒಂದು ಯುಗದ ಅಂತ್ಯವಾದರೂ, ಆಕೆಯ ನೆನಪು ಕಾಡಿನಲ್ಲಿ ಶಾಶ್ವತವಾಗಿ ಜೀವಂತವಾಗಿರಲಿದೆ ಎಂದು ವನ್ಯಜೀವಿ ಪ್ರೇಮಿಗಳು ಹೇಳುತ್ತಾರೆ.





