ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ) ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಿದೆ. ಟಿಕೆಟ್ ನಿರಾಕರಿಸಿದ್ದರಿಂದ ಅಸಮಾಧಾನಗೊಂಡಿದ್ದ ಪ್ರಭಾವಿ ಬುಡಕಟ್ಟು ನಾಯಕಿ ಹಾಗೂ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಅವರು ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ದಿ ವೀಕ್ ವರದಿ ಮಾಡಿದೆ.
ತಾವು ಪ್ರತಿನಿಧಿಸುತ್ತಿದ್ದ ಹಾಫ್ಲಾಂಗ್ ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲು ಕ್ಷೇತ್ರದಿಂದ ಈ ಬಾರಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅವರು ತಮ್ಮ ಸಚಿವ ಸ್ಥಾನ ಹಾಗೂ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಅಸ್ಸಾಂ ಬಿಜೆಪಿ ನಾಯಕ ದಿಲೀಪ್ ಸೈಕಿಯಾ ಅವರಿಗೆ ರವಾನಿಸಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಹಾಲಿ 18 ಶಾಸಕರಿಗೆ ಟಿಕೆಟ್ ನಿರಾಕರಿಸಿ, ಅವರಿಗೆ ಪಕ್ಷದಲ್ಲಿ ಬೇರೆ ಜವಾಬ್ದಾರಿಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ದಿಮಾ ಹಸಾವೊ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ತಿಳಿಸಿದ್ದರು. ಅದರಂತೆ, ಪಕ್ಷದ ಬೃಹತ್ ಯೋಜನೆಯ ಭಾಗವಾಗಿ ನಂದಿತಾ ಗೋರ್ಲೋಸಾ ಅವರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಅವರ ಬದಲಿಗೆ ಹೊಸಬರಾದ ರೂಪಾಲಿ ಲಾಂಗ್ತಾಸಾ ಅವರಿಗೆ ಮಣೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಹಾಫ್ಲಾಂಗ್ ಕ್ಷೇತ್ರದ ತನ್ನ ಅಭ್ಯರ್ಥಿಯನ್ನು ಬದಲಾಯಿಸಿ ನಂದಿತಾ ಗೋರ್ಲೋಸಾ ಅವರಿಗೆ ಟಿಕೆಟ್ ನೀಡಲು ಮುಂದಾಗಿದೆ.
ಅಸ್ಸಾಂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಲಾಂಗ್ತಾಸಾ ಸೇರಿದಂತೆ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ನಂದಿತಾ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ನಂದಿತಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, “ನಂದಿತಾ ಗೋರ್ಲೋಸಾ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದನ್ನು ಘೋಷಿಸಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ. ಅವರು ಕಳೆದ ಐದು ವರ್ಷಗಳಿಂದ ದಿಮಾ ಹಸಾವೊ ಜನರ ಧ್ವನಿಯಾಗಿದ್ದು, ತಮ್ಮ ನಂಬಿಕೆ ಮತ್ತು ತತ್ವಗಳಿಗೆ ಸದಾ ಬದ್ಧರಾಗಿದ್ದಾರೆ,” ಎಂದು ಶ್ಲಾಘಿಸಿದೆ.
ಇದನ್ನು ಓದಿದ್ದೀರಾ? ಅಸ್ಸಾಂ ಅಖಾಡ: ಬಿಜೆಪಿ ಮಿತ್ರಪಕ್ಷ ಎಜಿಪಿಯಿಂದ ಶೇ. 50 ಮುಸ್ಲಿಂ ಅಭ್ಯರ್ಥಿಗಳು
“ಬುಡಕಟ್ಟು ಜನಾಂಗದವರ ಭೂಮಿಯನ್ನು ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಲು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮುಂದಾಗಿದ್ದಾರೆ. ಇದನ್ನು ವಿರೋಧಿಸಿದ್ದಕ್ಕಾಗಿಯೇ ಬಿಜೆಪಿಯಲ್ಲಿ ನಂದಿತಾ ಅವರು ಬೆಲೆ ತೆರಬೇಕಾಯಿತು,” ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಅಲ್ಲದೆ, “ಹಾಫ್ಲಾಂಗ್ ಕ್ಷೇತ್ರದಿಂದ ನಂದಿತಾ ಅವರನ್ನು ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ನಾಳೆ ಘೋಷಿಸುತ್ತೇವೆ,” ಎಂದು ತಿಳಿಸಿದೆ.
ನಂದಿತಾ ಹಿನ್ನೆಲೆ ಹಾಗೂ ಪ್ರಭಾವ
1977ರ ಮೇ 13ರಂದು ಜನಿಸಿದ ನಂದಿತಾ ಗೋರ್ಲೋಸಾ, ಗುಡ್ಡಗಾಡು ಜಿಲ್ಲೆಯಾದ ದಿಮಾ ಹಸಾವೊದ ಹಾಫ್ಲಾಂಗ್ ಮೂಲದವರು. ಈ ಕ್ಷೇತ್ರದಲ್ಲಿನ ಬುಡಕಟ್ಟು ಸಮುದಾಯಗಳಲ್ಲಿ ಅವರು ಬಲವಾದ ಪ್ರಭಾವ ಹೊಂದಿದ್ದಾರೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಅವರು, ಸಂಪುಟ ದರ್ಜೆ ಸಚಿವರಾಗಿ ಗಣಿ ಮತ್ತು ಭೂವಿಜ್ಞಾನ, ಬುಡಕಟ್ಟು ನಂಬಿಕೆ ಮತ್ತು ಸಂಸ್ಕೃತಿ ಇಲಾಖೆಗಳ ಜವಾಬ್ದಾರಿ ನಿರ್ವಹಿಸಿದ್ದರು.
ರಾಜ್ಯದ ದಿಮಾ ಹಸಾವೊ ಜಿಲ್ಲೆಯ ಪ್ರಮುಖ ಭಾಗವಾದ ಹಾಫ್ಲಾಂಗ್ ಕ್ಷೇತ್ರದಲ್ಲಿ ನಂದಿತಾ ಅವರ ಹಠಾತ್ ಕಾಂಗ್ರೆಸ್ ಸೇರ್ಪಡೆಯು ಚುನಾವಣಾ ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.
ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಸ್ಸಾಂ ಜಾತೀಯ ಪರಿಷತ್, ರೈಜೋರ್ ದಳ, ಸಿಪಿಐ(ಎಂ), ಸಿಪಿಐ(ಎಂಎಲ್) ಮತ್ತು ಆಲ್-ಪಾರ್ಟಿ ಹಿಲ್ ಲೀಡರ್ಸ್ ಕಾನ್ಫರೆನ್ಸ್ನೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕಿಳಿದಿದೆ.





