ಅಸ್ಸಾಂನ ಅತಿದೊಡ್ಡ ನಗರ ಗುವಾಹಟಿಯ ಕೆಲವು ಭಾಗಗಳು ಪ್ರವಾಹಕ್ಕೆ ತುತ್ತಾಗಿವೆ. ವಸತಿ ಪ್ರದೇಶಗಳು ಜಲಾವೃತವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಹತಾಶೆಗೊಂಡಿರುವ ವ್ಯಕ್ತಿಯೊಬ್ಬರು ತನ್ನ ಎಂಟು ವರ್ಷದ ಮಗನಿಗಾಗಿ ನಗರದ ದೊಡ್ಡ ಮೋರಿಗಳನ್ನು ಮೂರು ದಿನಗಳಿಂದ ಹುಡುಕಾಟ ನಡೆಸುತ್ತಿದ್ದಾರೆ.
ಗುರುವಾರ ಸಂಜೆ ತಂದೆ ಹೀರಾಲಾಲ್ ಸರ್ಕಾರ್ ಮತ್ತು ಮಗ ಅಭಿನಾಶ್ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಈ ವೇಳೆ, ಅಭಿನಾಶ್ ಸ್ಕೂಟರ್ನಿಂದ ಜಾರಿ ಬದ್ದಿದ್ದು, ತೆರೆದ ಮಳೆನೀರಿನ ಚರಂಡಿಯಲ್ಲಿ ಕೊಚ್ಚಿಹೋಗಿದ್ದಾನೆ. ಅಂದಿನಿಂದಲೂ ಸರ್ಕಾರ್ ತನ್ನ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಭಿನಾಶ್ಗಾಗಿ ರಾಜ್ಯದ ರಕ್ಷಣಾ ಪಡೆಯೂ ಹುಡುಕಾಟ ನಡೆಸುತ್ತಿದೆ.
“ನಾನು ಕಬ್ಬಿಣದ ರಾಡ್ಗಳನ್ನು ಬಳಸಿ, ಮಳೆನೀರಿನ ಮೋರಿಗಳಲ್ಲಿ ಹುಡುಕುತ್ತಿದ್ದೇನೆ. ಆತನ ಚಪ್ಪಲಿಗಳು ಮೋರಿಯಲ್ಲಿ ತೊರೆತಿವೆ. ನನ್ನ ಮಗನನ್ನೂ ನಾನು ಹುಡುಕುತ್ತೇನೆ” ಎಂದು ಸರ್ಕಾರ್ ಹೇಳಿದ್ದಾರೆ.
“ಸರ್ಕಾರದ ಬಳಿ ರಕ್ಷಣಾ ಯಂತ್ರಗಳಿವೆ. ಅವರು ನನ್ನ ಮಗನನ್ನು ಹುಡುಕಬೇಕು” ಎಂದು ಸರ್ಕಾರ್ ಒತ್ತಾಯಿಸಿದ್ದಾರೆ. ಪರಿಶೀಲನೆಗಾಗಿ ಚಪ್ಪಲಿಯನ್ನು ಪೊಲೀಸರಿಗೆ ಒಪ್ಪಿಸಿದ್ದೇನೆ ಎಂದು ತಿಳಿಸಿದ್ದಾರೆ.
ಅಂಗಡಿಯ ವರಾಂಡದಲ್ಲಿ ಸೊಳ್ಳೆ ಪರದೆಯ ಕೆಳಗೆ ರಾತ್ರಿ ಕಳೆದ ಸರ್ಕಾರ್, “ನನ್ನ ಮಗನಿಲ್ಲದೆ ನಾನು ಮನೆಗೆ ಹೋಗುವುದು ಹೇಗೆ? ನನ್ನ ಮಗ ಇಲ್ಲಿದ್ದಾನೆಂದು ನನಗೆ ತಿಳಿದಿದೆ. ನಾನು ಆತನನ್ನು ಹುಡುಕುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ” ಎಂದು ಹೇಳಿದ್ದಾರೆ.
ಎಸ್ಡಿಆರ್ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಘಟಕ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಸೇರಿದಂತೆ ಅನೇಕ ಸಂಸ್ಥೆಗಳು ಶೋಧ ಕಾರ್ಯಾಚರಣೆಯಲ್ಲಿ ನಿರತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಶೋಧ ಕಾರ್ಯಾಚರಣೆಗಳು ಮುಂದುವರೆದಿದ್ದು, ನಾವು ವಿವಿಧ ಸ್ಥಳಗಳಲ್ಲಿ ಸ್ನಿಫರ್ ಡಾಗ್ಗಳು, ಅಗೆಯುವ ಯಂತ್ರಗಳು ಮತ್ತು ಸೂಪರ್ ಸಕ್ಕರ್ಗಳನ್ನು ಬಳಸಿ, ಹುಡುಕಾಟ ನಡೆಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
“ಡ್ರೈನ್ ನೀರು ಹರಿಯುವ ಸಾಧ್ಯತೆಯಿರುವ ವಿವಿಧ ಸ್ಥಳಗಳನ್ನು ಗುರುತಿಸಿ ಹುಡುಕಾಟ ನಡೆಯುತ್ತಿದೆ. ಚರಂಡಿಯ ಕೆಳಭಾಗದಲ್ಲಿ ಕಾಂಕ್ರೀಟ್ ಸ್ಲ್ಯಾಬ್ಗಳಿಂದ ಮುಚ್ಚಿಹೋಗಿರುವ ಭಾಗಗಳನ್ನು ಮೇಲೆತ್ತಲಾಗುತ್ತಿದ್ದು, ನಾಪತ್ತೆಯಾಗಿರುವ ಬಾಲಕನಿಗಾಗಿ ಶೋಧ ನಡೆಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಗುವಾಹಟಿಯ ಅನಿಲ್ ನಗರ, ನಬಿನ್ ನಗರ ಮತ್ತು ರುಕ್ಮಿಣಿಗಾಂವ್ ಸೇರಿದಂತೆ ಹಲವು ಭಾಗಗಳು ಗುರುವಾರ ಸಂಜೆಯಿಂದ ಭಾರೀ ಮಳೆಯಿಂದಾಗಿ ಜಲಾವೃತಗೊಂಡಿವೆ.
ಈ ವರ್ಷ ಅಸ್ಸಾಂ ಪ್ರವಾಹದಲ್ಲಿ ಇದುವರೆಗೆ 52 ಮಂದಿ ಸಾವನ್ನಪ್ಪಿದ್ದರೆ, ಭೂಕುಸಿತ ಮತ್ತು ಚಂಡಮಾರುತದಿಂದ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.




