ಮುಂಬರುವ 2026ರ ಅಸ್ಸಾಂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿದ್ಧತೆಯ ಭಾಗವಾಗಿ ಐವರು ಐಎಎಸ್ ಹಾಗೂ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಹೊಸ ಸ್ಥಳ ನಿಯೋಜಿಸುವಂತೆ ಕೇಂದ್ರ ಚುನಾವಣಾ ಆಯೋಗ ಸೋಮವಾರ ಆದೇಶಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಆಡಳಿತಾತ್ಮಕ ತಟಸ್ಥತೆಯನ್ನು ಕಾಪಾಡುವ ದೃಷ್ಟಿಯಿಂದ ಈ ವರ್ಗಾವಣೆಗಳನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಆಯೋಗ ಸೂಚಿಸಿದೆ. ಅಲ್ಲದೆ, ನಿಯೋಜಿತ ಅಧಿಕಾರಿಗಳು ತಮ್ಮ ಹೊಸ ಹುದ್ದೆಯ ಅಧಿಕಾರ ವಹಿಸಿಕೊಂಡಿರುವ ಬಗ್ಗೆ ಖಚಿತಪಡಿಸಿ, ಮಾರ್ಚ್ 17ರೊಳಗೆ ಅನುಪಾಲನಾ ವರದಿಯನ್ನು ಸಲ್ಲಿಸುವಂತೆಯೂ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಆದೇಶದ ಅನ್ವಯ, ಜಿಲ್ಲಾ ಚುನಾವಣಾಧಿಕಾರಿಗಳಾಗಿ ಐಎಎಸ್ ಅಧಿಕಾರಿಗಳಾದ ಪಿ. ಉದಯ್ ಪ್ರವೀಣ್ ಅವರನ್ನು ಕೊಕ್ರಜಾರ್ಗೆ, ಸೃಷ್ಟಿ ಸಿಂಗ್ ಅವರನ್ನು ಮಜುಲಿಗೆ, ಕಿಮ್ನೈ ಚಾಂಗ್ಸನ್ ಅವರನ್ನು ಬಕ್ಸಾಕ್ಕೆ, ಮಧುಸೂದನ್ ನಾಥ್ ಅವರನ್ನು ಚಿರಂಗ್ಗೆ ಹಾಗೂ ಜಯ್ ವಿಕಾಶ್ ಅವರನ್ನು ಉದಲ್ಗುರಿಗೆ ನಿಯೋಜಿಸಲಾಗಿದೆ. ಅದೇ ರೀತಿ, ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಐಪಿಎಸ್ ಅಧಿಕಾರಿಗಳಾದ ಸೋಮಲಿನ್ ಶುಭದರ್ಶಿನಿ ಅವರನ್ನು ಮಜುಲಿಗೆ, ಆರ್. ಶೀತಲ್ ಕುಮಾರ್ ಅವರನ್ನು ದಕ್ಷಿಣ ಸಲ್ಮಾರಾ-ಮಂಕಚಾರ್ಗೆ, ಅಂಚಲ್ ಚೌಹಾಣ್ ಅವರನ್ನು ಸಾದಿಯಾಕ್ಕೆ, ಸುಧಾಕರ್ ಸಿಂಗ್ ಅವರನ್ನು ಚಿರಂಗ್ಗೆ ಹಾಗೂ ಮೋಹನ್ ಲಾಲ್ ಮೀನಾ ಅವರನ್ನು ಧೇಮಾಜಿಗೆ ವರ್ಗಾವಣೆ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ?
ಪ್ರಸ್ತುತ ಹುದ್ದೆಯಿಂದ ವರ್ಗಾವಣೆಗೊಂಡಿರುವ ಅಧಿಕಾರಿಗಳಿಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಯಾವುದೇ ಚುನಾವಣಾ ಸಂಬಂಧಿತ ಜವಾಬ್ದಾರಿಗಳನ್ನು ನೀಡಬಾರದು ಎಂದೂ ಆಯೋಗವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಒಟ್ಟು 126 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಅಸ್ಸಾಂನಲ್ಲಿ ಏಪ್ರಿಲ್ 9 ರಂದು ಮತದಾನ ನಡೆಯಲಿದೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಸೋಮವಾರದಿಂದಲೇ ಆರಂಭವಾಗಿದ್ದು, ಮಾರ್ಚ್ 23ರವರೆಗೆ ಮುಂದುವರಿಯಲಿದೆ. ಮಾರ್ಚ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಮಾರ್ಚ್ 26 ಕಡೆಯ ದಿನವಾಗಿದೆ. ಮೇ. 4 ರಂದು ಫಲಿತಾಂಶ ಪ್ರಕಟವಾಗಲಿದೆ.





