ಅಸ್ಸಾಂನ ದರ್ರಂಗ್ ಜಿಲ್ಲೆಯ ಶಾಲೆಯೊಂದರಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರವನ್ನು ಆಯೋಜಿಸಿದ್ದ ಬಜರಂಗದಳದ ಇಬ್ಬರು ಸದಸ್ಯರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಬಿಜೊಯ್ ಘೋಷ್ ಮತ್ತು ಗೋಪಾಲ್ ಬೋರೋ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಶಾಮೀಲಾಗಿರುವ ಇತರರನ್ನು ಬಂಧಿಸಲು ತನಿಖೆ ಜಾರಿಯಲ್ಲಿದೆ ಎಂದು ದರ್ರಂಗ್ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಸೋನೋವಾಲ್ ತಿಳಿಸಿದ್ದಾರೆ.
ಬಜರಂಗದಳ ಆಯೋಜಿಸಿದ್ದ ಶಿಬಿರವು ಮಂಗಲದೋಯಿ ಪಟ್ಟಣದ ಮಹರ್ಷಿ ವಿದ್ಯಾ ಮಂದಿರ ಶಾಲೆಯಲ್ಲಿ ಜುಲೈ 24ರಿಂದ 30ರ ತನಕ ನಡೆದಿದ್ದು, 350ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಶಿಬಿರದಲ್ಲಿ ಯುವಕರು ಬಂದೂಕುಗಳನ್ನು ಬಳಸಲು ತರಬೇತಿ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಮಂಗಲದೋಯಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವರು ವ್ಯಕ್ತಿಗಳು ಮಾಡಿದ ಅಪರಾಧ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಯ ಬಗ್ಗೆ ವಿಪಕ್ಷ ನಾಯಕರು ಕ್ರಮಕ್ಕೆ ಒತ್ತಾಯಿಸಿದ್ದರು.
ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಜಿ ಪಿ ಸಿಂಗ್ ಅವರಿಗೆ ಪತ್ರ ಬರೆದು ಸಂಘಟನೆಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ ಜೀನ್ಸ್ ಘಟಕಗಳಿಗೆ ಸೌಲಭ್ಯ ಕಲ್ಪಿಸಿ: ರಾಜ್ಯ ಸರ್ಕಾರಕ್ಕೆ ರಾಹುಲ್ ಪತ್ರ
“ವೈರಲ್ ವಿಡಿಯೋದಲ್ಲಿ, ಸಂಘಟನೆಯ ಪದಾಧಿಕಾರಿಗಳು ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕಿಳಿಯಲು ಜನರನ್ನು ಪ್ರಚೋದಿಸುತ್ತಾರೆ. ಅಲ್ಲದೆ ಮುಸ್ಲಿಂ ಸಮುದಾಯಕ್ಕೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವುದರ ಜೊತೆಗೆ ಅವರ ವಿರುದ್ಧ ಅವಮಾನಕರ ಟೀಕೆಗಳನ್ನು ಮಾಡುತ್ತಿದ್ದಾರೆ. ಇಂತಹ ಶಿಬಿರಗಳು ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುತ್ತವೆ” ಎಂದು ಬದ್ರುದ್ದೀನ್ ಅಜ್ಮಲ್ ತಿಳಿಸಿದ್ದಾರೆ.
“ಮುಖ್ಯಮಂತ್ರಿಯವರೆ, ನೀವು ಈಗಾಗಲೇ ಹಲವಾರು ಮದರಸಾಗಳನ್ನು ನೆಲಸಮಗೊಳಿಸಿದ್ದೀರಿ. ಈಗ, ಶಸ್ತ್ರಾಸ್ತ್ರ ಶಿಬಿರ ಆಯೋಜಿಸಿದ್ದಕ್ಕಾಗಿ ಮಹರ್ಷಿ ವಿದ್ಯಾ ಮಂದಿರ ಶಾಲೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಿಲ್ಲವೇ? ಈ ತಾರತಮ್ಯದ ಕ್ರಮವು ಸರ್ಕಾರದ ವಿರುದ್ಧ ಜನರ ಮನಸ್ಸಿನಲ್ಲಿ ದ್ವೇಷವನ್ನು ಉಂಟು ಮಾಡುವುದಿಲ್ಲವೇ?” ಎಂದು ಶಾಸಕ ಅಖಿಲ್ ಗೊಗೊಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.





