ಇತ್ತೀಚಿನ ವಿಧಾನಸಭಾ ಚುನಾವಣೆಯ ಸೋಲಿನಿಂದ ವಿಪಕ್ಷಗಳು ಕಂಗೆಟ್ಟಿದ್ದು, ಹತಾಶೆಯಿಂದ ಸಂಸತ್ತಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಸಂಸತ್ತಿನಲ್ಲಿ ಪ್ರತಿಪಕ್ಷಗಳ ನಡವಳಿಕೆಯು 2024 ರ ಲೋಕಸಭೆ ಚುನಾವಣೆಯಲ್ಲಿ ಅದರ ಸಂಖ್ಯೆಯು ಕಡಿಮೆಯಾಗುವುದನ್ನು ಖಚಿತಪಡಿಸುತ್ತದೆ ಮತ್ತು ಬಿಜೆಪಿ ಸಂಖ್ಯಾಬಲವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
“ನಮ್ಮ ಸರ್ಕಾರವನ್ನು ಹೊರಹಾಕುವುದು ‘ಇಂಡಿಯಾ’ ಒಕ್ಕೂಟದ ಗುರಿಯಾಗಿದ್ದರೆ, ನಮ್ಮ ಸರ್ಕಾರದ ಗುರಿ ದೇಶಕ್ಕೆ ಉಜ್ವಲ ಭವಿಷ್ಯವನ್ನು ಸೃಷ್ಟಿಸುವುದಾಗಿದೆ. ಕೆಲವು ಪಕ್ಷಗಳು ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆಗೆ ಬೆಂಬಲ ನೀಡುತ್ತವೆ. ಇದು ಉಲ್ಲಂಘನೆಯಷ್ಟೇ ಅಪಾಯಕಾರಿ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜಕೀಯ ಸಂಸ್ಕೃತಿಯನ್ನು ಅಧೋಗತಿಗೆ ತಳ್ಳುತ್ತಿರುವ ಬಿಜೆಪಿ ಅಂತಃಕಲಹ
“ಪ್ರಜಾಪ್ರಭುತ್ವದಲ್ಲಿ ನಂಬಿಕೆಯುಳ್ಳ ಪ್ರತಿಯೊಬ್ಬರೂ ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆಯನ್ನು ಜಂಟಿಯಾಗಿ ಖಂಡಿಸಬೇಕಿತ್ತು. ಪ್ರತಿಪಕ್ಷಗಳ ನಡವಳಿಕೆಯು 2024 ರ ಚುನಾವಣೆಯಲ್ಲಿ ಅದರ ಸಂಖ್ಯೆಯು ಕಡಿಮೆಯಾಗುತ್ತದೆ ಎಂದು ತೋರಿಸುತ್ತದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸಂಖ್ಯೆ ಲೋಕಸಭೆಯಲ್ಲಿ ಹೆಚ್ಚಾಗುತ್ತದೆ” ಎಂದರು.
“ಸಂಸತ್ತಿನ ಭದ್ರತಾ ಲೋಪ ವಿಚಾರವಾಗಿ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ, ಆರೋಪಿಗಳಿಗೆ ವಿರೋಧ ಪಕ್ಷಗಳ ಬೆಂಬಲವಿದೆ. ಆರೋಪಿಗಳನ್ನು ಪ್ರತಿಪಕ್ಷಗಳು ಬೆಂಬಲಿಸುವುದು ಬಹಳ ಅಪಾಯಕಾರಿ. ಸಂಸತ್ತಿನ ಭದ್ರತೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ವರ್ತನೆ ಸರಿಯಲ್ಲ. ಪ್ರತಿಪಕ್ಷಗಳ ವರ್ತನೆ ಬೇಸರ ಉಂಟುಮಾಡಿದೆ” ಎಂದು ಹೇಳಿದರು.
ಡಿಸೆಂಬರ್ 13 ರ ಭದ್ರತಾ ಉಲ್ಲಂಘನೆಯ ಬಗ್ಗೆ ಸಂಸತ್ತಿನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಿಂದ ಅಶಿಸ್ತಿನ ನಡೆವಳಿಕೆಗಾಗಿ ಉಭಯ ಸದನಗಳಿಂದ 141 ಸಂಸದರನ್ನು ಅಮಾನತುಗೊಳಿಸಲಾಗಿದೆ.





