ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಕ್ಷ ಟಿಎಂಸಿಗೆ ರಾಜಕೀಯ ಸಲಹೆಗಳನ್ನು ನೀಡುವ ಐ-ಪ್ಯಾಕ್ ಸಂಸ್ಥೆಯ ಮೇಲಿನ ಇಡಿ ದಾಳಿ ಸಂದಂರ್ಭದಲ್ಲಾದ ವಿವಾದ ಪ್ರಕರಣದಲ್ಲಿ ಬಂಗಾಳ ಸರ್ಕಾರ ಭಾರೀ ಹಿನ್ನಡೆಯಾಗಿದೆ. ಇಡಿ ಅಧಿಕಾರಿಗಳ ವಿರುದ್ಧ ಬಂಗಾಳ ಪೊಲೀಸರು ದಾಖಲಿಸಿದ್ದ ಎಫ್ಐಆರ್ಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಮಾತ್ರವಲ್ಲದೆ, ಕೇಂದ್ರ ತನಿಖಾ ಸಂಸ್ಥೆಯ ತನಿಖೆಯಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪವನ್ನು ಪ್ರಶ್ನಿಸಿದ್ದು, ಮಮತಾ ಬ್ಯಾನರ್ಜಿ ಮತ್ತು ಬಂಗಾಳ ಪೊಲೀಸ್ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.
ಜನವರಿ 8ರಂದು ಇಡಿ ಅಧಿಕಾರಿಗಳು ಐ-ಪ್ಯಾಕ್ ಕಚೇರಿ ಮತ್ತು ಅದರ ಸಂಸ್ಥಾಪಕ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು. ಹಿಂದಿನ, ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿರುವುದಾಗಿ ಇಡಿ ಅಧಿಕಾರಿಗಳು ಹೇಳಿಕೊಂಡಿದ್ದರು. ಆದರೆ, ಬಂಗಾಳ ಚುನಾವಣೆಯ ಸಮಯದಲ್ಲಿ ನಡೆದಿರುವ ಈ ದಾಳಿಯು, ಟಿಎಂಸಿಯ ಚುನಾವಣಾ ತಂತ್ರಗಳು, ಆಂತರಿಕ ದಾಖಲೆಗಳು ಹಾಗೂ ಅಭ್ಯರ್ಥಿಗಳ ಮಾಹಿತಿಯನ್ನು ಕದಿಯಲು ಕೇಂದ್ರ ತನಿಖಾ ಸಂಸ್ಥೆಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ. ಅಮಿತ್ ಶಾ ಅವರ ನಿರ್ದೇಶನದಂತೆ ಈ ದಾಳಿ ನಡೆದಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ದಾಳಿ ವೇಳೆ ಐ-ಪ್ಯಾಕ್ ಕಚೇರಿಗೆ ತೆರಳಿದ ಮಮತಾ, ಕೆಲವು ಕಡತಗಳನ್ನು ಅಧಿಕಾರಿಗಳಿಂದ ಕಸಿದುಕೊಂಡು ಹೊರತಂದಿದ್ದಾರೆ.
ಮಮತಾ ಬಾನರ್ಜಿ ಅವರ ಮಧ್ಯಪ್ರವೇಶವು ಬಂಗಾಳ ಸರ್ಕಾರ ಮತ್ತು ಇಡಿ ನಡುವಿಗೆ ತಿಕ್ಕಾಟಕ್ಕೆ ಕಾರಣವಾಗಿತ್ತು. ಮಮತಾ ವಿರುದ್ಧ ಇಡಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೆ, ಇಡಿ ವಿರುದ್ಧ ರಾಜ್ಯಾದ್ಯಂತ ಟಿಎಂಸಿ ಪ್ರತಿಭಟನೆ ನಡೆಸಿತ್ತು. ಅಲ್ಲದೆ, ಸರ್ಕಾರವು ಇಡಿ ಅಧಿಕಾರಿಗಳ ವಿರುದ್ದ ಕಳ್ಳತನ ಆರೋಪದ ಮೇಲೆ ಎಫ್ಐಆರ್ ದಾಖಲಿಸಿತ್ತು.
ತನಿಖೆಗೆ ಮಮತಾ ಅಡ್ಡಿಪಡಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಂಗಾಳದ ಡಿಜಿಪಿ ರಾಜೀವ್ ಕುಮಾರ್ ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ವರ್ಮಾ ಸೇರಿದಂತೆ ಇತರರನ್ನು ಅಮಾನತುಗೊಳಿಸಬೇಕೆಂದು ಕೋರಿ ಇಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ವಿಪುಲ್ ಪಾಂಚೋಲಿ ಅವರಿದ್ದ ಪೀಠವು ವಿಚಾರಣೆ ನಡೆಸಿದೆ. “ಪ್ರಸ್ತುತ ಅರ್ಜಿಯು ಇಡಿ ಅಥವಾ ಇತರ ಕೇಂದ್ರ ಸಂಸ್ಥೆಗಳ ತನಿಖೆಯಲ್ಲಿ ರಾಜ್ಯ ಸಂಸ್ಥೆಗಳ ಹಸ್ತಕ್ಷೇಪಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಯನ್ನು ಎತ್ತಿದೆ ಎಂಬುದಾಗಿ ನಾವು ಭಾವಿಸುತ್ತೇವೆ. ಇಡಿ ಎತ್ತಿದ ಸಮಸ್ಯೆಗಳನ್ನು ಪರಿಶೀಲಿಸದಿದ್ದರೆ ದೇಶದಲ್ಲಿ ಕಾನೂನುಬಾಹಿರತೆ ಉಂಟಾಗುತ್ತದೆ” ಎಂದು ಪೀಠ ಹೇಳಿದೆ.
ಈ ಲೇಖನ ಓದಿದ್ದೀರಾ?:ಬಂಗಾಳ ಚುನಾವಣೆ ಮೇಲೆ ಕೋಮುವಾದದ ಕರಿನೆರಳು!
“ನಮ್ಮ ಪ್ರಕಾರ, ದೇಶದಲ್ಲಿ ಕಾನೂನಿನ ನಿಯಮವನ್ನು ಪಾಲಿಸಲು ಮತ್ತು ಪ್ರತಿಯೊಂದು ಕಾನೂನಾತ್ಮಕ ಸಂಸ್ಥೆಯು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲು, ಆರೋಪಿಗಳನ್ನು ನಿರ್ದಿಷ್ಟ ರಾಜ್ಯದ ಕಾನೂನು ಜಾರಿ ಸಂಸ್ಥೆಗಳ ತೆಕ್ಕೆಯಲ್ಲಿ ರಕ್ಷಿಸಲು ಅನುಮತಿಸದಂತೆ ಸಮಸ್ಯೆಯನ್ನು ಪರಿಶೀಲಿಸುವುದು ಅವಶ್ಯಕವಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಗೃಹ ವ್ಯವಹಾರಗಳ ಸಚಿವಾಲಯ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಮಮತಾ ಬ್ಯಾನರ್ಜಿ ಮತ್ತು ಬಂಗಾಳ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಇಡಿ ತನ್ನ ಅರ್ಜಿಯಲ್ಲಿ, “ಕಾನೂನು ರಕ್ಷಕರು – ಮುಖ್ಯಮಂತ್ರಿ, ಡಿಜಿಪಿ ಹಾಗೂ ಕೋಲ್ಕತ್ತಾ ಪೊಲೀಸ್ ಆಯುಕ್ತರು – ಎಫ್ಐಆರ್ ದಾಖಲಿಸಬೇಕಾದ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ. ಮುಖ್ಯಮಂತ್ರಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಬಿಎನ್ಎಸ್ ಅಡಿಯಲ್ಲಿ 17 ಅಪರಾಧಗಳನ್ನು ಮಾಡಿದ್ದಾರೆ” ಎಂದು ಆರೋಪಿಸಿದೆ. ಇವುಗಳಲ್ಲಿ ದರೋಡೆ, ಡಕಾಯಿತಿ, ಕಳ್ಳತನ, ಹಲ್ಲೆ ಅಥವಾ ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿ, ಕ್ರಿಮಿನಲ್ ಬಲ ಪ್ರಯೋಗ, ಕಣ್ಮರೆ ಮಾಡುವುದು, ಸಾಕ್ಷ್ಯ ನಾಶ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿವೆ.
“ದಾಳಿ ನಡೆಸಿದ್ದಕ್ಕಾಗಿ ರಾಜ್ಯ ಪೊಲೀಸರು ದುರುದ್ದೇಶಪೂರ್ವಕವಾಗಿ ತಮ್ಮ ಅಧಿಕಾರಿಗಳ ವಿರುದ್ಧ ಹಲವಾರು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಮತ್ತು ಐ-ಪಿಎಸಿಗೆ ಸಂಬಂಧಿಸಿದ ಪಿಎಂಎಲ್ಎ ಪ್ರಕರಣದ ತನಿಖೆಯನ್ನು ಅಡೆತಡೆಯಿಲ್ಲದೆ ನಡೆಸಲು ತನ್ನ ಅಧಿಕಾರಿಗಳಿಗೆ ನ್ಯಾಯಾಲಯದಿಂದ ರಕ್ಷಣೆ ನೀಡಬೇಕು” ಎಂದು ಇಡಿ ಕೋರಿದೆ.




