ಅಯೋಧ್ಯೆಯ ಬಾಬರಿ ಮಸೀದಿ ವಿವಾದದಲ್ಲಿ ಸುಪ್ರೀಂ ಕೋರ್ಟ್ 2019ರಲ್ಲಿ ತೀರ್ಪು ನೀಡಿತ್ತು. ಬಾಬರಿ ಮಸೀದಿ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಆದೇಶಿಸಿತ್ತು. ಆ ತೀರ್ಪು ನೀಡಿದ ನ್ಯಾಯಪೀಠದಲ್ಲಿ ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಕೂಡ ಇದ್ದರು. ಇದೀಗ, ಅವರು ಬಾಬರಿ ಮಸೀದಿ ವಿಚಾರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಹೇಳಿಕೆಗಳು ಭಾರೀ ಚರ್ಚೆಯನ್ನು ಹುಟ್ಟುಹಾಕಿವೆ. ಆದ್ದರಿಂದ, ಅವರ ಹೇಳಿಕೆಗಳ ಆಧಾರದ ಮೇಲೆ 2019ರ ತೀರ್ಪಿನ ವಿರುದ್ಧ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಬಹುದು ಎಂದು ಕಾನೂನು ತಜ್ಞ, ಪ್ರಾಧ್ಯಾಪಕ ಜಿ ಮೋಹನ್ ಗೋಪಾಲ್ ಹೇಳಿದ್ದಾರೆ.
ಬಾಬರಿ ಮಸೀದಿ ಪ್ರಕರಣದಲ್ಲಿ ಸುರ್ಧೀಘ ವಿಚಾರಣೆಯ ಬಳಿಕ, 2019ರಲ್ಲಿ ಅಂದಿನ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಐದು ಸದಸ್ಯರ ಪೀಠವು ತೀರ್ಪು ನೀಡಿತ್ತು. ಆ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್.ಎ ಬೊಬ್ಡೆ, ಡಿ.ವೈ ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಎಸ್ ಅಬ್ದುಲ್ ನಝೀರ್ ಇದ್ದರು. ತೀರ್ಪು ನೀಡುವ ಸಮಯದಲ್ಲಿ; “ದೇವಾಲಯವನ್ನು ಉರುಳಿಸಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದಾಗ್ಯೂ, ಧರ್ಮಗಳ ನಂಬಿಕೆಗಳಲ್ಲಿ ಸಮತೋಲನ ಕಾಯ್ದುಕೊಳ್ಳುವ, ಧಾರ್ಮಿಕ ಸಾಮರಸ್ಯವನ್ನು ಉತ್ತೇಜಿಸುವ ಹಾಗೂ ಬಹುಸಂಖ್ಯಾತರ ಭಾವನೆಗಳನ್ನು ಪರಿಗಣಿಸಿ ತೀರ್ಪು ನೀಡಲಾಗುತ್ತಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಆದರೆ, ತೀರ್ಪಿನ ಭಾಗವಾಗಿದ್ದ ಡಿ.ವೈಚಂದ್ರಚೂಡ್ ಅವರು ತಮ್ಮ ನಿವೃತ್ತಿಯ ಬಳಿಕ ಬಾಬರಿ ಮಸೀದಿ ವಿವಾದ ಮತ್ತು ತೀರ್ಪಿನ ಬಗ್ಗೆ ಪದೇ-ಪದೇ ಮಾತನಾಡುತ್ತಿದ್ದಾರೆ.
“ಬಾಬರಿ ಮಸೀದಿ ತೀರ್ಪಿನ ಸಂಕೀರ್ಣತೆಯಿಂದಾಗಿ ನಾನು ದೇವರ ಎದುರು ಕುಳಿತು ಪ್ರಾರ್ಥಿಸಿದೆ. ದೇವರ ಅನುಗ್ರಹದಂತೆ ತೀರ್ಪು ಬರೆದೆ” ಎಂದು ಚಂದ್ರಚೂಡ್ ಹೇಳಿಜಕೊಂಡಿದ್ದರು. ಅದಾದ ಬಳಿ, “ಅಯೋಧ್ಯಾ ತೀರ್ಪು ನಂಬಿಕೆಯ ಆಧಾರದಲ್ಲಿ ಇಲ್ಲ. ಸಾಕ್ಷ್ಯಗಳು ಮತ್ತು ಕಾನೂನಿನ ತತ್ವಗಳ ಆಧಾರದ ಮೇಲೆ ನೀಡಲಾಗಿದೆ. 1,045 ಪುಟಗಳ ತೀರ್ಪನ್ನು ಹೆಚ್ಚಿನರು ಓದದೇ ಟೀಕಿಸುತ್ತಾರೆ” ಎಂದು ಮತ್ತೊಂದು ಹೇಳಿಕೆ ನೀಡಿದ್ದರು. ಇದೀಗ, ಕಳೆದ ವಾರ, “ಬಾಬರಿ ಮಸೀದಿಯ ನಿರ್ಮಾಣವೇ (1528ರಲ್ಲಿ) ಶ್ರೀರಾಮನ ಜನ್ಮಸ್ಥಳವೆಂದು ನಂಬಲಾಗಿರುವ ಸ್ಥಳದ ಅಪವಿತ್ರೀಕರಣ ಕೃತ್ಯವಾಗಿತ್ತು” ಎಂದು ಹೇಳಿಕೆ ನೀಡಿದ್ದಾರೆ.
ಅವರ ನಿರಂತರ ಹೇಳಿಕೆಗಳು ವಿವಾದ ಮತ್ತು ಚರ್ಚೆಗಳಿಗೆ ಗುರಿಯಾಗಿವೆ. ಚಂದ್ರಚೂಡ್ ಅವರು ತಮ್ಮ ವೈಯಕ್ತಿಯ ಅಭಿಪ್ರಾಯಗಳು ಮತ್ತು ಧೋರಣೆಗಳ ಆಧಾರದ ಮೇಲೆಯೇ ತೀರ್ಪು ಬರೆದಿದ್ದಾರೆ. ತೀರ್ಪಿನ ಮೇಲೆ ಪ್ರಭಾವ ಬೀರಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.
ಇದೇ ಸಮಯದಲ್ಲಿ, ಚಂದ್ರಚೂಡ್ ಭಾಗವಾಗಿದ್ದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ‘ಕ್ಯುರೇಟಿವ್ ಅರ್ಜಿ’ ಸಲ್ಲಿಸಬಹುದು ಎಂದು ಕಾನೂನು ತಜ್ಞ ಮೋಹನ್ ಗೋಪಾಲ್ ಹೇಳಿದ್ದಾರೆ. ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ನಡೆದ ‘ಸಿ.ಎಚ್ ಮೊಹಮ್ಮದ್ ಕೋಯಾ ರಾಷ್ಟ್ರೀಯ ವಿಚಾರ ಸಂಕಿರಣ’ದಲ್ಲಿ ಮಾತನಾಡಿದ ಅವರು, “ನ್ಯಾಯಾಲಯದ ತೀರ್ಪು ವಿಶ್ವಾಸಾರ್ಹವಾಗಿರಬೇಕು. ಚಂದ್ರಚೂಡ್ ಅವರ ಇತ್ತೀಚಿನ ಹೇಳಿಕೆಗಳು ಅಯೋಧ್ಯೆ ತೀರ್ಪು ತಪ್ಪಾಗಿದೆ ಎಂಬುದನ್ನು ಸೂಚಿಸುತ್ತವೆ. ಚಂದ್ರಚೂಡ್ ಅವರ ಹೇಳಿಕೆಗಳ ಆಧಾರದ ಮೇಲೆ ನಾವು ಕ್ಯುರೇಟಿವ್ ಅರ್ಜಿ ಸಲ್ಲಿಸಬಹುದು” ಎಂದು ಹೇಳಿದ್ದಾರೆ.
ಏನಿದು ಕ್ಯುರೇಟಿವ್ ಅರ್ಜಿ?
ನ್ಯಾಯಾಲಯದ ತೀರ್ಪನ್ನು ಮರು ಪರಿಶೀಲಿಸುವಂತೆ ಸಲ್ಲಿಸಲಾಗುವ ಮರು ಪರಿಶೀಲನಾ ಅರ್ಜಿಗಳು ವಜಾಗೊಂಡ ನಂತರವೂ, ಅರ್ಜಿದಾರರು ನ್ಯಾಯಾಲಯಕ್ಕಾಗಿ ಸಲ್ಲಿಸಲು ಇವರು ವಿಶೇಷ ಕಾನೂನು ಮಾರ್ಗ – ಕ್ಯುರೇಟಿವ್ ಅರ್ಜಿ.2002ರಲ್ಲಿ ರೂಪಾ ಅಶೋಕ್ ಹುರ್ರಾ v/s ಅಶೋಕ್ ಹುರ್ರಾ ಮತ್ತು ಇತರರು ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಈ ವಿಶೇಷ ಕಾನೂನಿಗೆ ಆಕಾರ ನೀಡಿತ್ತು.
ಈ ಲೇಖನ ಓದಿದ್ದೀರಾ?: ಜಾತಿ ಸಮೀಕ್ಷೆ: ಒಬಿಸಿಗಳಿಗೆ ವಂಚಿಸಲು ಬಿಜೆಪಿ ನಾಯಕರ ಯತ್ನ?
ಪ್ರಕರಣದ ತೀರ್ಪಿನಲ್ಲಿ ಗಂಭೀರ ತಪ್ಪುಗಳು ಇದ್ದಲ್ಲಿ, ತೀರ್ಪನ್ನು ತಿದ್ದಿ, ಸರಿಯಾದ ತೀರ್ಪು ನೀಡುವ ಉದ್ದೇಶದಿಂದ ನ್ಯಾಯಾಲಯವು ತನ್ನ ಅಂತರ್ಗತ ಧಿಕಾರವನ್ನು ಬಳಸಿ ಕ್ಯುರೇಟಿವ್ ಅರ್ಜಿ ಸ್ವೀಕರಿಸಲು ಅವಕಾಶವಿದೆ.
ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸುವ ಅರ್ಜಿದಾರರು ಮೊದಲು ಪರಿಶೀಲನಾ ಅರ್ಜಿಯಲ್ಲಿ ತಮ್ಮ ಆಧಾರಗಳನ್ನು ಮಂಡಿಸಿದ್ದು, ಆ ಅರ್ಜಿ ವಜಾಗೊಂಡಿರಬೇಕು. ಕ್ಯುರೇಟಿವ್ ಅರ್ಜಿಯು ಹಿರಿಯ ವಕೀಲರಿಂದ ಪ್ರಮಾಣೀಕರಿಸಬೇಕು. ಆ ಅರ್ಜಿಯನ್ನು ಸುಪ್ರೀಂ ಕೋರ್ಟ್ನ ಮೂವರು ಹಿರಿಯ ನ್ಯಾಯಮೂರ್ತಿಗಳಿಗೆ ಹಾಗೂ ಸಾಧ್ಯವಿದ್ದರೆ ವಿವಾದಾತ್ಮಕ ತೀರ್ಪು ನೀಡಿದ ನ್ಯಾಯಮೂರ್ತಿಗೂ ನೀಡಲು ಅವಕಾಶವಿದೆ.




