“ಸುಂದರವಾದ ಮಹಿಳೆಯರು ಪುರುಷರು ಗಮನ ಬೇರೆಡೆ ಸೆಳೆಯುವಂತೆ ಮಾಡುತ್ತಾರೆ. ಇದು ಅತ್ಯಾಚಾರಕ್ಕೆ ಕಾರಣವಾಗಬಹುದು” ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಫೂಲ್ ಸಿಂಗ್ ಬರಯ್ಯ ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ. ‘ಅತ್ಯಾಚಾರಕ್ಕೆ ಸುಂದರ ಹುಡುಗಿಯರೇ ಕಾರಣ’ ಎಂಬ ಶಾಸಕರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಜತೆಗೆ ಎಸ್ಸಿ, ಎಸ್ಟಿ ಮತ್ತು ಒಬಿಸಿ ಮಹಿಳೆಯರ ಮೇಲಿನ ಅತ್ಯಾಚಾರಕ್ಕೂ ಧಾರ್ಮಿಕ ಗ್ರಂಥಗಳಿಗೂ ನಂಟು ಕಲ್ಪಿಸಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ಬುಕ್ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ “ರಸ್ತೆಯಲ್ಲಿ ನಡೆಯುವ ಯಾವುದೇ ಪುರುಷ ಸುಂದರ ಮಹಿಳೆಯನ್ನು ನೋಡಿದಾಗ ವಿಚಲಿತನಾಗಬಹುದು. ಅದರಿಂದಾಗಿ ಅತ್ಯಾಚಾರ ಮಾಡಬಹುದು. ಇದು ಅತ್ಯಾಚಾರದ ಸಿದ್ಧಾಂತ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ರೈತ ಮಹಿಳೆಯ ಕ್ಷಮೆಗೆ ಕಂಗನಾ ಅರ್ಹರೇ?
ಕೆಲವು ಧರ್ಮಗ್ರಂಥಗಳು ಆಧ್ಯಾತ್ಮಿಕ ಪ್ರತಿಫಲ ಸಿಗಬೇಕಾದರೆ ಅತ್ಯಾಚಾರ ಮಾಡಬೇಕೆಂದು ಹೇಳುತ್ತದೆ ಎಂದೂ ಹೇಳಿದ್ದಾರೆ. ಯಾವುದೇ ನಿರ್ದಿಷ್ಟ ಧರ್ಮವನ್ನು ಉಲ್ಲೇಖಿಸದ ಸಿಂಗ್, “ಯಾವುದೇ ವ್ಯಕ್ತಿ ತೀರ್ಥಯಾತ್ರೆ ಮಾಡಲು ಸಾಧ್ಯವಾಗದಿದ್ದರೆ, ಆಧ್ಯಾತ್ಮಿಕವಾಗಿ ಪ್ರತಿಫಲ ಪಡೆಯಲು ದಲಿತ ಅಥವಾ ಬುಡಕಟ್ಟು ಮಹಿಳೆಯರೊಂದಿಗೆ ಸಂಭೋಗ ಮಾಡುವುದು ಪರ್ಯಾಯ ಮಾರ್ಗವಾಗಿದೆ. ಈ ಜಾತಿಯ ವ್ಯಕ್ತಿಯೊಂದಿಗೆ ಸಂಭೋಗ ಮಾಡಿದರೆ ತೀರ್ಥಯಾತ್ರೆಯ ಆಧ್ಯಾತ್ಮಿಕ ಪ್ರತಿಫಲ ಸಿಗುತ್ತದೆ ಎಂದು ಧಾರ್ಮಿಕ ಗ್ರಂಥದಲ್ಲಿ ಬರೆಯಲಾಗಿದೆ. ಆದ್ದರಿಂದಾಗಿ ಅತ್ಯಾಚಾರ ಮಾಡಲಾಗುತ್ತದೆ” ಎಂದು ಹೇಳಿಕೊಂಡಿದ್ದಾರೆ.
ಇದೇ ಕಾರಣದಿಂದಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿಗಳ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿಕೊಂಡ ಕಾಂಗ್ರೆಸ್ ಶಾಸಕ, ಆದಿವಾಸಿ, ಒಬಿಸಿ ಮಹಿಳೆಯರ ಸೌಂದರ್ಯದ ಬಗ್ಗೆಯೂ ಮಾತನಾಡಿದ್ದಾರೆ. ಫೂಲ್ ಸಿಂಗ್ ಬರಯ್ಯ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ಮಹಿಳೆಯರು ಸುಂದರವಾಗಿಲ್ಲ! “ಯಾವ ಆದಿವಾಸಿ ಮಹಿಳೆ ತುಂಬಾ ಸುಂದರಿಯಾಗಿದ್ದಾಳೆ? ಯಾವ ಎಸ್ಸಿ ಮಹಿಳೆ ಸುಂದರವಾಗಿದ್ದಾಳೆ? ಯಾವ ಒಬಿಸಿ ಮಹಿಳೆ ಸುಂದರಿ? ಆದರೂ ಅತ್ಯಾಚಾರ ಏಕೆ ಸಂಭವಿಸುತ್ತದೆ? ಅವರ ಧರ್ಮಗ್ರಂಥಗಳಲ್ಲಿ ಈ ಸೂಚನೆಗಳನ್ನು ನೀಡಲಾಗಿದೆ” ಎಂದು ಹೇಳಿಕೊಂಡಿದ್ದಾರೆ.
ಇನ್ನು ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ ನಡೆಯವುದಕ್ಕೂ ಇದೇ ಕಾರಣ ಎಂದು ಶಾಸಕ ಹೇಳಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಮಹಿಳೆಯ ಒಪ್ಪಿಗೆಯಿಲ್ಲದೆ ಒಬ್ಬನೇ ವ್ಯಕ್ತಿ ಅತ್ಯಾಚಾರ ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಅತ್ಯಾಚಾರ ಸಂತ್ರಸ್ತೆಯರನ್ನೇ ದೂಷಿಸುವಂತಹ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ‘ಅತ್ಯಾಚಾರ ತಪ್ಪಿಸಬೇಕೆಂದರೆ ಮನೆಯಲ್ಲೇ ಇರಿ’: ಮಹಿಳಾ ವಿರೋಧಿ ವಿವಾದಾತ್ಮಕ ಪೋಸ್ಟರ್ ಹಾಕಿದ ಗುಜರಾತ್ ಪೊಲೀಸರು
ಸದ್ಯ ಕಾಂಗ್ರೆಸ್ ಶಾಸಕರ ಮಹಿಳಾ ವಿರೋಧಿ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಬಿಜೆಪಿ ಈ ವಿಚಾರವನ್ನು ರಾಜಕೀಯವಾಗಿ ಕೈಗೆತ್ತಿಕೊಂಡಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, “ಇಂತಹ ನಾಯಕರನ್ನು ರಾಹುಲ್ ಗಾಂಧಿ ಅವರನ್ನು ಪಕ್ಷದಿಂದ ಹೊರಹಾಕುತ್ತಾರೆ ಎಂದು ನಾನು ಭಾವಿಸುತ್ತೇನೆ. ಈ ಮೂಲಕ ಗಾಂಧಿ ಸಮಾಜದ ಇತರ ವರ್ಗಗಳ ಬಗ್ಗೆ ಗೌರವ ಹೊಂದಿದ್ದಾರೆಂದು ಎಂದು ತೋರಿಸಬಹುದು. ಬರಯ್ಯ ಹೇಳಿಕೆಯನ್ನು ನಾನು ಖಂಡಿಸುತ್ತೇನೆ” ಎಂದು ಹೇಳಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. “ಯಾವುದೇ ರೀತಿಯಲ್ಲೂ ಅತ್ಯಾಚಾರವನ್ನು ಸಮರ್ಥಿಸಲು ಸಾಧ್ಯವಿಲ್ಲ. ಅತ್ಯಾಚಾರ ಮಾಡುವ ಯಾರಾದರೂ ಅಪರಾಧಿ. ಅದನ್ನು ಜಾತಿ ಅಥವಾ ಧರ್ಮದೊಂದಿಗೆ ನಂಟು ಕಲ್ಪಿಸಲಾಗದು. ಲೈಂಗಿಕ ದೌರ್ಜನ್ಯವು ಗಂಭೀರ ಅಪರಾಧವಾಗಿದ್ದು, ಅದನ್ನು ಸಮರ್ಥಿಸುವ ಯಾವುದೇ ಪ್ರಯತ್ನ ಸ್ವೀಕಾರಾರ್ಹವಲ್ಲ” ಎಂದಿದ್ದಾರೆ.





