ಚುನಾವಣಾ ವಸ್ತಿಲಿನಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಸರ್ಕಾರವು 3.89 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಿದೆ. ಬಜೆಟ್ನಲ್ಲಿ ನಿರುದ್ಯೋಗಿ ಯುವಜನರಿಗೆ ‘ಬಂಗ್ಲರ್ ಯುಬ-ಸಾಥಿ’ ಯೋಜನೆಯಡಿ ನೀಡಲಾಗುತ್ತಿರುವ ಶಿಷ್ಯವೇತನವನ್ನು 50% ಹೆಚ್ಚಿಸಿರುವುದಾಗಿ ಘೋಷಿಸಿದೆ. ಅಲ್ಲದೆ, ಮಹಿಳೆಯರಿಗೆ ‘ಲಕ್ಷ್ಮೀರ್ ಭಂಡಾರ್’ ಯೋಜನೆಯಡಿ ನೀಡಲಾಗುತ್ತಿದ್ದ ಸಹಾಯಧನವನ್ನು 1,500 ರೂ.ಗಳಿಗೆ ಹೆಚ್ಚಿಸಿದೆ.
ಬಜೆಟ್ ಮಂಡಿಸಿದ ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ, “ರಾಜ್ಯ ಸರ್ಕಾರಿ ನೌಕರರಿಗೂ 4%ರಷ್ಟು ತುಟ್ಟಿಭತ್ಯೆ ಹೆಚ್ಚಿಸಲಾಗಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಅರೆ-ಶಿಕ್ಷಕ ಮತ್ತು ಪೌರ ಸ್ವಯಂಸೇವಕರ ಗೌರವಧನವನ್ನು ಮಾಸಿಕ 1,000 ರೂಪಾಯಿಯಷ್ಟು ಹೆಚ್ಚಿಸಲಾಗಿದೆ” ಎಂದು ತಿಳಿಸಿದ್ದಾರೆ.
ಮನರೇಗಾ ಯೋಜನೆಯನ್ನು ಬುಡಮೇಲು ಮಾಡಿರುವ ಕೇಂದ್ರ ಸರ್ಕಾರಕ್ಕೆ ಮಮತಾ ಸರ್ಕಾರ ಸೆಡ್ಡು ಹೊಡೆದಿದ್ದು, ಬಂಗಾಳದಲ್ಲಿ ಜಾರಿಯಲ್ಲಿರುವ ‘ಕರ್ಮಶ್ರೀ ಯೋಜನೆ’ಯನ್ನು ‘ಮಹಾತ್ಮ ಶ್ರೀ’ ಎಂದು ಬದಲಿಸಿದೆ. ಅಲ್ಲದೆ, ಯೋಜನೆಯಡಿ ಗ್ರಾಮೀಣ ಭಾಗದ ಜನರಿಗ ನೀಡಲಾಗುತ್ತಿದ್ದ 75 ದಿನಗಳ ಕೆಲಸವನ್ನು 100 ದಿನಗಳಿಗೆ ಹೆಚ್ಚಿಸಿದೆ.
ಲಕ್ಷ್ಮೀರ್ ಭಂಡಾರ್ ಯೋಜನೆಗೆ 2021ರ ಚುನಾವಣೆಗೆ ಮುನ್ನ ಮಮತಾ ಚಾಲನೆ ನೀಡಿದ್ದರು. ಈ ಯೋಜನೆಯಡಿ ಫಲಾನುಭವಿ ಮಹಿಳೆಯರಿಗೆ ನೀಡುತ್ತಿದ್ದ ಮೊತ್ತವನ್ನು 1,000 ರೂ. ನಿಂದ 1,500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಬಜೆಟ್ನಲ್ಲಿನ ಪ್ರಮುಖ ಘೋಷಣೆಗಳು;
- ಲಕ್ಷ್ಮೀರ್ ಭಂಡಾರ್ ಯೋಜನೆಯಲ್ಲಿ ಹೆಚ್ಚಳ: ಮಹಿಳೆಯರಿಗೆ ಮಾಸಿಕ ಸಹಾಯಧನವನ್ನು 1,000 ರೂ.ನಿಂದ 1,500 ರೂ.ಗೆ ಹೆಚ್ಚಿಳ. 2021ರಿಂದ ಜಾರಿಯಲ್ಲಿದೆ)
- ಬಂಗ್ಲರ್ ಬಾರಿ ಯೋಜನೆ: ಬಡ ಕುಟುಂಬಗಳಿಗೆ ಪಕ್ಕಾ ಮನೆ ನಿರ್ಮಾಣಕ್ಕೆ 1.2 ಲಕ್ಷ ರೂ. ಸಹಾಯ.
- ಬಂಗ್ಲರ್ ಯುವ ಸಾಥಿ ಯೋಜನೆ: 21 ರಿಂದ 40 ವರ್ಷದ ನಿರುದ್ಯೋಗಿ ಯುವಜನರಿಗೆ ಮಾಸಿಕ ₹1,500 ಸಹಾಯಧನ. (2025ರ ಆಗಸ್ಟ್ನಿಂದ ಜಾರಿಯಲ್ಲಿದೆ).
- ಮಹಾತ್ಮಶ್ರೀ ಯೋಜನೆ: ರಾಜ್ಯದ ಸ್ವಂತ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ಕನಿಷ್ಠ ಉದ್ಯೋಗದ ದಿನಗಳು 75ರಿಂದ 100 ದಿನಗಳಿಗೆ ಏರಿಕೆ. ಸುಮಾರು 80 ಲಕ್ಷ ಜಾಬ್ ಕಾರ್ಡ್ ಫಲಾನುಭವಿಗಳಿಗೆ ಉದ್ಯೋಗ ಭರವಸೆ.
- ಪಥಶ್ರೀ / ರಸ್ತಾಶ್ರೀ ಯೋಜನೆ: ಗ್ರಾಮೀಣ ರಸ್ತೆ ಸುಧಾರಣೆಗೆ 1,500 ಕೋಟಿ ರೂ. ಹಂಚಿಕೆ.
- ನದಿ ಬಂಧನ್ ಯೋಜನೆ: ನದಿ ಕೊರೆತ ತಡೆಗಟ್ಟಲು ಹೈಡ್ರಾಲಜಿಕಲ್ ಮಾಡೆಲ್ ಆಧಾರಿತ ಯೋಜನೆಗೆ 200 ಕೋಟಿ ರೂ..
- ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ: ಮಾಸಿಕ ₹1,000 ಹೆಚ್ಚಳ, ಸ್ಮಾರ್ಟ್ಫೋನ್ ಖರೀದಿಗೆ 200 ಕೋಟಿ ರೂ..
- ರಾಜ್ಯ ಸರ್ಕಾರಿ ನೌಕರರಿಗೆ 4% DA ಹೆಚ್ಚಳ.
- ಗಿಗ್ ಕಾರ್ಮಿಕರನ್ನು ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಸೇರಿಸುವುದು.
- ರೈತರ ನೆರವಿಗಾಗಿ ಕೃಷಕ ಬಂಧು ಮತ್ತು ಇತರ ಕೃಷಿ ಯೋಜನೆಗಳು.




