ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇವೆ. ಈ ತಿಂಗಳ ಅಂತ್ಯದೊಳಗೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಈ ನಡುವೆ, ಎಸ್ಐಆರ್ ಪ್ರಕ್ರಿಯೆಯಲ್ಲಿ ‘ವಿಚಾರಣಾಧೀನ’ ಎಂದು ಗುರುತಿಸಲಾಗಿರುವ 60 ಲಕ್ಷ ಮತದಾರರ ಭವಿಷ್ಯ ಅತಂತ್ರವಾಗಿದೆ. ಅವರು ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸುವರೇ ಎಂಬ ಪ್ರಶ್ನೆಗೆ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಮೌನ ಪ್ರದರ್ಶಿಸಿದ್ದಾರೆ. ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ.
ಮಂಗಳವಾರ, ಜ್ಞಾನೇಶ್ ಕುಮಾರ್ ಅವರು ಕೋಲ್ಕತ್ತಾಗೆ ಭೇಟಿ ನೀಡಿದ್ದರು. ಸುದ್ದಿಗೋಷ್ಠಿಯನ್ನೂ ನಡೆಸಿದರು. ಈ ವೇಳೆ, ]ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು 60 ಲಕ್ಷ ಮತದಾರರನ್ನು ವಿಚಾರಣಾಧೀನ ಎಂದು ಪಟ್ಟಿ ಮಾಡಿದ್ದಾರೆ. ಈಗ ಅವರ ಮತದಾರರ ದಾಖಲೆಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಆದೇಶದನ್ವಯ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲಾಗಿದೆ. ಆ ಅಧಿಕಾರಿಗಳು ಈ ಪ್ರಕರಣಗಳನ್ನು ಚುನಾವಣೆ ಆರಂಭವಾಗುದರೊಳಗೆ ಇತ್ಯರ್ಥಪಡಿಸದಿದ್ದಾರೆ, ಆಯೋಗವು ಚುನಾವಣೆಯಲ್ಲಿ ವಿಚಾರಣಾಧೀನ ಮತದಾರರಿಗೆ ಮತ ಚಲಾಯಿಸಲು ಅನುಮತಿಸುವುದೇ’ ಎಂದು ಪತ್ರಕರ್ತರು ಪ್ರಶ್ನಿಸಿದರು. ಆದರೆ, ಈ ಪ್ರಶ್ನೆಗೆ ಜ್ಞಾನೇಶ್ ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಮುಂದುವರೆದು, ಪ್ರಕರಣಗಳು ಇತ್ಯರ್ಥಿವಾಗದೆ ಬಾಕಿ ಉಳಿದಿರುವವರಿಗೆ ಮತದಾನದ ದಿನದಂದು ‘ಟೆಂಡರ್ಡ್ ವೋಟ್’ ಮೂಲಕ ಮತ ಚಲಾಯಿಸಲು ಅವಕಾಶ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೂ ಜ್ಞಾನೇಶ್ ಕುಮಾರ್ ನಿರ್ದಿಷ್ಟ ಉತ್ತರ ನೀಡಲಿಲ್ಲ. ಈ ಪ್ರಕ್ರಿಯೆಯು ಸುಪ್ರೀಂ ಕೋರ್ಟ್ ನಿರ್ದೇಶನಗಳ ಅನುಸಾರ ನಡೆಯುತ್ತಿದೆ ಎಂದಷ್ಟೇ ಹೇಳಿದ್ದಾರೆ.
“ವಿಚಾರಣಾ ಪ್ರಕ್ರಿಯೆಯುಸುಪ್ರೀಂ ಕೋರ್ಟ್ನ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ಕಲ್ಕತ್ತಾ ಹೈಕೋರ್ಟ್ ಇದನ್ನು ನಿರ್ವಹಿಸುತ್ತಿದೆ. ನ್ಯಾಯಾಂಗ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ನಾವು ಸುಪ್ರೀಂ ಕೋರ್ಟ್ನ ನಿರ್ದೇಶನಗಳನ್ನು ಪಾಲಿಸುತ್ತೇವೆ. ನ್ಯಾಯಾಂಗ ಅಧಿಕಾರಿಗಳಿಂದ ಪರಿಶೀಲಿಸಲ್ಪಟ್ಟ ನಂತರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗುವುದು” ಎಂದು ಅವರು ಹೇಳಿದ್ದಾರೆ.
ಪೂರಕ ಪಟ್ಟಿಯ ಪ್ರಕಟಣೆಯ ಬಗ್ಗೆ ಮಾತನಾಡಿದ ಜ್ಞಾನೇಶ್, “ಸಂಬಂಧಪಟ್ಟ ನ್ಯಾಯಾಧೀಶರು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ. ಅದನ್ನು ಆಯೋಗದ ವೆಬ್ಸೈಟ್ನಲ್ಲಿಯೂ ಪ್ರಕಟಿಸಲಾಗುವುದು” ಎಂದು ಹೇಳಿದ್ದಾರೆ.
ಗಮನಾರ್ಹವಾಗಿ, ಫೆಬ್ರವರಿ 20 ರಂದು ನ್ಯಾಯಾಲಯವು ಪ್ರಕರಣಗಳನ್ನು ಇತ್ಯರ್ಥಪಡಿಸಲು ನ್ಯಾಯಾಂಗ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಫೆಬ್ರವರಿ 28 ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯ ಭಾಗವಾಗಲಿರುವ ಪೂರಕ ಪಟ್ಟಿಗಳನ್ನು ಪ್ರಕಟಿಸಲು ಆಯೋಗಕ್ಕೆ ಸೂಚಿಸಿತ್ತು. ಆದರೂ, ಇದುವರೆಗೆ ಯಾವುದೇ ಪೂರಕ ಪಟ್ಟಿ ಪ್ರಕಟವಾಗಿಲ್ಲ.
ಈ ಲೇಖನ ಓದಿದ್ದೀರಾ?: ಇರಾನ್ ಯುದ್ಧ | ಭಾರತದ ಕೃಷಿ ಉತ್ಪನ್ನ ವ್ಯಾಪಾರಕ್ಕೆ ಸವಾಲು; ದೇಶೀಯ ರೈತರಿಗೆ ಮತ್ತಷ್ಟು ಸಂಕಷ್ಟ
ಸುಪ್ರೀಂ ಕೋರ್ಟ್ಗೆ ಚುನಾವಣಾ ಆಯೋಗವು ಮಂಗಳವಾರ ನೀಡಿದ ಮಾಹಿತಿಯ ಪ್ರಕಾರ, “60 ಲಕ್ಷ ಪ್ರಕರಣಗಳಲ್ಲಿ ಈವರೆಗೆ ಸುಮಾರು 10.6 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಪೈಕಿ ಅರ್ಹರೆಂದು ಕಂಡುಬಂದವರನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ ಮತ್ತು ಕೆಲವರನ್ನು ಅನರ್ಹರೆಂದು ಘೋಷಿಸಿ ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಇನ್ನು, ಬಂಗಾಳ ಚುನಾವಣೆಯು ಎಷ್ಟು ಹಂತಗಳಲ್ಲಿ ನಡೆಯಲಿದೆ ಎಂಬ ಪ್ರಶ್ನೆಗೂ ಉತ್ತರಿಸಲು ಜ್ಞಾನೇಶ್ ನಿರಾಕರಿಸಿದ್ದಾರೆ. ಈ ನಿರ್ಧಾರವು ಕಾನೂನು ಮತ್ತು ಸುವ್ಯವಸ್ಥೆಯ ಮೌಲ್ಯಮಾಪನವನ್ನು ಅವಲಂಬಿಸಿರುತ್ತದೆ ಎಂದಷ್ಟೇ ಹೇಳಿದ್ದಾರೆ.
ಇದೆಲ್ಲದರ ನಡುವೆ, ಬಂಗಾಳದ ಆಡಳಿತಾರೂಢ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಚುನಾವಣಾ ಆಯೋಗ ಮತ್ತು ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದು, ಎಸ್ಐಆರ್ (SIR) ವಿಚಾರಣಾ ಪ್ರಕರಣಗಳ ಸ್ಥಿತಿಯನ್ನು ಪ್ರತಿಬಿಂಬಿಸುವ ಪೂರಕ ಮತದಾರರ ಪಟ್ಟಿಗಳನ್ನು ಪ್ರತಿದಿನ ಪ್ರಕಟಿಸುವಂತೆ ಕೋರಿದ್ದಾರೆ.
“ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮತದಾರರು ಮತ್ತು ಸಂಬಂಧಪಟ್ಟವರು ಹಕ್ಕುಗಳು ಮತ್ತು ಆಕ್ಷೇಪಣೆಗಳ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಅನುವಾಗುವಂತೆ, ವಿಚಾರಣೆಯ ಫಲಿತಾಂಶಗಳನ್ನು ಒಳಗೊಂಡ ಪೂರಕ ಮತದಾರರ ಪಟ್ಟಿಗಳನ್ನು ಪ್ರತಿದಿನ ಪ್ರಕಟಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ” ಎಂದು ಅವರು ಪತ್ರದಲ್ಲಿ ನೆನಪಿಸಿದ್ದಾರೆ.




