ಮುಂದಿನ ತಿಂಗಳು (ಏಪ್ರಿಲ್) ನಡೆಯಲಿರುವ ಪಶ್ಚಿಮ ಬಂಗಾಳ ಚುನಾವಣೆಗೆ ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿಲ್ಲ. ಆದಾಗ್ಯೂ, ಪಕ್ಷದ ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಸುಮಾರು 30 ವರ್ಷಗಳ ಬಳಿಕ ಮತ್ತೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಸ್ಪರ್ಧೆಯ ಇರಾದೆ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಧೀರ್ ಚೌಧರಿ, “ನನ್ನ ಪಕ್ಷವು ನಾನು ಬಹರಾಂಪುರದಿಂದ ಸ್ಪರ್ಧಿಸಬೇಕೆಂದು ಬಯಸುತ್ತಿದೆ. ಒಬ್ಬ ಪಕ್ಷದ ಕಾರ್ಯಕರ್ತನಾಗಿ ನಾನು ಪಕ್ಷದ ನಿರ್ಧಾರವನ್ನು ಪಾಲಿಸುತ್ತೇನೆ. ಏಕೆಂದರೆ, ಇದು ಕೇವಲ ನನ್ನ ಆಯ್ಕೆಯಲ್ಲ, ಬದಲಾಗಿ ನನ್ನ ಪಕ್ಷದ ಇಚ್ಛೆಯೂ ಆಗಿದೆ. ನಾನು ಸಂಸದೀಯ ರಾಜಕಾರಣದಲ್ಲಿ ಅನುಭವ ಹೊಂದಿದ್ದರೂ, ಬಹರಾಂಪುರ ವಿಧಾನಸಭಾ ಕ್ಷೇತ್ರವು ನಾನು ಹಿಂದೆ ಪ್ರತಿನಿಧಿಸುತ್ತಿದ್ದ ಬಹರಾಂಪುರ ಲೋಕಸಭಾ ಕ್ಷೇತ್ರದ ಅಡಿಯಲ್ಲೇ ಬರುತ್ತದೆ. ಹಾಗಾಗಿ, ಇಲ್ಲಿಗೆ ನಾನು ಹೊರಗಿನವನಲ್ಲ,” ಎಂದಿದ್ದಾರೆ.
“ನಾನು ಕಾಂಗ್ರೆಸ್ನ ಒಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷವು ನನಗೆ ಹೇಳಿದ್ದನ್ನು ಮಾಡುತ್ತೇನೆ. ಬಂಗಾಳದ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಧ್ವಜವನ್ನು ಎತ್ತಿ ಹಿಡಿಯುವುದು ಮುಖ್ಯವಾಗಿದೆ. ಅದಕ್ಕಾಗಿಯೇ, ಪಕ್ಷವು ಎಲ್ಲ ಹಿರಿಯ ರಾಜ್ಯ ನಾಯಕರನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿದೆ. ಕೆಲವರು ಒಪ್ಪಿದರೆ, ಮತ್ತೆ ಕೆಲವರು ಒಪ್ಪಲಿಲ್ಲ. ನಾನು ಈ ಪಕ್ಷದ ನಿರ್ಧಾರವನ್ನು ಪಾಲಿಸಲು ನಿರ್ಧರಿಸಿದ್ದೇನೆ” ಎಂದು ಹೇಳಿದ್ದಾರೆ.
ಬಹರಾಂಪುರ ವಿಧಾನಸಭಾ ಕ್ಷೇತ್ರವನ್ನು ಪ್ರಸ್ತುತ ಬಿಜೆಪಿ ಶಾಸಕ ಸುಬ್ರತಾ ಮೊಯಿತ್ರಾ (ಕಾಂಚನ್) ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿ ಅವರನ್ನೇ ಮತ್ತೆ ಕಣಕ್ಕಿಳಿಸಿದೆ. ಈ ಕ್ಷೇತ್ರಕ್ಕೆ ಟಿಎಂಸಿಯಿಂದ ಬಹರಾಂಪುರ ಪುರಸಭೆಯ ಅಧ್ಯಕ್ಷ ನಾರು ಗೋಪಾಲ್ ಮುಖರ್ಜಿ ಸ್ಪರ್ಧಿಸಿದ್ದಾರೆ.
ಅಧೀರ್ ಚೌಧರಿ ಅವರು ಮೊದಲು 1991ರಲ್ಲಿ ಮುರ್ಷಿದಾಬಾದ್ ಜಿಲ್ಲೆಯ ನಬಗ್ರಾಮ್ ಕ್ಷೇತ್ರದಿಂದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಸಿಪಿಐ(ಎಂ) ನಾಯಕ ಶಿಶಿರ್ ಕುಮಾರ್ ಸರ್ಕಾರ್ ವಿರುದ್ಧ ಸುಮಾರು 1,400 ಮತಗಳ ಅಂತರದಿಂದ ಸೋತಿದ್ದರು. ಬಳಿಕ, 1996ರಲ್ಲಿ ನಬಗ್ರಾಮ್ನಿಂದ ಮತ್ತೆ ಸ್ಪರ್ಧಿಸಿ ಜಯಗಳಿಸಿದರು. ಮೂರು ವರ್ಷಗಳ ನಂತರ, 1999ರಲ್ಲಿ ಬಹರಾಂಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದರು. ಅಂದಿನಿಂದ 2024ರವರೆಗೆ ಬಹರಾಂಪುರ ಕ್ಷೇತ್ರವನ್ನು ನಿರಂತರವಾಗಿ ಅವರು ಪ್ರತಿನಿಧಿಸುತ್ತಿದ್ದರು. ಆದರೆ, 2024ರ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿ, ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ವಿರುದ್ಧ ಸೋಲುಂಡಿದ್ದರು.
ಈ ಲೇಖನ ಓದಿದ್ದೀರಾ?: ಲಿಂಗತ್ವ ಅಲ್ಪಸಂಖ್ಯಾತರ ಅಸ್ಮಿತೆಯನ್ನೇ ಅಳಿಸುವ ಮಸೂದೆ: ಆತ್ಮಗೌರವಕ್ಕೆ ಕೊಡಲಿಪೆಟ್ಟು
ಇನ್ನು, ಕಾಂಗ್ರೆಸ್ 2021ರ ರಾಜ್ಯ ಚುನಾವಣೆಯನ್ನು ಎಡರಂಗದೊಂದಿಗೆ ಸೀಟು ಹಂಚಿಕೆ ಮಾಡಿಕೊಂಡು ಸ್ಪರ್ಧಿಸಿತ್ತು. ಅದು 91 ಸ್ಥಾನಗಳಲ್ಲಿ ಸ್ಪರ್ಧಿಸಿತ್ತಾದರೂ, 294 ಸದಸ್ಯ ಬಲದ ವಿಧಾನಸಭೆಯಲ್ಲಿ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ.
ಕಾಂಗ್ರೆಸ್ ಮೂಲಗಳ ಪ್ರಕಾರ, ಅಧೀರ್ ಚೌಧರಿ ಅವರಲ್ಲದೆ ಇನ್ನೂ ಅನೇಕ ಹಿರಿಯ ಪಕ್ಷದ ನಾಯಕರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ಗೆ ಮರಳಿದ ಮಾಜಿ ಟಿಎಂಸಿ ರಾಜ್ಯಸಭಾ ಸಂಸದೆ ಮೌಸಮ್ ಬೆನಜೀರ್ ನೂರ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ಶುಭಂಕರ್ ಸರ್ಕಾರ್ ಹಾಗೂ ಬಂಗಾಳದ ಏಕೈಕ ಕಾಂಗ್ರೆಸ್ ಸಂಸದ ಇಶಾ ಖಾನ್ ಚೌಧರಿ ಕೂಡ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ.




