ಪಶ್ಚಿಮ ಬಂಗಾಳದ ರಾಜಕೀಯ ಮತ್ತು ಚುನಾವಣೆಗಳು ಯಾವಾಗಲೂ ಕುತೂಹಲ ಮತ್ತು ಸಂಘರ್ಷಗಳ ಕೇಂದ್ರವೇ ಆಗಿರುತ್ತದೆ. 2026ರ ವಿಧಾನಸಭಾ ಚುನಾವಣೆಗೆ ಈ ವರ್ಷದ ಮಾರ್ಚ್-ಏಪ್ರಿಲ್ನಲ್ಲಿ ಚುನಾವಣೆಗಳು ನಡೆಯುವ ಸಾಧ್ಯತೆಗಳಿವೆ. 15 ವರ್ಷಗಳಿಂದ ಬಂಗಾಳದಲ್ಲಿ ಆಡಳಿತ ನಡೆಸುತ್ತಿರುವ ಮಮತಾ ಬ್ಯಾನರ್ಜಿ ಅವರ ಟಿಎಂಸಿ, ಮತ್ತೊಮ್ಮೆ ಅಧಿಕಾರ ಉಳಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದೆ. ದೀದಿ ಕೋಟೆಯನ್ನು ಭೇದಿಸಿ, ಅಧಿಕಾರವನ್ನು ಕಸಿದುಕೊಳ್ಳಲು ಬಿಜೆಪಿಯೂ ಸರ್ವ ಪ್ರಯತ್ನ ನಡೆಸುತ್ತಿದೆ. ಉಭಯ ಪಕ್ಷಗಳು ತಂತ್ರ-ಪ್ರತಿತಂತ್ರ ಎಣೆಯುತ್ತಿವೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು 3ನೇ ಆಟಗಾರರಾಗಿದ್ದು, ತಮ್ಮ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿವೆ.
ಈ ಬಾರಿಯ ಚುನಾವಣೆಯಲ್ಲಿ ಟಿಎಂಸಿ ಎರಡು ಪ್ರಮುಖ ದಾಳಗಳನ್ನು ಅಖಾಡದಲ್ಲಿ ಉರುಳಿಸಿದೆ. ಒಂದು) ಬಂಗಾಳಿ ಅಸ್ಮಿತೆ ಮತ್ತು ಡೆಲ್ಲಿಯ ಬಿಜೆಪಿ. ಎರಡು) ಜ್ಯಾತ್ಯತೀತತೆ ಮತ್ತು ಕೋಮುವಾದ. ಬಿಜೆಪಿಯನ್ನು ಹೊರಗಿನವರು ಮತ್ತು ಬಂಗಾಳ ಅಸ್ಮಿತೆ ಗಂಧ-ಗಾಳಿ ಅರಿಯದವರು. ಮಾತ್ರವಲ್ಲ, ಕೋಮು ದ್ವೇಷವನ್ನೇ ಜೀವಾಳ ಮಾಡಿಕೊಂಡು, ಬಂಗಾಳ ಜಾತ್ಯತೀತತೆಯನ್ನು ದ್ವೇಷ ಜ್ವಾಲೆಗೆ ದೂಡುವವರು ಎಂಬ ಆಲೋಚನೆಯನ್ನು ಜನರ ಮನದೊಳಗೆ ಇಳಿಸಲು ಟಿಎಂಸಿ ಮುಂದಾಗಿದೆ.
ಮುಖ್ಯವಾಗಿ, ಬಂಗಾಳದ ಸಂಸ್ಕೃತಿ ಮತ್ತು ರಾಜಕೀಯವು ಶತಮಾನಗಳಿಂದಲೂ ದ್ವಂದ್ವಗಳಿಂದಲೇ (Binaries) ಕೂಡಿದೆ. ಬಂಗಾಳವು ಬೌದ್ಧಿಕವಾಗಿ ಶ್ರೇಷ್ಠ ಎಂಬ ಹೆಗ್ಗಳಿಕೆ ಹೊಂದಿದ್ದರೂ, ಕೆಲವು ಕಟ್ಟಳೆಗಳನ್ನು ಸಿಲುಕೊಂಡಿವೆ. ತಮ್ಮ ಸೀಮಿತ ಪ್ರದೇಶವನ್ನು ಮೀರಿ ಆಲೋಚಿಸುವ ಅವಕಾಶವು ಬಂಗಾಳದಲ್ಲಿ ಕಡಿಮೆ ಇದೆ. ಪೂರ್ವ ಬಂಗಾಳದ ಮತ್ತು ಪಶ್ಚಿಮ ಬಂಗಾಳದ ಆದ್ಯತೆಗಳಿಗೂ ಪರಸ್ಪರ ತದ್ವಿರುದ್ಧವಾಗಿರುತ್ತವೆ. ಅದರಂತೆ, ರಾಜಕೀಯವೂ ದ್ವಂದ್ವಗಳನ್ನು ಪ್ರತಿಬಿಂಸುತ್ತದೆ.
ಇತ್ತೀಚೆಗೆ ‘ಐ-ಪ್ಯಾಕ್’ (I-PAC) ಸಂಸ್ಥೆ ಕಚೇರಿ ಮತ್ತು ಸಂಸ್ಥಾಪಕರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿತು. ಆಗ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಧ್ಯಪ್ರವೇಶಿಸಿದರು. ಚುನಾವಣೆಯಲ್ಲಿ ತಮ್ಮ ಪಕ್ಷದ ಆಂತರಿಕ ಮಾಹಿತಿಯನ್ನು ಕದಿಯಲು ಬಿಜೆಪಿ ನಡೆಸಿದ ದಾಳಿಯೆಂದು ಆರೋಪಿಸಿದರು. ಮಮತಾ ಮಧ್ಯಪ್ರವೇಶಿಕೆಯನ್ನು ಟಿಎಂಸಿ, ‘ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವ ಬಿಜೆಪಿಯ ಕುತಂತ್ರಕ್ಕೆ ಪ್ರತಿರೋಧ’ ಎಂದು ಕರೆದರೆ, ಬಿಜೆಪಿಗರು, ‘ಭ್ರಷ್ಟರನ್ನು ರಕ್ಷಿಸಲು ಮಾಡಿದ ಆಡಳಿತಾತ್ಮಕ ಹಸ್ತಕ್ಷೇಪ’ ಎಂದು ಬಣ್ಣಿಸಿದರು. ಈ ಎರಡು ರೀತಿಯ ವಾದ-ಪ್ರತಿವಾದದಲ್ಲಿ ಯಾವುದನ್ನು ಒಪ್ಪಿಕೊಳ್ಳಬೇಕು ಎಂದು ನಿರ್ಧರಿಸುವಲ್ಲಿ ಬಂಗಾಳದ ರಾಜಕೀಯ ಭೂದೃಶ್ಯವು ವಿರೋಧಾಭಾಸ ಮತ್ತು ಧ್ವಂದ್ವವನ್ನು ಹೊಂದಿತ್ತು.
ಸದ್ಯ, ಟಿಎಂಸಿ ತನ್ನ 15 ವರ್ಷಗಳ ಆಡಳಿತದಲ್ಲಿ ನಿರಂತರವಾಗಿ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದೆ. ಶಾರದಾ, ನಾರದಾ ಹಗರಣದಿಂದ ಹಿಡಿದು ಶಿಕ್ಷಕರ ನೇಮಕಾತಿ ಹಗರಣದವರೆಗಿನ ಆರೋಪಗಳು ಟಿಎಂಸಿಗೆ ಕಳಂಕದ ಮಸಿ ಬಳಿದಿವೆ. ಆದಾಗ್ಯೂ, ಪಕ್ಷವು ಜನರನ್ನು ಗೆಲ್ಲುತ್ತಲೇ ಬಂದಿದೆ. 2021ರ ಚುನಾವಣೆಯಲ್ಲಿ ಟಿಎಂಸಿ ವಿರುದ್ಧದ ಭ್ರಷ್ಟಾಚಾರಗಳನ್ನೇ ಬಿಜೆಪಿ ತನ್ನ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡು ಪ್ರಚಾರ ಮಾಡಿತು. ಆದರೂ, ಅತೀ ಹೆಚ್ಚು ಸ್ಥಾನಗಳನ್ನು ಗೆದ್ದು, ಟಿಎಂಸಿ ಅಧಿಕಾರಕ್ಕೆ ಮರಳಿತು. 2024ರ ಲೋಕಸಭೆ ಚುನಾವಣೆಯಲ್ಲಿಯೂ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಂಡಿತು. ಈ ಎರಡೂ ಚುನಾವಣೆಗಳಲ್ಲಿ ಬಿಜೆಪಿಯ ಭ್ರಷ್ಟಾಚಾರ ಆರೋಪದ ಪ್ರಚಾರಕ್ಕಿಂತ, ಟಿಎಂಸಿಯ ಬಂಗಾಳ ಸಂಸ್ಕೃತಿ ಮತ್ತು ಅಸ್ಮಿತೆಯ ಪ್ರಚಾರವು ಹೆಚ್ಚು ಕೆಲಸ ಮಾಡಿತು. ‘ಒಳಗಿನವರು-ಹೊರಗಿನವರು’, ‘ಬಂಗಾಳಿ-ಬಂಗಾಳೇತರ ಸಂಘರ್ಷ’ ಹಾಗೂ ‘ಉತ್ತರ ಭಾರತದ ಕೋಮು ರಾಜಕೀಯದ ವಿರುದ್ಧ ಬಂಗಾಳಿ ಸಮುದಾಯದ ಒಗ್ಗಟ್ಟು’ ಎಂಬ ಪ್ರತಿಪಾದನೆಯು ಟಿಎಂಸಿಗೆ ಮತಗಳನ್ನು ತಂದುಕೊಟ್ಟಿತು.
ಈಗಲೂ ಇದೇ ನಿರೂಪಣೆಯನ್ನು ಟಿಎಂಸಿ ಮುನ್ನೆಲೆಗೆ ತಂದಿದೆ. ಈ ಬಾರಿಯ ಚುನಾವಣೆಯಲ್ಲಿ ಜಾತ್ಯತೀತ ಟಿಎಂಸಿ ಮತ್ತು ಕೋಮುವಾದಿ ಬಿಜೆಪಿ ನಡುವಿನ ನೇರ ಸಂಘರ್ಷವೆಂದು ಮಮತಾ ಪಡೆ ಘೋಷಿಸಿದೆ. ಬಂಗಾಳದ ಅಸ್ಮಿತೆಯ ಬಗ್ಗೆಯೇ ಮಾತನಾಡುತ್ತಿದೆ. ಈ ನಿರೂಪಣೆಯು ಮೂರು ಪ್ರಮುಖ ಅಂಶಗಳನ್ನು ಎತ್ತಿ ತೋರುತ್ತದೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ನ ಅಭಿಕ್ ಭಟ್ಟಾಚಾರ್ಯ ಹೇಳುತ್ತಾರೆ;
ಮೊದಲನೆಯದಾಗಿ, ಬಂಗಾಳದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಇತಿಹಾಸದ ಪ್ರಮುಖ ವಿಚಾರವನ್ನು ಕಲಿಯುತ್ತಾರೆ; ಅದು, ಮುರ್ಷಿದಾಬಾದ್ನ ನವಾಬ ಸಿರಾಜ್-ಉದ್-ದೌಲನು ಮಿರ್ ಜಾಫರ್ನ ದ್ರೋಹದಿಂದ ಪ್ಲಾಸಿ ಕದನದಲ್ಲಿ ಸೋತಾಗ, ಬಂಗಾಳವು ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿತು. ಮಾತ್ರವಲ್ಲ, ಬ್ರಿಟಿಷ್ ಆಳ್ವಿಕೆಗೆ ಒಳಗಾಯಿತು. ಈ ಸರಳೀಕೃತ ಪಾಠದಲ್ಲಿ ಸಿರಾಜ್ನ ಆಡಳಿತಕ್ಕಿಂತ ಮಿರ್ ಜಾಫರ್ನ ದ್ರೋಹವು ಬಂಗಾಳಿಗಳ ಮನಸ್ಸಿನಲ್ಲಿ ಬೇರೂರಿದೆ. ಬಿಜೆಪಿ ನಾಯಕರನ್ನು ‘ಹೊರಗಿನವರು’ ಎಂಬುದಾಗಿ ಬಣ್ಣಿಸಲು ಬ್ಯಾನರ್ಜಿ, ಈ ‘ದ್ರೋಹ ಮತ್ತು ಹೊರಗಿನವರ ಆಕ್ರಮಣ’ ಎಂಬುದನ್ನು ಪದೇ-ಪದೇ ಬಳಸಿಕೊಳ್ಳುತ್ತಿದ್ದಾರೆ.
ಎರಡನೆಯದಾಗಿ, ಬಂಗಾಳಿ ಮತ್ತು ಬಂಗಾಳೇತರ ನಿರೂಪಣೆಗೆ ಆರ್ಥಿಕ ಮತ್ತು ರಾಜಕೀಯ ತರ್ಕಗಳಿವೆ. ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಕೋಲ್ಕತ್ತಾ ರಾಜಧಾನಿಯಾಗಿದ್ದಾಗ, ಅಲ್ಲಿ ಇಂಗ್ಲಿಷ್ ಶಿಕ್ಷಣದ ಅಲೆ ಎದ್ದಿತು. ಇದು ಮೇಲ್ಜಾತಿಯ ಇಂಗ್ಲಿಷ್ ವಿದ್ಯಾವಂತರ ‘ಭದ್ರಲೋಕ್’ (Bhadralok) ವರ್ಗವನ್ನು ಸೃಷ್ಟಿಸಿತು. ಈ ವರ್ಗವು ಕಚೇರಿಗಳಲ್ಲಿ 9 ರಿಂದ 5 ರವರೆಗಿನ ಕೆಲಸದ ಅವಧಿಯೊಂದಿಗೆ ನೆಮ್ಮದಿ ಕಂಡುಕೊಂಡಿತು. ವಿಜ್ಞಾನಿ ಪ್ರಫುಲ್ಲ ಚಂದ್ರ ರೇ ಅವರು ಬಂಗಾಳಿಗಳು ವ್ಯವಹಾರಗಳನ್ನು ಪ್ರಾರಂಭಿಸಬೇಕೆಂದು ಕರೆ ನೀಡಿದರೂ, ಸಾಂಸ್ಕೃತಿಕ ಅಹಂಕಾರದಲ್ಲಿದ್ದ ‘ಭದ್ರಲೋಕರು’ ಆ ಕಡೆ ಗಮನ ನೀಡಲಿಲ್ಲ. ಸ್ವಾತಂತ್ರ್ಯದ ನಂತರವೂ ಬಂಗಾಳೇತರರು (ಹೆಚ್ಚಾಗಿ ಮಾರ್ವಾಡಿಗಳು) ನಡೆಸುತ್ತಿದ್ದ ಕಚೇರಿಗಳಲ್ಲಿ ಕೆಲಸ ಮಾಡುವುದನ್ನು ಅವರು ಮುಂದುವರಿಸಿದರು. ಪರಿಣಾಮ, ಕೈಗಾರಿಕಾ ಬೆಳವಣಿಗೆ ಕುಂಠಿತವೂ ಆಗಿದೆ. ಈಗ ಈ ರಾಜ್ಯದಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಬರುವ ಕಾರ್ಮಿಕರು ಸೀಮಿತ ಸಂಪನ್ಮೂಲಗಳಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಬಿಜೆಪಿ ಇದನ್ನು ಹಿಂದೂ-ಮುಸ್ಲಿಂ ಸಂಘರ್ಷ ಎಂದು ನೋಡಿದರೆ, ಟಿಎಂಸಿ ಇದನ್ನು ಬಂಗಾಳಿ ಮತ್ತು ಬಂಗಾಳೇತರ ವಲಸಿಗರ ನಡುವಿನ ಸಾಂಸ್ಕೃತಿಕ ಸಂಘರ್ಷವೆಂದು ಪ್ರತಿಪಾದಿಸುತ್ತದೆ.
ಈ ಲೇಖನ ಓದಿದ್ಧೀರಾ?: ಸುದ್ದಿ ವಿವರ | ಆರ್ಥಿಕ ಸಮೀಕ್ಷೆ ಎಂದರೇನು ಮತ್ತು ಅದು ಏಕೆ ಮುಖ್ಯ?
ಮೂರನೆಯದಾಗಿ, ದೇಶ ವಿಭಜನೆ ಮತ್ತು ಬಾಂಗ್ಲಾದೇಶ ಯುದ್ಧದ ನೆನಪುಗಳು. ‘ಬಂಗಾಳಿ ಮುಸ್ಲಿಮರು ಬಾಂಗ್ಲಾದೇಶಿಗಳು’ ಎಂಬ ನಿರೂಪಣೆಯ ಮೂಲಕ ಬಂಗಾಳಿ ಹಿಂದುಗಳಲ್ಲಿ ಕೋಮು ಭಾವನೆಯನ್ನು ಪ್ರಚೋದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ, ವಿಭಜನೆಯ ಸಮಯದಲ್ಲಿ ‘ನಮ್ಮ ಮುಸ್ಲಿಂ ನೆರೆಹೊರೆಯವರು ನಮ್ಮನ್ನು ಜನಸಂದಣಿಯಿಂದ ಪಾರು ಮಾಡಿದರು’ ಎಂಬಂತಹ ಮಾನವೀಯ ಕಥೆಗಳೂ ಇವೆ. ಇದರ ಜೊತೆಗೆ ಕಮ್ಯುನಿಸ್ಟ್ ರಾಜಕೀಯವು ನಗರ ಪ್ರದೇಶಗಳಲ್ಲಿ ಜಾತ್ಯತೀತ ಸಹಬಾಳ್ವೆಗೆ ದಾರಿ ಮಾಡಿಕೊಟ್ಟಿತ್ತು. ಈ ಜಾತ್ಯತೀತ ರಾಜಕೀಯದ ಕಲ್ಪನೆಯು ಬಿಜೆಪಿಯ ವಿಭಜನೆಯ ರಾಜಕೀಯಕ್ಕಿಂತ ಬ್ಯಾನರ್ಜಿ ಅವರಿಗೆ ಹೆಚ್ಚಿನ ಲಾಭ ತಂದುಕೊಟ್ಟಿದೆ.
ಇವೆಲ್ಲವೂ ಬಂಗಾಳಿ ಮತದಾರನನ್ನು ಎರಡು ರಾಜಕೀಯ ದ್ವಂದ್ವದಲ್ಲಿ ಸಿಲುಕಿಸಿವೆ: ‘ಜಾತ್ಯತೀತ ಟಿಎಂಸಿ ವರ್ಸಸ್ ಕೋಮುವಾದಿ ಬಿಜೆಪಿ’; ‘ಪ್ರಾದೇಶಿಕವಾದ ವರ್ಸಸ್ ಧಾರ್ಮಿಕ ರಾಜಕೀಯ’. ಕಾಂಗ್ರೆಸ್ ಮತ್ತು ಎಡಪಕ್ಷಗಳು ಈ ದ್ವಂದ್ವವನ್ನು ಮೀರಿ ಪರ್ಯಾಯ ಜಾಗವನ್ನು ಸೃಷ್ಟಿಸಲು ಸಂಪೂರ್ಣವಾಗಿ ವಿಫಲವಾಗಿವೆ. ಪರಿಣಾಮವಾಗಿ, ಬಂಗಾಳದ ಭವಿಷ್ಯವು ಬಿಜೆಪಿ ಮತ್ತು ಟಿಎಂಸಿ ನಡುವಿನ ಸಂಘರ್ಷದಲ್ಲಿದೆ. ಬಂಗಾಳಿಗಳು ಪ್ರದೇಶಿಕವಾದ ಮತ್ತು ಜಾತ್ಯತೀತೆಯನ್ನು ಎತ್ತಿಹಿಡಿದರೆ, ಬಿಜೆಪಿ ಕೋಮು ರಾಜಕಾರಣಕ್ಕೆ ಸರಿಯಾದ ಪೆಟ್ಟು ಬೀಳದಿದೆ. ಒಂದು ವೇಳೆ, ಬಾಂಗ್ಲಾದಲ್ಲಿ ನಡೆಯುತ್ತಿರುವ ಘರ್ಷಣೆಗಳ ಕಾರಣಕ್ಕಾಗಿ ಬಂಗಾಳಿಗರು ಬಿಜೆಪಿಯ ಕೋಮು ರಾಜಕೀಯವನ್ನು ಒಪ್ಪಿಕೊಂಡರೆ, ಬಂಗಾಳವು ತನ್ನ ಐತಿಹಾಸಿಕ ಅಸ್ಮಿತೆಯನ್ನು ಕಳೆದುಕೊಳ್ಳಲಿದೆ. ಬಂಗಾಳದ ಭವಿಷ್ಯವು ಬಂಗಾಳಿ ಮತದಾರರ ಕೈಯಲ್ಲಿದೆ.




