ಲೋಕಸಭೆಯಲ್ಲಿ ಮಂಗಳವಾರ ನಡೆದ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ಹಾಗೂ ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ಮತಗಳ್ಳತನ ಅತೀ ದೊಡ್ಡ ದೇಶ ವಿರೋಧಿ ಕೃತ್ಯ. ಇದನ್ನು ಮಹಾತ್ಮ ಗಾಂಧೀಜಿ ಕೂಡ ಪ್ರತಿಪಾದಿಸಿದ್ದರು. ಹರಿಯಾಣದ ಮತದಾರರ ಪಟ್ಟಿಯಲ್ಲಿ ಒಬ್ಬ ವಿದೇಶಿ ಮಹಿಳೆಯ ಹೆಸರು 22 ಬಾರಿ ಕಾಣಿಸಿಕೊಂಡಿತ್ತು. ಈ ಕಳ್ಳತನವನ್ನು ಕೇಂದ್ರ ಚುನಾವಣಾ ಆಯೋಗ ಕೂಡ ಖಚಿತಪಡಿಸಿದೆ. ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ ಸೇರಿದಂತೆ ದೇಶದ ಬಹುತೇಕ ಕಡೆ ಮತಕಳ್ಳತನವಾಗಿರುವುದರ ಬಗ್ಗೆ ನಾವು ಪುರಾವೆ ಸಹಿತ ಬಹಿರಂಗಪಡಿಡಿದ್ದೇವೆ” ಎಂದು ರಾಹುಲ್ ಗಾಂಧಿ ಹೇಳಿದರು.
“ಭಾರತೀಯ ಪ್ರಜಾಪ್ರಭುತ್ವಕ್ಕೆ ಹಾನಿ ಮಾಡಲು ಬಿಜೆಪಿ ಚುನಾವಣಾ ಆಯೋಗವನ್ನು ನಿರ್ದೇಶಿಸುತ್ತಿದೆ ಮತ್ತು ಬಳಸುತ್ತಿದೆ. ಇಸಿಐ ಅಧಿಕಾರದಲ್ಲಿರುವವರೊಂದಿಗೆ ಚುನಾವಣೆಯನ್ನು ರೂಪಿಸಲು ಕುಮ್ಮಕ್ಕು ನೀಡುತ್ತಿದೆ” ಎಂದು ಹೇಳಿದ ಅವರು, ಪ್ರಧಾನಿ ಮತ್ತು ಗೃಹ ಸಚಿವರು ಚುನಾವಣಾ ಆಯುಕ್ತರನ್ನು ನೇಮಿಸುವಲ್ಲಿ ಏಕೆ ಅಷ್ಟೊಂದು ಆಸಕ್ತಿ ವಹಿಸುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಗಳು ಬದಲಾದರೂ ಉತ್ತರ ಕರ್ನಾಟಕದ ಜನರ ಬದುಕು ಬದಲಾಗಲಿಲ್ಲವೇಕೆ?
“ಪ್ರಜಾಪ್ರಭುತ್ವದ ಪ್ರಮುಖ ಅಂಗಗಳಾದ ಚುನಾವಣಾ ಆಯೋಗ (ಇಸಿಐ), ಜಾರಿ ನಿರ್ದೇಶನಾಲಯ (ಇಡಿ), ಎನ್ಐಎ ಮತ್ತು ಸಿಬಿಐನಂತಹ ಸಂಸ್ಥೆಗಳು ಆರ್ಎಸ್ಎಸ್ ಮತ್ತು ಬಿಜೆಪಿಯಿಂದ ಪ್ರಭಾವಿತವಾಗಿವೆ ಅಥವಾ ವಶಪಡಿಸಿಕೊಳ್ಳಲ್ಪಟ್ಟಿವೆ ಎಂದು ರಾಹುಲ್ ಗಾಂಧಿ ನೇರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣಾ ಆಯೋಗದ ಮುಕ್ತ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರನ್ನು ತೆಗೆದುಹಾಕಲು ನರೇಂದ್ರ ಮೋದಿ ಸರ್ಕಾರ ಏಕೆ ಉದ್ದೇಶಿಸಿದೆ. ನಿಮಗೆ ಸಿಜೆಐ ಮೇಲೆ ನಂಬಿಕೆ ಇಲ್ಲವೇ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಸಮಾನತೆ ನಂಬದ ಆರ್ಎಸ್ಎಸ್
“ಆರ್ಎಸ್ಎಸ್ ಸಮಾನತೆಯನ್ನು ನಂಬುವುದಿಲ್ಲ, ಅವರು ಶ್ರೇಣೀಕೃತ ವ್ಯವಸ್ಥೆಯನ್ನು ನಂಬುತ್ತಾರೆ. ಅದರ ಉನ್ನತ ಸ್ಥಾನದಲ್ಲಿ ತಾವಿರಬೇಕು ಎಂದು ಭಾವಿಸುತ್ತಾರೆ. ಇದೇ ರೀತಿ, ದೇಶದ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಆಯ್ಕೆಯು ಅರ್ಹತೆಗಿಂತ ಹೆಚ್ಚಾಗಿ ಒಂದು ನಿರ್ದಿಷ್ಟ ಸಂಸ್ಥೆಯೊಂದಿಗೆ ನಂಟು ಹೊಂದಿದೆ” ಎಂದು ರಾಹುಲ್ ಗಾಂಧಿ ಆರ್ಎಸ್ಎಸ್ ವಿರುದ್ಧ ಟೀಕಿಸಿದರು.
“ಮಹಾತ್ಮ ಗಾಂಧಿ ಅವರ ಖಾದಿ ಕೇವಲ ಬಟ್ಟೆಯಲ್ಲ, ಅದು ಭಾರತದ ಜನರ ಅಭಿವ್ಯಕ್ತಿ. ನಮ್ಮ ರಾಷ್ಟ್ರದ 150 ಕೋಟಿ ಜನರ ವಸ್ತ್ರವಾಗಿದೆ. ದೇಶದ ಯಾವುದೇ ಸಾಧನೆಗಳು ಅಸ್ತಿತ್ವದಲ್ಲಿರಲು ಮತದಾನವೇ ಕಾರಣ” ಎಂದು ರಾಹುಲ್ ಗಾಂಧಿ ಹೇಳಿದರು.





