ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಬುಧವಾರ ಬಿಹಾರದಲ್ಲಿ ಎನ್ಡಿಎ ಸರ್ಕಾರ ಪುನಃ ಅಧಿಕಾರಕ್ಕೆ ಬರುತ್ತದೆ ಎಂಬ ಚುನಾವಣೋತ್ತರ ಸಮೀಕ್ಷೆಗಳನ್ನು ತಿರಸ್ಕರಿಸಿದ್ದು, ಇಂತಹ ಊಹೆಗಳನ್ನು ಬಿಜೆಪಿ ಉನ್ನತ ನಾಯಕರ ನಿರ್ದೇಶನದಲ್ಲಿ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಪಾಟ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
“ಚುನಾವಣೋತ್ತರ ಸಮೀಕ್ಷೆಗಳಿಗೆ ಯಾವುದೇ ಅರ್ಥವಿಲ್ಲ. ಇದನ್ನು ಬಿಜೆಪಿ ಉನ್ನತ ನಾಯಕರ ಸೂಚನೆಯ ಮೇರೆಗೆ ಮಾಡಲಾಗಿದೆ” ಎಂದು ಆರ್ಜೆಡಿ ನಾಯಕ ಆರೋಪಿಸಿದರು.
ಮಂಗಳವಾರ ವಿವಿಧ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ಎನ್ಡಿಎ ಸರ್ಕಾರ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದು, ವಿರೋಧ ಪಕ್ಷಗಳ ‘ಮಹಾಘಟಬಂಧನ್’ ಬಹುಮತ ಪಡೆಯುವುದಿಲ್ಲ ಎಂದು ತಿಳಿಸಿದ್ದವು. ಅಲ್ಲದೆ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷ ಕೂಡ ಕಳಪೆ ಪ್ರದರ್ಶನ ನೀಡಲಿದೆ ಎಂದು ಸಮೀಕ್ಷೆ ನುಡಿದಿದ್ದವು.
“ಇಂಡಿಯಾ ಒಕ್ಕೂಟ ಭಾರೀ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಮತದಾನದ ಪ್ರಮಾಣವು ಜನರು ಸರ್ಕಾರ ಬದಲಾವಣೆ ಬಯಸುತ್ತಾರೆ ಎಂಬುದನ್ನು ಸೂಚಿಸುತ್ತದೆ. ಮತದಾರರು ಮಹಾಘಟಬಂಧನ್ ಪರ ಮತ ಹಾಕಿದ್ದಾರೆ. ನಾವು ನವೆಂಬರ್ 18 ರಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತೇವೆ” ಎಂದು ತೇಜಸ್ವಿ ಯಾದವ್ ಹೇಳಿದರು.
“ಸುಮಾರು 72 ಲಕ್ಷ ಹೆಚ್ಚುವರಿ ಮತದಾರರು ಬಿಹಾರದಲ್ಲಿ ಆಡಳಿತ ಸರ್ಕಾರವನ್ನು ಬದಲಾಯಿಸಲು ಮತ ಹಾಕಿದ್ದಾರೆ” ಎಂದು ಆರ್ಜೆಡಿ ನಾಯಕ ಪುನರುಚ್ಚರಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸುಧಾರಣೆಯಾಗಬೇಕಾದದ್ದು ಜೈಲುಗಳೋ, ರಾಜ್ಯ ಸರ್ಕಾರವೋ?
ಮಂಗಳವಾರ ಬಿಹಾರದಲ್ಲಿ ಎರಡನೇ ಮತ್ತು ಅಂತಿಮ ಹಂತದ ವಿಧಾನಸಭೆ ಚುನಾವಣೆಯಲ್ಲಿ ಸುಮಾರು ಶೇ. 69 ರಷ್ಟು ಮತದಾನ ನಡೆದಿದೆ.
ನವೆಂಬರ್ 6 ರಂದು 121 ಕ್ಷೇತ್ರಗಳಲ್ಲಿ ನಡೆದ ಮೊದಲ ಹಂತದಲ್ಲಿ ಶೇ. 65.09 ರಷ್ಟು ಮತದಾನವಾಗಿತ್ತು. ಮತ ಎಣಿಕೆ ನವೆಂಬರ್ 14 ರಂದು ನಡೆಯಲಿದೆ.
ಬಿಜೆಪಿ ನಾಯಕರು ಮತ ಎಣಿಕೆ ಪ್ರಕ್ರಿಯೆಯನ್ನು ವಿಳಂಬಗೊಳಿಸಲು ಪ್ರಯತ್ನಿಸಬಹುದು, ಆದರೆ ನಾವು ಅದನ್ನು ಯಾವುದೇ ರೀತಿಯಲ್ಲಿ ನಡೆಯಲು ಬಿಡುವುದಿಲ್ಲ. ಅವರ ಚಟುವಟಿಕೆಗಳ ಮೇಲೆ ನಾವು ನಿಗಾ ಇಟ್ಟಿದ್ದೇವೆ ಎಂದು ಹೇಳಿದರು.
ಮಂಗಳವಾರ ನಡೆಸಿದ ವಿವಿಧ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಗಳು ಬಿಹಾರದಲ್ಲಿ ಎನ್ಡಿಎಗೆ 118-198 ಸ್ಥಾನಗಳು, ಮಹಾಘಟಬಂಧನ್ಗೆ 38-102 ಸ್ಥಾನಗಳು ಮತ್ತು ಜನ ಸುರಾಜ್ ಪಕ್ಷಕ್ಕೆ 0-5 ಸೀಟುಗಳು ಬರುವ ಸಾಧ್ಯತೆ ಇದೆ ಎಂದು ಊಹಿಸಿವೆ.





