ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಮಹಾಘಟಬಂಧನ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಲು ಪಾಟ್ನಾದಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿದೆ. ಆ ಪತ್ರಿಕಾಗೋಷ್ಠಿಗಾಗಿ ಹಾಕಲಾಗಿರುವ ಪೋಸ್ಟರ್ ಮತ್ತು ಬ್ಯಾನರ್ಗಳಲ್ಲಿ ತೇಜಸ್ವಿ ಯಾದವ್ ಅವರ ಏಕೈಕ ಫೋಟೋ ಮಾತ್ರವೇ ಇರುವ ವಿಚಾರವನ್ನು ಇಟ್ಟುಕೊಂಡು ಮಹಾಘಟಬಂಧನ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ‘ಪತ್ರಿಕಾಗೋಷ್ಠಿಯ ಪೋಸ್ಟರ್ಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಫೋಟೋ ಕಾಣೆಯಾಗಿದೆ. ರಾಹುಲ್ ಗಾಂಧಿಗೆ ಅವರ ಸ್ಥಾನ ತೋರಿಸಿದ್ದೀರಾ’ ಎಂದು ವ್ಯಂಗ್ಯವಾಡಿದೆ.
ಮಹಾಘಟಬಂಧನ್ನಲ್ಲಿ ಸೀಟು ಹಂಚಿಕೆ ಮಾತುಕತೆ ಕಗ್ಗಂಟಾಗಿ ಉಳಿದಿತ್ತು. ಆರ್ಜೆಡಿ ಮತ್ತು ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಕಾಂಗ್ರೆಸ್ ಹಿರಿಯ ಅಶೋಕ್ ಗೆಹ್ಲೋಟ್ ಅವರು ಪಾಟ್ನಾಗೆ ಧಾವಿಸಿದ್ದು, ಬುಧವಾರ ಅಂತಿಮ ಮಾತುಕತೆಗಳು ಮುಗಿದಿವೆ. ಈ ಬೆನ್ನಲ್ಲೇ, ಮೈತ್ರಿಕೂಟದ ನಾಯಕರು ಪತ್ರಿಕಾಗೋಷ್ಠಿ ಕರೆದಿದ್ದು, ತೇಜಸ್ವಿ ಯಾದವ್ ಅವರೊಂದಿಗೆ ಅಶೋಕ್ ಗೆಹ್ಲೋಟ್ ಕೂಡ ವೇದಿಕೆಯಲ್ಲಿ ಇರುವ ಸಾಧ್ಯತೆ ಇದೆ. ಮಿತ್ರಪಕ್ಷಗಳು ಏಕತೆಯ ಸಂದೇಶ ನೀಡಲು ಸಿದ್ದವಾಗಿವೆ.
ಪತ್ರಿಕಾಗೋಷ್ಠಿಯ ಪೋಸ್ಟರ್ನಲ್ಲಿ ರಾಹುಲ್ ಗಾಂಧಿ ಅವರ ಫೋಟೋ ಇಲ್ಲದಿರುವ ಕುರಿತು ಬಿಜೆಪಿ ವಾಗ್ದಾಳಿ ನಡೆಸಿದೆ. “ಜಂಟಿ ಸುದ್ದಿಗೋಷ್ಠಿ? ಆದರೆ, ಒಂದೇ ಒಂದು ಚಿತ್ರ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ‘ಗೌರವ ಕಳವು'(ಸಮ್ಮಾನ್ ಚೋರಿ). ಕಾಂಗ್ರೆಸ್ ಮತ್ತು ರಾಹುಲ್ಗೆ ಅವರ ಸ್ಥಳವನ್ನು ತೋರಿಸಿದ್ದೀರಾ?” ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಸಮ್ಮಾನ್ ಚೋರಿ’ ಎಂಬ ಪದವನ್ನು ಗಾಂಧಿಯವರ ‘ವೋಟ್ ಚೋರಿ’ ಅಭಿಯಾನಕ್ಕೆ ಪ್ರತಿಯಾಗಿ ಪೂನವಾಲಾ ಪ್ರಯೋಗಿಸಿದ್ದಾರೆ.
Joint PC? But only one picture
— Shehzad Jai Hind (Modi Ka Parivar) (@Shehzad_Ind) October 23, 2025
Rahul Gandhi & Congress ka “samman chori”
Showed Congress & Rahul his place? pic.twitter.com/BTztFZgvOP
ಆರ್ಜೆಡಿ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಹಗ್ಗ-ಜಗ್ಗಾಟ ಅಂತ್ಯಗೊಂಡಿದೆ. ಮೈತ್ರಿಕೂಟದ ನಾಯಕರು ಈಗ ಎಲ್ಲವೂ ಸರಿಯಾದ ರೀತಿಯಲ್ಲಿದೆ ಎಂದು ಹೇಳಿಕೊಂಡಿದ್ದಾರೆ.
2020ರ ವಿಧಾನಸಭಾ ಚುನಾವಣೆಯಲ್ಲಿ, ಆರ್ಜೆಡಿ 144 ಸ್ಥಾನಗಳಲ್ಲಿ ಸ್ಪರ್ಧಿಸಿ 75 ಸ್ಥಾನಗಳನ್ನು ಗೆದ್ದಿತು. ಅಂತೆಯೇ, ಕಾಂಗ್ರೆಸ್ 70 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 19 ಸ್ಥಾನಗಳನ್ನು ಗೆದ್ದಿತು. ಈ ಬಾರಿ, ಆರ್ಜೆಡಿ 143 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ ಮತ್ತು ಕಾಂಗ್ರೆಸ್ 59 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಹೆಸರಿಸಿದೆ. ಮುಖೇಶ್ ಸಹಾನಿ ಅವರ ವಿಐಪಿ 15 ಮತ್ತು ಎಡಪಕ್ಷಗಳು 30 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಆದಾಗ್ಯೂ, ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್-ಆರ್ಜೆಡಿ ಎರಡೂ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ಈ ವಿವಾದವು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಇತ್ಯರ್ಥವಾಗಲಿದ್ದು, ಎರಡೂ ಪಕ್ಷಗಳ ಅರ್ಭರ್ಥಿಗಳಿರುವ ಕ್ಷೇತ್ರಗಳಲ್ಲಿ ಯಾವುದಾದರೂ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆಯುವ ಸಾಧ್ಯತೆಗಳಿವೆ.




