ಬಿಹಾರದಲ್ಲಿ ನಿತೀಶ್ ಕುಮಾರ್ ಅವರೇ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ. ಎನ್ಡಿಎ ಸರ್ಕಾರವನ್ನು ಮುನ್ನಡೆಸಲಿದ್ದಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಎಲ್ಜೆಪಿ ಸಂಸದೆ ಶಾಂಭವಿ ಚೌಧರಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ 202 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಗೆಲುವಿನತ್ತ ಧಾವಿಸುತ್ತಿದೆ. ಎನ್ಡಿಎ ಗೆಲುವಿನ ಹಾದಿಯಲ್ಲಿರುವ ಸಮಯದಲ್ಲೇ ಬಿಹಾರಕ್ಕೆ ಎನ್ಡಿಎಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಗಳು ಆರಂಭಗೊಂಡಿದೆ. ಈ ಚರ್ಚೆಗಳ ಕುರಿತು ಪ್ರಕ್ರಿಯಿಸಿರುವ ಶಾಂಭವಿ ಅವರು, ‘ನಿತೀಶ್ ಅವರೇ ಮುಖ್ಯಮಂತ್ರಿ ಆಗುತ್ತದೆ. ಯಾವುದೇ ಗೊಂದಲವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಾಂಭವಿ ಚೌಧರಿ ಅವರು ಬಿಹಾರದ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರವಾದ ಸಮಷ್ಠಿಪುರದ ಸಂಸದೆಯಾಗಿದ್ದಾರೆ.
ಈ ಬಾರಿ ಎನ್ಡಿಎ ಕೂಟ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿರಲಿಲ್ಲ. ಮೈತ್ರಿಕೂಟ ಗೆದ್ದ ಬಳಿಕ, ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿಕೊಂಡಿತ್ತು. ಇದೀಗ, ಎನ್ಡಿಎ ಗೆಲುವು ಸಾಧಿಸುವುದು ಖಚಿತವಾಗಿದೆ. ಚುನಾವಣೆಯಲ್ಲಿ ಎನ್ಡಿಎಯನ್ನು ನಿತೀಶ್ ಮುನ್ನಡೆಸಿದ್ದರಿಂದ, ಅವರೇ ಮುಖ್ಯಮಂತ್ರಿ ಆಗುತ್ತಾರೆಂದು ಹಲವರು ಭರವಸೆ ಹೊಂದಿದ್ದಾರೆ. ಆದರೆ, ಜೆಡಿಯುಗಿಂತ ಬಿಜೆಪಿಯೇ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತಿದ್ದು, ಬಿಜೆಪಿಗರಿಗೇ ಮುಖ್ಯಮಂತ್ರಿ ಹುದ್ದೆಬೇಕೆಂದು ಬೇಡಿಕೆ ಇಡಬಹುದು ಎಂಬ ಅಭಿಪ್ರಾಯಗಳೂ ಇವೆ.
ಇತ್ತ, ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಕಾಂಗ್ರೆಸ್ ಮತ್ತು ಎಡಪಕ್ಷಗಳ ಜೊತೆ ಸೇರಿ ಬಿಹಾರದಲ್ಲಿ ಅಧಿಕಾರಕ್ಕೆ ಬರುವ ಕನಸು ಕಂಡಿದ್ದರು, ಜೊತೆಗೆ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ಹೇಳಿದ್ದರು. ಆದರೆ, ಮಹಾಘಟಬಂಧನ್ ಹಿನ್ನೆಡೆ ಅನುಭವಿಸಿದೆ.




