ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಮೊದಲ ಹಂತದ ಮತದಾನವು ಗುರುವಾರ ನಡೆದಿದ್ದು, ನವೆಂಬರ್ 11ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಈ ಬಾರಿಯ ಚುನಾವಣೆ ಅಭಿವೃದ್ಧಿ, ಮೂಲಸೌಕರ್ಯಗಳು ಹಾಗೂ ಉದ್ಯೋಗಗಳ ಸುತ್ತಲೇ ಕೇಂದ್ರೀಕೃತಾಗಿದೆ. ಇದೇ ಸಮಯದಲ್ಲಿ, ಬಿಹಾರದ ಮೂರು ಹಳ್ಳಿಗಳ ಗ್ರಮಸ್ಥರು ತಮ್ಮ ಗ್ರಾಮಕ್ಕೆ ಸೇತುವೆ ನಿರ್ಮಾಣ ಮಾಡದ ಹೊರತು, ನಾವು ಮತವನ್ನೂ ಚಲಾಯಿಸುವುದಿಲ್ಲ ಎಂದು ಹೇಳಿದ್ದಾರೆ. ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಗಯಾ ಜಿಲ್ಲೆಯ ಹಳ್ಳಿಗಳಾದ ಪತ್ರಾ, ಹೆರ್ಹಂಜ್ ಹಾಗೂ ಕೆವಾಲ್ದಿಹ್ ಗ್ರಾಮಗಳ ಜನರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈ ಮೂರು ಗ್ರಾಮಗಳು ‘ಮೊರ್ಹರ್’ ನದಿ ತೀರದಲ್ಲಿವೆ. ಈ ಗ್ರಾಮಗಳಲ್ಲಿ ಒಟ್ಟು 8,000ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಕಳೆದ 77 ವರ್ಷಗಳಲ್ಲಿ ತಮ್ಮ ಏಕೈಕ ಬೇಡಿಕೆಯ ಈಡೇರಿಕೆಗಾಗಿ ಕಾಯುತ್ತಿದ್ದಾರೆ.
“ಕಳೆದ 77 ವರ್ಷಗಳಿಂದ ಗ್ರಾಮದ ಪ್ರತಿಯೊಬ್ಬರೂ ಬಳಲುತ್ತಿದ್ದೇವೆ. ಪ್ರತಿ ಚುನಾವಣೆಯ ಸಮಯದಲ್ಲಿಯೂ ರಾಜಕಾರಣಿಗಳು ಬಂದು ಹೋಗುತ್ತಾರೆ. ಸೇತುವೆ ನಿರ್ಮಾಣದ ಭರವಸೆ ನೀಡುತ್ತಾರೆ. ಆದರೆ, ಈವರೆಗೆ ನಮ್ಮ ಬೇಡಿಕೆ – ಅವರ ಭರವಸೆ ಈಡೇರಿಲ್ಲ. ಮಳೆಗಾಲದಲ್ಲಿ ನೀದಿ ನೀರು ಏರಿಕೆಯಾಗುತ್ತದೆ. ಅಂತಹ ಸಮಯದಲ್ಲಿ ನದಿ ದಾಟಿ ಇತರ ಗ್ರಾಮಗಳು, ಪಟ್ಟಣಗಳೊಂದಿಗೆ ಸಂಪರ್ಕ ಸಾಧಿಸುವುದೇ ಕಷ್ಟ” ಎಂದು ಗ್ರಾಮಸ್ಥರು ಹೇಳಿದ್ದಾರೆ.
“ನಮ್ಮ ಪಾಲಿಗೆ ಅಭಿವೃದ್ಧಿ ಎಂದರೆ, ಅದು ಸೇತುವೆ ನಿರ್ಮಾಣ. ಈ ಬಾರಿ, ‘ಸೇತುವೆ ನಿರ್ಮಾಣವಾಗುವವರೆಗೂ ನಾವು ಮತ ಚಲಾಯಿಸುವುದಿಲ್ಲ’ ಎಂದು ತೀರ್ಮಾನಿದ್ದೇವೆ” ಎಂದು ಗ್ರಾಮದ ಮಹಿಳಾ ಮತದಾರರೊಬ್ಬರು ಹೇಳಿರುವುದಾಗಿ ‘ಎನ್ಡಿಟಿವಿ’ ವರದಿ ಮಾಡಿದೆ.
ಈ ಲೇಖನ ಓದಿದ್ದೀರಾ?: ವಿ.ಸೋಮಣ್ಣಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ? ಪ್ರಭಾವಿ ಮಠಾಧೀಶರೊಂದಿಗೆ ಪ್ರಸ್ತಾಪ
“ಪ್ರತಿ ವರ್ಷ ಸುಮಾರು ನಾಲ್ಕು ತಿಂಗಳ ಕಾಲ, ನಮ್ಮ ಗ್ರಾಮಗಳು ರಾಜ್ಯದ ಉಳಿದ ಭಾಗಗಳು ಮತ್ತು ಪ್ರಪಂಚದೊಂದಿಗಿನ ಸಂಪರ್ಕವನ್ನೂ ಸಂಪೂರ್ಣವಾಗಿ ಕಡಿತಗೊಳ್ಳುತ್ತವೆ. ಗ್ರಾಮಸ್ಥರು ಎದೆಯ ಆಳದ ನೀರಿನಲ್ಲಿ ಅಲೆದಾಡಬೇಕಾಗುತ್ತದೆ. ದಿನಸಿಗಾಗಿ ಸ್ಥಳೀಯ ಮಾರುಕಟ್ಟೆಗೆ ಸುಲಭವಾಗಿ ತೆರಳಲು ಸಾಧ್ಯವಿಲ್ಲ, ಮಕ್ಕಳು ಶಾಲೆಗಳಿಗೆ ಹೋಗಲು ಸಾಧ್ಯವಿಲ್ಲ, ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ರೋಗಿಗಳು ಆಸ್ಪತ್ರೆಗಳಿಗೆ ಹೋಗಲು ಆಗುತ್ತಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಾವು ಬಹಳಷ್ಟು ನಾರಿ ದೂರು-ಮನವಿಗಳನ್ನು ನೀಡಿದ್ದೇವೆ. ಮಳೆಗಾಲದಲ್ಲಿ, ನಾವು ಪ್ರತಿ ವರ್ಷ ನದಿ ದಾಟಲಾಗದ ಕಾರಣಕ್ಕಾಗಿ ಕನಿಷ್ಠ ಎರಡು ಜೀವಗಳನ್ನು ಕಳೆದುಕೊಳ್ಳುತ್ತೇವೆ” ಎಂದು ಗ್ರಾಮಸ್ಥರು ಹೇಳಿದ್ದಾರೆ.




