ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿ ಪ್ರಕಾರ, ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿ, ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಭಾರೀ ಹಿನ್ನಡೆ ಅನುಭವಿಸಿದ್ದಾರೆ. ತಮ್ಮ ಭದ್ರಕೋಟೆ ರಾಘೋಪುರ್ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಯಾದವ್, ಬಿಜೆಪಿ ಅಭ್ಯರ್ಥಿ ಸತೀಶ್ ಕುಮಾರ್ ವಿರುದ್ಧ ಹಿನ್ನಡೆಯಲ್ಲಿದ್ದಾರೆ.
ಬಿಜೆಪಿಯ ಸತೀಶ್ ಕುಮಾರ್ ಅವರು ತೇಜಸ್ವಿಗಿಂತ 4,829 ಮತಗಳಿಂದ ಮುಂದಿದ್ದಾರೆ.
ತೇಜಸ್ವಿ ಯಾದವ್ ಅವರು 2015ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. 2017ರಲ್ಲಿ ತಮ್ಮ 28ನೇ ವಯಸ್ಸಿಗೆ ವಿಪಕ್ಷ ನಾಯಕನಾಗಿ ಆಯ್ಕೆಯಾಗಿದ್ದರು. 2020ರ ಚುನಾವಣೆಯಲ್ಲಿ ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯಥಿಯಾಗಿದ್ದರು. ಅತೀ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಅಭ್ಯರ್ಥಿ ಎನ್ನಿಸಿಕೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರು ಹಿನ್ನಡೆ ಅನುಭವಿಸಿದ್ದಾರೆ.
ಇನ್ನು, ಬಿಹಾರ ಫಲಿತಾಂಶದ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ‘ಇದು ಮತ ಕಳ್ಳತನದ ಪರಿಣಾಮ, ಫಲಿತಾಂಶ’ ಎಂದು ಕರೆದಿದ್ದಾರೆ. ಮಹಾರಾಷ್ಟ್ರ, ಹರಿಯಾಣದಂತೆ ಬಿಹಾರದಲ್ಲೂ ಮತ ಕಳವು ಪುನರಾವರ್ತನೆಯಾಗಿದೆ ಎಂದಿದ್ದಾರೆ.
“ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಏನು ನಡೆದಿತ್ತೋ, ಅದು ಬಿಹಾರದಲ್ಲಿ ಪುನರಾವರ್ತನೆಯಾಗಿದೆ. ದೇಶದ ಸರಿಯಾದ ಚಿಂತನೆಯುಳ್ಳ ಜನರು ಇದರ ಬಗ್ಗೆ ಬಹಳ ಗಂಭೀರವಾಗಿ ಯೋಚಿಸಬೇಕು. ಈಗ ನಮ್ಮ ಮತಗಳಿಗೆ ಮೌಲ್ಯವಿಲ್ಲದಂತಾಗಿದೆ. ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ರಾಜಿ ಮಾಡಿಕೊಂಡಿದ್ದು, ಮತಗಳನ್ನು ನಿರ್ಧರಿಸುತ್ತಿದೆ. ಪ್ರಜಾಪ್ರಭುತ್ವವು ಅಪಾಯದಲ್ಲಿದೆ” ಎಂದು ಹೇಳಿದ್ದಾರೆ.




