ಕಳೆದ ವಾರ, ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ರೋಪ್ವೇ ಪ್ರಾಯೋಗಿಕ ಚಾಲನೆಯ ಸಮಯಲ್ಲೇ ಕುಸಿದುಬಿದ್ದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಎಂಜಿನಿಯರ್ಗಳನ್ನು ಅಮಾನತುಗೊಳಿಸಿ, ಗುತ್ತಿಗೆದಾರರನ್ನು ಬ್ಲಾಕ್ಲಿಸ್ಟ್ಗೆ ಸೇರಿಸಲು ಸರ್ಕಾರ ನಿರ್ಧರಿಸಿದೆ ಎಂದು ರಸ್ತೆ ನಿರ್ಮಾಣ ಸಚಿವ ದಿಲೀಪ್ ಕುಮಾರ್ ಜೈಸ್ವಾಲ್ ತಿಳಿಸಿದ್ದಾರೆ.
ರೋಹ್ತಾಸ್ಗಢ ಕೋಟೆಗೆ ಪ್ರವೇಶವನ್ನು ಸುಧಾರಿಸುವ ಉದ್ದೇಶದಿಂದ ರೋಹ್ತಾಸ್ಗಢ ಕೋಟೆ ಮತ್ತು ರೋಹಿತೇಶ್ವರ ಧಾಮ್ಗೆ ನೇರ ಸಂಪರ್ಕ ಒದಗಿಸಲು ರೋಪ್ವೇ ಯೋಜನೆಯನ್ನು ರೂಪಿಸಲಾಗಿತ್ತು. ಯೋಜನೆಗಾಗಿ 13 ಕೋಟಿ ರೂ. ವ್ಯಯಿಸಲಾಗಿತ್ತು. ಆದರೆ, ಡಿಸೆಂಬರ್ 26 ರಂದು ಲೋಡ್ ಪರೀಕ್ಷೆ ನಡೆಸುವಾಗ ಅದರ ಟವರ್ ಮತ್ತು ನಾಲ್ಕು ಕ್ಯಾಬಿನ್ಗಳು ಕುಸಿದುಬಿದ್ದಿದ್ದವು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ. ಘಟನೆ ಕುರಿತು ತನಿಖೆ ನಡೆಸಲು ಸರ್ಕಾರ ಆದೇಶಿಸಿತ್ತು.
ಈ ರೋಪ್ವೇಯನ್ನು ಕೋಲ್ಕತ್ತಾ ಮೂಲದ ರೋಪ್ವೇ ಮತ್ತು ರಿಸೋರ್ಸ್ ಪ್ರೈವೇಟ್ ಲಿಮಿಟೆಡ್ (RRPL) ನಿರ್ಮಿಸಿದೆ. ಗುತ್ತಿಗೆದಾರ ಮತ್ತು ಇಲಾಖಾ ಎಂಜಿನಿಯರ್ಗಳ ಗಂಭೀರ ನಿರ್ಲಕ್ಷ್ಯದಿಂದಾಗಿ ದುರ್ಘಟನೆ ಸಂಭವಿಸಿದೆ. ತಾಂತ್ರಿಕ ದೋಷಗಳು, ಸುರಕ್ಷತಾ ನಿಯಮಗಳು ಹಾಗೂ ನಿಗದಿತ ಕಾರ್ಯವಿಧಾನಗಳ ಉಲ್ಲಂಘನೆಯಾಗಿದೆ ಎಂಬುದು ತನಿಖೆಯ ಸಮಯದಲ್ಲಿ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಗಣಿಗಾರಿಕೆ ವಿರುದ್ಧ 3 ರಾಜ್ಯಗಳಲ್ಲಿ ಬೃಹತ್ ಪ್ರತಿಭಟನೆ; ಅದಾನಿ ಲಾಭಕ್ಕಾಗಿ ಸರ್ಕಾರಗಳ ತಂತ್ರ-ಕುತಂತ್ರ?
ಉದ್ದೇಶಿತ ರೋಪ್ವೇ 1,324 ಮೀಟರ್ ಉದ್ದವಿದ್ದು, 18 ಕ್ಯಾಬಿನ್ಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದೂ ಕ್ಯಾಬಿನ್ಗಳು ನಾಲ್ಕು ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ. ಇದನ್ನು, ರೋಪ್ವೇ ಮಾರ್ಗವನ್ನು 2026ರ ಜನವರಿಯಲ್ಲಿ ಪ್ರವಾಸಿಗರ ಬಳಕೆಗೆ ತೆರೆಯಲು ನಿರ್ಧರಿಸಲಾಗಿತ್ತು. ಆದರೆ, ಪ್ರಯೋಗಿಕ ಚಾಲನೆಯ ವೇಳೆಯೇ ರೋಪ್ವೇ ಕುಸಿದುಬಿದ್ದಿದೆ.
ಸಾಕಷ್ಟು ಸುರಕ್ಷತಾ ವ್ಯವಸ್ಥೆಗಳಿಲ್ಲದೆ ಪ್ರಯೋಗವನ್ನು ನಡೆಸಲಾಗಿದೆ. ಪ್ರಯೋಗದ ಸಮಯದಲ್ಲಿ ಟರ್ಮಿನಲ್ ಪಾಯಿಂಟ್ ಅಥವಾ ಹಾನಿಗೊಳಗಾದ ಟವರ್ ಬಳಿ ಗುತ್ತಿಗೆದಾರರ ಕಂಪನಿಯ ಯಾವುದೇ ಪ್ರತಿನಿಧಿ ಇರಲಿಲ್ಲ. ಇದು ಸಂಪೂರ್ಣ ನಿರ್ಲಕ್ಷ್ಯವನ್ನು ಸೂಚಿಸುತ್ತದೆ ಎಂದು ಸಚಿವ ಜೈಸ್ವಾಲ್ ಹೇಳಿದ್ದಾರೆ.
ಸ್ಥಳೀಯರ ಪ್ರಕಾರ, ರೋಪ್ವೇ ಯೋಜನೆಯು 2020ರ ಫೆಬ್ರವರಿಯಲ್ಲಿ ಪ್ರಾರಂಭವಾದಾಗಿನಿಂದ ಪದೇ ಪದೇ ವಿಳಂಬವನ್ನು ಎದುರಿಸುತ್ತಿದೆ. ಆರಂಭದಲ್ಲಿ 14 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿತ್ತು. ಆದರೆ, ಕಾಮಗಾರಿಯು ಬರೋಬ್ಬರಿ 5 ವರ್ಷಗಳನ್ನು ತೆಗೆದುಕೊಂಡಿದೆ. ಆದರೂ, ಕುಸಿತ ಸಂಭವಿಸಿದೆ.
ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರವಿರುವ ಬಿಹಾರದಲ್ಲಿ ಪದೇ-ಪದೇ ಸೇತುವೆಗಳು ಕುಸಿದು ಬೀಳುತ್ತಿವೆ. ಇದು, ಗಂಭೀರ ಭ್ರಷ್ಟಾಚಾರದ ಆರೋಪಗಳಿಗೆ ಕಾರಣವೂ ಆಗಿವೆ.




