ಬಿಹಾರದಲ್ಲಿ, ಶಿಕ್ಷಕರು ಈಗಾಗಲೇ ಮತಪಟ್ಟಿಗಳ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್) ಮತ್ತು ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ. ಜಾತಿ ಸಮೀಕ್ಷೆಗಳಿಗೂ ಕೆಲಸ ಮಾಡಿದ್ದಾರೆ. ಇದೀಗ, ಅವರಿಗಾಗಿ ಮತ್ತೊಂದು ಕೆಲಸ ಕಾಯುತ್ತಿದೆ. ಅದು, ಶಾಲೆಗಳಿಗೆ ವಿದ್ಯಾರ್ಥಿಗಳು ಮತ್ತು ಪರೀಕ್ಷೆಗಳಿಗೆ ಸಂಬಂಧಿಸಿದ್ದಲ್ಲ. ಬದಲಾಗಿ, ನಾಯಿಗಳಿಗೆ ಸಂಬಂಧಿಸಿದೆ. ಈಗ, ಬಿಹಾರದಲ್ಲಿ ನಾಯಿಗಳ ಗಣತಿ ಮಾಡುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಬಿಹಾರದ ರೋಹ್ತಾಸ್ ಜಿಲ್ಲೆಯ ಸಸಾರಾಮ್ ಪುರಸಭೆಯು ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯು, ಶಿಕ್ಷಕ ವಲಯದಲ್ಲಿ ಚರ್ಚೆ ಮತ್ತು ವಿವಾದ ಹುಟ್ಟುಹಾಕಿದೆ. ಶಿಕ್ಷಣ ಕ್ಷೇತ್ರವೇ ಬಳಲುತ್ತಿರುವ ರಾಜ್ಯದಲ್ಲಿ, ಶಿಕ್ಷಕರನ್ನು ಪದೇ-ಪದೇ ಇತರ ಕೆಲಸಗಳಿಗೆ ನಿಯೋಜಿಸಲಾಗುತ್ತಿರುವುದು, ರಾಜ್ಯದಲ್ಲಿನ ಆದ್ಯತೆಗಳ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ನಿರ್ದೇಶನವನ್ನು ಹೊರಡಿಸಲಾಗಿದೆ ಎಂದು ಪುರಸಭೆ ಹೇಳಿಕೊಂಡಿದೆ. ಸುತ್ತೋಲೆಯಲ್ಲಿ; ಸಸಾರಾಮ್ ಪುರಸಭೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಶಾಲೆಗಳು ತಮ್ಮ ವ್ಯಾಪ್ತಿಯಲ್ಲಿನ ಬೀದಿ ನಾಯಿಗಳಿಗೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸಬೇಕು ಮತ್ತು ಪುರಸಭೆಗೆ ಒದಗಿಸಬೇಕು. ಅದಕ್ಕಾಗಿ, ನೋಡಲ್ ಅಧಿಕಾರಿ, ಶಿಕ್ಷಕರನ್ನು ನೇಮಿಸಲು ಸೂಚಿಸಲಾಗಿದೆ.
ನಿರ್ದೇಶನದ ಪ್ರಕಾರ, ಶಾಲಾ ಆವರಣದ ಒಳಗೆ ಮತ್ತು ಸುತ್ತಮುತ್ತ ಇರುವ ಬೀದಿ ನಾಯಿಗಳ ಸಂಖ್ಯೆ, ಅವುಗಳ ಸ್ಥಿತಿ ಹಾಗೂ ಅವುಗಳ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿಯನ್ನು ಒದಗಿಸುವ ಜವಾಬ್ದಾರಿ ನಿಯೋಜಿತ ನೋಡಲ್ ಶಿಕ್ಷಕರದ್ದಾಗಿರುತ್ತದೆ. ಬೀದಿ ನಾಯಿಗಳ ಸಂಖ್ಯೆಯನ್ನು ನಿರ್ವಹಿಸಲು ಪುರಸಭೆಯು ‘ಡಾಗ್ ಪೌಂಡ್’ಅನ್ನು ಸ್ಥಾಪಿಸಲು ಸಿದ್ದತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಮುಗಿಯದ ಅಮೆರಿಕದ ‘ಸಾಮ್ರಾಜ್ಯಶಾಹಿ’ ಹಸಿವು: ವೆನೆಜುವೆಲಾ ನಂತರ ಗ್ರೀನ್ಲ್ಯಾಂಡ್ ಸರದಿ?
ಈ ಆದೇಶವು ಈಗಾಗಲೇ ಹಲವಾರು ಶೈಕ್ಷಣಿಕೇತರ ಜವಾಬ್ದಾರಿಗಳಿಂದ ಬಳಲುತ್ತಿರುವ ಶಿಕ್ಷಕರಲ್ಲಿ ಅಸಹನೆ ಹುಟ್ಟುಹಾಕಿದೆ. ಆದರೂ, ಅವರು ಬೀದಿ ನಾಯಿಗಳ ಕುರಿತು ವರದಿ ಮಾಡುವ ಹೆಚ್ಚುವರಿ ಕೆಲಸವನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ.
“ಬೀದಿ ನಾಯಿಗಳ ಕುರಿತು ನಿಖರವಾದ ಸ್ಥಳೀಯ ಮಟ್ಟದ ಮಾಹಿತಿಯನ್ನು ಸಂಗ್ರಹಿಸಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸುವಂತೆ ಶಿಕ್ಷಣ ಸಂಸ್ಥೆಗಳನ್ನು ಕೇಳಲಾಗಿದೆ. ಇದು ಯೋಜನೆಗೆ ಸಹಾಯ ಮಾಡುತ್ತದೆ” ಎಂದುಪುರಸಭೆ ಆಯುಕ್ತ ವಿಕಾಸ್ ಕುಮಾರ್ ಹೇಳಿದ್ದಾರೆ.
ಆದಾಗ್ಯೂ, ಈ ಕ್ರಮವನ್ನು ಶಿಕ್ಷಕರು ವಿರೋಧಿಸಿದ್ದಾರೆ. ಅನೇಕರು ಹತಾಶೆ ವ್ಯಕ್ತಪಡಿಸಿದ್ದಾರೆ. ಜಾತಿಗಣತಿ, ಜನಗಣತಿ ಕೆಲಸಗಳು, ಬಿಎಲ್ಒ ಕರ್ತವ್ಯಗಳಿಂದಾಗಿ ಬೋಧನೆಗೆ ಸಮಯವೇ ದೊರೆಯುತ್ತಿಲ್ಲ. ಮಾತ್ರವಲ್ಲದೆ, ಬೋಧನೇತರ ಕೆಲಸಗಳಿಗೆ ನಿರಂತರ ನಿಯೋಜನೆಗಳಿಂದ ಬಸವಳಿಯುವಂತೆ ಮಾಡಿದೆ. ಈಗ, ಬೀದಿ ನಾಯಿಗಳ ಕುರಿತು ಮಾಹಿತಿಯನ್ನು ಸಂಗ್ರಹಿಸುವ ಕಾರ್ಯವನ್ನು ನಿಯೋಜಿಸುತ್ತಿರುವುದು ಮತ್ತಷ್ಟು ಬಸವಳಿಯುವಂತೆ ಮಾಡುತ್ತದೆ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.




