ಪ್ರಯಾಗರಾಜ್ನ ಮಾಘ ಮೇಳದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಅರ್ಧಕ್ಕೆ ನಿಲ್ಲಿಸಿ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಬೇಸರದಿಂದ ನಿರ್ಗಮಿಸಿದ ಘಟನೆಯನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತೀವ್ರವಾಗಿ ಖಂಡಿಸಿದ್ದಾರೆ.
“ಬಿಜೆಪಿ ಸರ್ಕಾರ ಅಧಿಕಾರದ ಮದದಲ್ಲಿ ಎಷ್ಟರಮಟ್ಟಿಗೆ ಕುರುಡಾಗಿದೆ ಎಂದರೆ, ಅದಕ್ಕೆ ಸಾಧು-ಸಂತರ ನೋವು ಕೂಡ ಕಾಣಿಸುತ್ತಿಲ್ಲ,” ಎಂದು ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮನೆಮುರುಕ ಮಹಾ‘ನಾಯಕ’ ಮೊದಲಿಗನಲ್ಲ, ಕಡೆಯವನೂ ಆಗಿರುವುದಿಲ್ಲ!
ಬುಧವಾರ ಶಂಕರಾಚಾರ್ಯರು ಮೇಳದ ಪ್ರದೇಶವನ್ನು ತೊರೆದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿರುವ ಅಖಿಲೇಶ್, “ಜಗದ್ಗುರು ಶಂಕರಾಚಾರ್ಯರು ಪವಿತ್ರ ಸ್ನಾನವನ್ನೂ ಮಾಡದೇ, ಅವಮಾನಿತರಾಗಿ ವಾಪಸಾಗುತ್ತಿರುವುದು ದೇಶಕ್ಕೆ ‘ಅತ್ಯಂತ ಅಶುಭ’ ಸಂಗತಿಯಾಗಿದೆ. ಸನಾತನ ಧರ್ಮದ ಬಗ್ಗೆ ಮಾತನಾಡುವವರೇ ಇಂದು ಸಂತರ ಸಂಪ್ರದಾಯವನ್ನು ಮುರಿದಿದ್ದಾರೆ. ಈ ಅಹಂಕಾರಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ,” ಎಂದು ಕಿಡಿಕಾರಿದ್ದಾರೆ.
ಗೋವನ್ನು ‘ರಾಷ್ಟ್ರ ಮಾತೆ’ ಎಂದು ಘೋಷಿಸಬೇಕು ಮತ್ತು ಗೋಹತ್ಯೆ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು ಎಂದು ಒತ್ತಾಯಿಸಿ ಶಂಕರಾಚಾರ್ಯರು ಮಾಘ ಮೇಳದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ತಮಗೆ ಪವಿತ್ರ ಸಂಗಮ ಸ್ನಾನಕ್ಕೆ ಮತ್ತು ಪರಿಕ್ರಮಕ್ಕೆ ಆಡಳಿತ ಮತ್ತು ಪೊಲೀಸರು ಅಡ್ಡಿಪಡಿಸಿದರು ಎಂದು ಆರೋಪಿಸಿದ ಅವರು, ಬುಧವಾರ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು. “ಸರ್ಕಾರದ ನಡವಳಿಕೆ ನಮಗೆ ತೀವ್ರ ನೋವು ತಂದಿದೆ. ನಾವು ಬಾರ ಮನಸ್ಸಿನಿಂದ ಮತ್ತು ಶೂನ್ಯ ಭಾವನೆಯೊಂದಿಗೆ ಇಲ್ಲಿಂದ ಹೋಗುತ್ತಿದ್ದೇವೆ,” ಎಂದು ಸ್ವಾಮೀಜಿ ಭಾವುಕರಾಗಿ ನುಡಿದಿದ್ದರು.





