ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿರುದ್ಧ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಧರಣಿ ಮೂರನೇ ದಿನವು ಮುಂದುವರೆದಿದೆ. ಚುನಾವಣಾ ಆಯೋಗವನ್ನು ‘ವ್ಯಾನಿಶ್ ಆಯೋಗ’ವೆಂದು ಕರೆದಿರುವ ಮಮತಾ, “ಕಾನೂನುಬದ್ಧ ಮತದಾರರನ್ನು ಅಳಿಸಿಹಾಕಲು ಬಿಜೆಪಿ ‘ವ್ಯಾನಿಶ್ ಆಯೋಗ’ವನ್ನು ದುರುಪಯೋಗ ಮಾಡಿಕೊಂಡಿದೆ” ಎಂದು ಆರೋಪಿಸಿದ್ದಾರೆ.
“ದೇಶವು ತನ್ನ ಪ್ರಜಾಪ್ರಭುತ್ವದ ಅಡಿಪಾಯಗಳ ಮೇಲೆ ಅಭೂತಪೂರ್ವ ಮತ್ತು ನೇರ ದಾಳಿಯನ್ನು ಎದುರಿಸುತ್ತಿದೆ. ಬಿಜೆಪಿ ತನ್ನ ‘ಒಂದು ರಾಷ್ಟ್ರ, ಒಬ್ಬ ನಾಯಕ, ಒಂದು ಪಕ್ಷ’ ಎಂಬ ಉನ್ಮಾದದಲ್ಲಿ ಜನ ವಿರೋಧಿ ಮಹತ್ವಾಕಾಂಕ್ಷೆಗಳ ಈಡೇರಿಕೆಗಾಗಿ ಪ್ರಜಾಪ್ರಭುತ್ವ ಸಂಸ್ಥೆ ಮತ್ತು ಸಾಂವಿಧಾನಿಕ ಹುದ್ದೆಗಳನ್ನು ವ್ಯವಸ್ಥಿತವಾಗಿ ದುರುಪಯೋಗ ಮಾಡಿಕೊಂಡಿದೆ” ಎಂದು ಮಮತಾ ಆರೋಪಿಸಿದ್ದಾರೆ.
“ಬಾಬಾಸಾಹೇಬ್ ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ತನ್ನ ಪ್ರಣಾಳಿಕೆ ಮತ್ತು ಮನುವಾದದೊಂದಿಗೆ ಬದಲಾಯಿಸುವುದು ಬಿಜೆಪಿಯ ಅಂತಿಮ ಗುರಿಯಾಗಿದೆ. ವರ್ಷಗಳಿಂದ, ಬಿಜೆಪಿ ಕೇಂದ್ರೀಯ ಸಂಸ್ಥೆಗಳು, ರಾಷ್ಟ್ರೀಯ ಆಯೋಗಗಳು, ಗುಲಾಮ ಗೋದಿ ಮಾಧ್ಯಮ ಹಾಗೂ ನ್ಯಾಯಾಂಗದ ಒಂದು ವಿಭಾಗವನ್ನು ಬಂಗಾಳದ ವಿರುದ್ಧ ಅಸ್ತ್ರವಾಗಿ ಬಳಸಲಾಗುತ್ತಿದೆ. ಅವರು ಮತದಾರರ ಪಟ್ಟಿಯಿಂದ ಕಾನೂನುಬದ್ಧ ಮತದಾರರನ್ನು ಅಳಿಸಲು ಮುಂದಾಗಿದ್ದಾರೆ” ಎಂದು ದೂರಿದ್ದಾರೆ.
ಈ ಲೇಖನ ಓದಿದ್ದೀರಾ?: ಇರಾನ್ ನಾಯಕನ ಆಯ್ಕೆಯಲ್ಲಿ ಅಮೆರಿಕದ ಹಸ್ತಕ್ಷೇಪ; ಮುಂದುವರಿದ ಟ್ರಂಪ್ ದುಷ್ಟಬುದ್ಧಿ
ಬಿಜೆಪಿ ನಾಯಕತ್ವವನ್ನು ‘ದೆಹಲಿ ಜಮೀನ್ದಾರರು’ ಎಂದು ಕರೆದಿರುವ ಮಮತಾ, “ಬಂಗಾಳವನ್ನು ತಮ್ಮ ಅಧೀನಕ್ಕೆ ಪಡೆಯಬೇಕೆಂಬ ಅವರ ಗುರಿಯು ಎಂದಿಗೂ ಯಶಸ್ವಿಯಾಗುವುದಿಲ್ಲ. ಈ ರಾಜ್ಯದ ಜನರನ್ನು ಅವಮಾನಿಸಲು, ಬೆದರಿಸಲು ಹಾಗೂ ಕಿರುಕುಳ ನೀಡಲು ಪ್ರಯತ್ನಿಸುವ ಬಿಜೆಪಿ ಪ್ರತಿಯೊಂದು ಬಂಗಾಳ ವಿರೋಧಿ ಕಾರ್ಯಸೂಚಿಗೆ ನಮ್ಮ ಧರಣಿಯು ಉತ್ತರವಾಗಿದೆ” ಎಂದು ಹೇಳಿದ್ದಾರೆ.




