ಬಿಜೆಪಿ ಎಂಎಲ್ಸಿ ಶೈಲೇಂದ್ರ ಸಿಂಗ್ ಅವರನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ‘ಡಿಜಿಟಲ್ ಅರೆಸ್ಟ್’ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ವಿಚಾರದಲ್ಲಿ ಪೊಲೀಸರು ಸದ್ಯ ಪ್ರಕರಣ ದಾಖಲಿಸಿದ್ದಾರೆ.
ಮಾರ್ಚ್ 2 ರಂದು ಅಪರಿಚಿತ ಸಂಖ್ಯೆಯಿಂದ ಶೈಲೇಂದ್ರ ಸಿಂಗ್ ಅವರಿಗೆ ಕರೆ ಬಂದಿದ್ದು, ಕರೆ ಮಾಡಿದವರು ಮುಂಬೈ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಅಧಿಕಾರಿ ಎಂದು ಹೇಳಿಕೊಂಡಿದ್ದರು. ಹಾಗೆಯೇ ಸಿಂಗ್ ಬ್ಯಾಂಕ್ ಖಾತೆಯನ್ನು ಹಣ ವರ್ಗಾವಣೆ ಮತ್ತು ಇತರ ಅನುಮಾನಾಸ್ಪದ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದರು. ಕೆನರಾ ಬ್ಯಾಂಕ್ನಲ್ಲಿ ಸಿಂಗ್ ಹೆಸರಲ್ಲಿ ಖಾತೆಯಿದೆ ಎಂದು ಹೇಳಿದ್ದರು ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಬೆಂಗಳೂರಿಗೂ ಸದ್ದಿಲ್ಲದೆ ಬಂತು ಡಿಜಿಟಲ್ ಅರೆಸ್ಟ್ ಕಂಪನಿ: ಭಯ ಬಿಡಿ ಜಾಗೃತೆ ವಹಿಸಿ
“ಲಕ್ನೋ ಮತ್ತು ಸುಲ್ತಾನಪುರದ ಹೊರಗೆ ನನಗೆ ಯಾವುದೇ ಬ್ಯಾಂಕ್ ಖಾತೆ ಇಲ್ಲ ಎಂದು ನಾನು ಅವರಿಗೆ ಹೇಳಿದೆ. ಅವರು ನನ್ನನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ವೀಡಿಯೊ ಕರೆಯಲ್ಲಿಯೇ ಇರುವಂತೆ ಮಾಡಿದರು. ಕೋಣೆಯೊಳಗೆಯೇ ಇರುವಂತೆ, ಯಾರೊಂದಿಗೂ ಮಾತನಾಡದಂತೆ ತಿಳಿಸಿದ್ದರು” ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
ಕರೆ ಮಾಡಿದವರು ತಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ವಿವರಗಳನ್ನು ಪದೇ ಪದೇ ಕೇಳಿದ್ದರು. ಇದರಿಂದಾಗಿ ಸಿಂಗ್ನ ಕೆಲವು ಪರಿಚಯಸ್ಥರು ಅನುಮಾನಗೊಂಡು ಫೋನ್ ಸಂಖ್ಯೆಯನ್ನು ಪರಿಶೀಲಿಸಿದಾಗ ಅದು ಮುಂಬೈ ಎಟಿಎಸ್ ಅಲ್ಲ, ಬದಲಾಗಿ ಮಧ್ಯಪ್ರದೇಶದ ಸತ್ನಾದ ಮಹಿಳೆಯ ಹೆಸರಿನಲ್ಲಿ ನೋಂದಾಯಿಸಲಾಗಿರುವ ಸಂಖ್ಯೆ ಎಂದು ತಿಳಿದುಬಂದಿದೆ.
ಕರೆ ಮಾಡಿದವರು ತಮ್ಮ ಗುರುತು ಬಹಿರಂಗಗೊಳ್ಳಬಹುದು ಎಂದು ಭಾವಿಸಿದಾಗ ಸಂಪರ್ಕ ಕಡಿತಗೊಳಿಸಿದ್ದಾರೆ. ನಂತರ ಸಿಂಗ್ ಸುಲ್ತಾನ್ಪುರದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಕರೆ ಮಾಡಿದ ಫೋನ್ ಸಂಖ್ಯೆಗಳು ಮತ್ತು ಐಪಿ ವಿಳಾಸಗಳನ್ನು ಟ್ರ್ಯಾಕ್ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳು
ಅಪರಾಧಿಗಳು ಅಧಿಕಾರಿಗಳಂತೆ ನಟಿಸಿ ಜನರನ್ನು ಹೆದರಿಸಿ ಹಣವನ್ನು ಲೂಟಿ ಮಾಡುವ ಡಿಜಿಟಲ್ ಅರೆಸ್ಟ್ ಎಂಬ ಸೈಬರ್ ವಂಚನೆ ಅಧಿಕವಾಗುತ್ತಿದೆ. ಹೆಚ್ಚಾಗಿ ವಂಚಕರು ಪೊಲೀಸ್, ಸಿಬಿಐ, ಅಥವಾ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿಗಳ ಹೆಸರಿನಲ್ಲಿ ಫೋನ್ ಕರೆ ಅಥವಾ ವಿಡಿಯೋ ಕರೆ ಮಾಡುತ್ತಿದ್ದಾರೆ. ನಿಮ್ಮ ಹೆಸರಿನಲ್ಲಿ ಬಂದಿರುವ ಪಾರ್ಸೆಲ್ನಲ್ಲಿ ಡ್ರಗ್ಸ್ ಅಥವಾ ಅಕ್ರಮ ವಸ್ತುಗಳಿವೆ ಎಂದು ಅಥವಾ ನೀವು ಮನಿ ಲಾಂಡರಿಂಗ್ನಲ್ಲಿ ಭಾಗಿಯಾಗಿದ್ದೀರಿ ಎಂದು ಸುಳ್ಳು ಆರೋಪ ಮಾಡಿ ಹಣ ದೋಚುತ್ತಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಇಂದಿರಾನಗರದ 57 ವರ್ಷದ ಐಟಿ ಕಂಪನಿ ಎಕ್ಸಿಕ್ಯೂಟಿವ್ ಒಬ್ಬರು ಸುಮಾರು ₹31.83 ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ. ವಂಚಕರು ತಮ್ಮನ್ನು ಸಿಬಿಐ ಮತ್ತು ಆರ್ಬಿಐ ಅಧಿಕಾರಿಗಳೆಂದು ಪರಿಚಯಿಸಿಕೊಂಡು, ಅವರ ಹೆಸರಿನ ಪಾರ್ಸೆಲ್ನಲ್ಲಿ ಮಾದಕ ವಸ್ತುಗಳಿವೆ ಎಂದು ಹೆದರಿಸಿ ಬರೋಬ್ಬರಿ ಆರು ತಿಂಗಳ ಕಾಲ “ಡಿಜಿಟಲ್ ಕಸ್ಟಡಿ”ಯಲ್ಲಿ ಇರಿಸಿದ್ದರು.
ಇನ್ನು ಮುಂಬೈ ಮೂಲದ ಉದ್ಯಮಿಯೊಬ್ಬರು ಜಾರಿ ನಿರ್ದೇಶನಾಲಯ (ED) ಮತ್ತು ಸಿಬಿಐ ಅಧಿಕಾರಿಗಳ ಸೋಗಿನಲ್ಲಿದ್ದ ವಂಚಕರಿಗೆ ಬರೋಬ್ಬರಿ ₹58.13 ಕೋಟಿ ಹಣವನ್ನು ವರ್ಗಾಯಿಸಿ ವಂಚನೆಗೆ ಒಳಗಾಗಿದ್ದರು. ಈ ಹಣವನ್ನು ವಿದೇಶಗಳಿಗೆ ಕ್ರಿಪ್ಟೋಕರೆನ್ಸಿ ಮೂಲಕ ವರ್ಗಾಯಿಸಲಾಗಿತ್ತು. ಇನ್ನು ಮೈಸೂರಿನ ಇಬ್ಬರು ಹಿರಿಯ ನಾಗರಿಕರು ಎನ್ಐಎ ಅಧಿಕಾರಿಗಳ ಹೆಸರಿನಲ್ಲಿ ಬಂದ ಕರೆಗೆ ಮರುಳಾಗಿ ₹1.92 ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ.





