ನಮ್ಮ ಗ್ರಾಮದಲ್ಲಿ ಸರಿಯಾದ ರಸ್ತೆಯಿಲ್ಲ. ರೋಗಿಗಳು ತುರ್ತಾಗಿ ಆಸ್ಪತ್ರೆ ತಲುಪಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ರಸ್ತೆ ಸರಿಯಿಲ್ಲದ ಕಾರಣ, ಸೂಕ್ತ ಸಾರಿಗೆ ಸಂಪರ್ಕವೂ ಇಲ್ಲ. ವಾಹನ ಸಂಚಾರ ಮತ್ತು ಗ್ರಾಮಸ್ಥರ ಅನುಕೂಲಕ್ಕಾಗಿ ರಸ್ತೆ ನಿರ್ಮಾಣ ಮಾಡಿಸಿ ಎಂದು ಗರ್ಭಿಣಿಯೊಬ್ಬರು ಬಿಜೆಪಿ ಸಂಸದನಲ್ಲಿ ಮನವಿ ಮಾಡಿದ್ದಾರೆ. ಆಕೆಯ ಮನವಿಯನ್ನು ಆಲಿಸಿದ ಸಂಸದ, ಸಮಸ್ಯೆಗಳ ಬಗ್ಗೆ ಚರ್ಚಿಸದೆ, ಆಕೆಯ ಹೆರಿಗೆ ದಿನಾಂಕವನ್ನು ಕೇಳಿದ್ದಾರೆ. ಸಂಸದ ನಿರ್ಲಕ್ಷ್ಯ ಧೋರಣೆ ಮತ್ತು ಅನುಚಿತ ವರ್ತನೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯು ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ. ಕಡ್ಡಿ–ಬಗೈಹಾ ಗ್ರಾಮದ ಗರ್ಭಿಣಿ ಲೀಲಾ ಸಾಹು ಅವರು ಬಿಜೆಪಿ ಸಂಸದ ಸಂಸದ ರಾಜೇಶ್ ಮಿಶ್ರಾ ಅವರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಆದರೆ, ಆಕೆಯ ಮನವಿಗೆ ಸ್ಪಂದಿಸದ ಸಂಸದ ಮಿಶ್ರಾ, ಆಕೆಯ ಹೆರಿಗೆ ದಿನಾಂಕ ಯಾವಾಗ ಎಂದು ಪ್ರಶ್ನಿಸಿದ್ದಾರೆ.
ರಸ್ತೆ ವಿಚಾರವಾಗಿ ಸುದ್ದಿಗಾರರ ಜತೆಗೆ ಮಾತನಾಡಿದ 25 ವರ್ಷ ಲೀಲಾ ಸಾಹು ಎಂಬ ಗರ್ಭಿಣಿ ಮಹಿಳೆ, “ಕಳೆದ ವರ್ಷ ಸಾಮಾಜಿಕ ಮಾಧ್ಯಮದಲ್ಲಿ ರಸ್ತೆಯ ವಿಚಾರವಾಗಿ ಅಭಿಯಾನ ಆರಂಭಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಮನವಿ ಮಾಡಿದ್ದೆವು. ಇದರ ಬೆನ್ನಲ್ಲೇ, ಕಳೆದ ವರ್ಷ ಮಳೆಗಾಲದ ನಂತರ ರಸ್ತೆ ನಿರ್ಮಿಸುವುದಾಗಿ ಸಿಧಿ ಸಂಸದ ರಾಜೇಶ್ ಮಿಶ್ರಾ ಭರವಸೆ ನೀಡಿದ್ದರು. ಆದರೆ, ಅವರು ತಮ್ಮ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
“ನಮ್ಮ ಗ್ರಾಮಕ್ಕೆ ಸಂಪರ್ಕ ರಸ್ತೆಯನ್ನು ಕಲ್ಪಿಸಬೇಕು. ನಾನು ಮಗುವಿಗೆ ಜನ್ಮ ನೀಡಿದ ಬಳಿಕ ದೆಹಲಿಗೆ ತೆರಳಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗುತ್ತೇನೆ. ಆದಷ್ಟು ಬೇಗ ರಸ್ತೆ ನಿರ್ಮಿಸುವಂತೆ ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ.
ಸಿಧಿ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಕಡ್ಡಿ–ಬಗೈಹಾ ಗ್ರಾಮಕ್ಕೆ ಸರಿಯಾದ ಸಂಪರ್ಕ ರಸ್ತೆ ಇಲ್ಲ ಎಂಬುದರ ಕುರಿತು ಗಮನ ಸೆಳೆಯಲು ಗ್ರಾಮಸ್ಥರು ಹಲವಾರು ರೀಲ್ಸ್ಗಳನ್ನು ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಅವರ ಸಂಕಷ್ಟಕ್ಕೆ ಪರಿಹಾರ ದೊರೆತಿಲ್ಲ.
“ನಮ್ಮ ಊರಿನಲ್ಲಿ ನಾನು ಸೇರಿದಂತೆ ಇತರೆ ಐವರು ಗರ್ಭಿಣಿಯರಿದ್ದೇವೆ. ರಸ್ತೆ ಸಮಸ್ಯೆ ಇರುವುದರಿಂದ ನಾವು ಆಸ್ಪತ್ರೆಗೆ ಹೋಗುವುದಕ್ಕೆ ಕಷ್ಟವಾಗುತ್ತಿದೆ. ಹಾಗಾಗಿ, ಕಡ್ಡಿ–ಬಗೈಹಾದಿಂದ ಗಂಗಾರಿಗೆ 10 ಕಿ.ಮೀ ರಸ್ತೆ ನಿರ್ಮಾಣ ಮಾಡಬೇಕು” ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ.
ಗರ್ಭಿಣಿಯ ಮನವಿಗೆ ಪ್ರತಿಕ್ರಿಯಿಸಿರುವ ಸಂಸದ ರಾಜೇಶ್ ಮಿಶ್ರಾ, “ಇದು ಮೋಹನ್ ಯಾದವ್ ಅವರ ಸರ್ಕಾರ. ನಮ್ಮಲ್ಲಿ ಆ್ಯಂಬುಲೆನ್ಸ್ ಸೌಲಭ್ಯಗಳಿವೆ. ಚಿಂತಿಸುವ ಅಗತ್ಯವಿಲ್ಲ. ಗರ್ಭಿಣಿಯರು ತಮ್ಮ ನಿಗದಿತ ಹೆರಿಗೆಯ ದಿನಾಂಕ ತಿಳಿಸಿದರೆ, ನಾವು ಅವರನ್ನು ಒಂದು ವಾರದ ಮೊದಲೇ ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ. ಜನರು ಯಾವುದಾದರೊಂದು ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಲು ಬಯಸುತ್ತಾರೆ. ಇದನ್ನು ಈ ರೀತಿ ಮುನ್ನೆಲೆಗೆ ತರುವ ಅಗತ್ಯವೇನಿದೆ” ಎಂದಿದ್ದಾರೆ.
ಕಳೆದ ಒಂದು ವರ್ಷದಿಂದ ತಮ್ಮೂರಿನ ರಸ್ತೆಗಾಗಿ ಸಾಹು ಅವರು ಪ್ರತಿಭಟಿಸುತ್ತಿದ್ದಾರೆ. ತಮ್ಮೂರಿಗೆ ರಸ್ತೆ ಮಾಡಿಸಿಕೊಡಿ ಎಂದೂ ಮನವಿ ಮಾಡುತ್ತಿದ್ದರೂ ಕೂಡ ಸಂಸದರ ಈ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.




