ರಾಷ್ಟ್ರಗೀತೆ ‘ವಂದೇ ಮಾತರಂ’ನ 150ನೇ ವರ್ಷಾಚರಣೆ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್, ‘ವಂದೇ ಮಾತರಂ’ ಘೋಷಣೆಯನ್ನು ತಮ್ಮ ವೈಫಲ್ಯಗಳು ಮತ್ತು ಅಪರಾಧಗಳನ್ನು ಮುಚ್ಚಿಹಾಕಲು ಬಳಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಮಾತೃಭೂಮಿಗೆ ವಂದನೆ ಸಲ್ಲಿಸುವುದರ ಬದಲು, ಕೋಟಿ ಕೋಟಿ ಮೌಲ್ಯದ ರಾಷ್ಟ್ರೀಯ ಆಸ್ತಿಗಳನ್ನು ಮಾರಾಟ ಮಾಡಿ ದೇಶಕ್ಕೆ ದ್ರೋಹ ಎಸಗಲಾಗುತ್ತಿದೆ ಎಂದು ಸಿಂಗ್ ನೇರ ಆರೋಪ ಮಾಡಿದರು.
ನಮ್ಮದು ದೇಶಭಕ್ತಿ, ನಿಮ್ಮದು ದೇಶದ್ರೋಹ
ಆಮ್ ಆದ್ಮಿ ಪಕ್ಷದ ರ್ಯಾಲಿಗಳಲ್ಲಿ, ಸಭೆಗಳಲ್ಲಿ “ಭಾರತ್ ಮಾತಾ ಕೀ ಜೈ! ವಂದೇ ಮಾತರಂ!” ಜೋರಾಗಿ ಕೂಗುತ್ತಾರೆ. ನಿಮಗೆ ಒಮ್ಮೆ ಮನಸ್ಸು ಬಂದರೆ ಬನ್ನಿ ನಮ್ಮ ಕಾರ್ಯಕ್ರಮಕ್ಕೆ. ನೀವು ಕೂಗುವುದಕ್ಕಿಂತ ಜೋರಾಗಿ ಅಲ್ಲಿ ವಂದೇ ಮಾತರಂ ಕೂಗುತ್ತಾರೆ. ಸದನದಲ್ಲೂ ಕೂಗಬೇಕೆಂದರೆ ಕೂಗಿ! ಆದರೆ ಈ ಘೋಷಣೆಗಳ ಹಿಂದೆ ಅಪರಾಧಗಳನ್ನು ಅಡಗಿಸುವುದಕ್ಕಲ್ಲ.
ನೀವು ಈ ಘೋಷಣೆಗಳ ಹಿಂದೆ ನಿಮ್ಮ ಪಾಪಗಳನ್ನು ಮುಚ್ಚಿಟ್ಟುಕೊಳ್ಳುತ್ತಿದ್ದೀರಿ ಎಂದು ಸಂಜಯ್ ಸಿಂಗ್ ವಾಗ್ದಾಳಿ ನಡೆಸಿದರು.
ಶ್ರೀರಾಮನ ಹೆಸರಿನಲ್ಲಿ ಜನರಿಗೆ ಅನ್ಯಾಯ
ಸಂಜಯ್ ಸಿಂಗ್ ಅವರು ತಮ್ಮ ಭಾಷಣದ ಆರಂಭದಲ್ಲಿ, ಉತ್ತರ ಪ್ರದೇಶದ ಇಂಧನ ಸಚಿವರೊಬ್ಬರು 21 ಗಂಟೆಗಳ ವಿದ್ಯುತ್ ಕಡಿತದಿಂದ ಬಳಲುತ್ತಿದ್ದ ವ್ಯಾಪಾರಿಗಳಿಗೆ ‘ಜೈ ಶ್ರೀ ರಾಮ್’ ಎಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಂಡ ಘಟನೆಯನ್ನು ಪ್ರಸ್ತಾಪಿಸಿದರು. “ಭಗವಾನ್ ಶ್ರೀರಾಮನು ನಿಮಗೆ ನಿಷ್ಪ್ರಯೋಜಕರಾಗಿ, ಜನರನ್ನು ಕತ್ತಲಲ್ಲಿಡಲು ಹೇಳಿದ್ದಾರೆಯೇ? ಇದು ರಾಮ ನೀಡಿದ ಶಿಕ್ಷಣವೇ?” ಎಂದು ಅವರು ಪ್ರಶ್ನಿಸಿದರು. ದೇಶಭಕ್ತಿಯ ಘೋಷಣೆಗಳು ಕೇವಲ ಅಪರಾಧಗಳನ್ನು ಮರೆಮಾಚುವ ಸಾಧನಗಳಾಗಬಾರದು ಎಂದು ಸಿಂಗ್ ಹೇಳಿದರು.
1 ರೂ.ಗೆ 1050 ಎಕರೆ ಭೂಮಿ ಮಾರಾಟ
‘ವಂದೇ ಮಾತರಂ’ ಎಂದರೆ ಮಾತೃಭೂಮಿಗೆ ವಂದನೆ ಸಲ್ಲಿಸುವುದು ನಿಜ. ಆದರೆ, ಈ ಸರ್ಕಾರವು ಮಾತೃಭೂಮಿಯನ್ನು ‘ಮಾರಾಟ’ ಮಾಡುವ ಮೂಲಕ ವಂದನೆ ಸಲ್ಲಿಸುತ್ತಿದೆ. ಕೇವಲ 1 ರೂಪಾಯಿಗೆ ಅದಾನಿ ಸಮೂಹಕ್ಕೆ 1050 ಎಕರೆ ಭೂಮಿ ಮತ್ತು ಲಕ್ಷಾಂತರ ಮರಗಳನ್ನು ನೀಡಲಾಗಿದೆ. ವಿಮಾನ ನಿಲ್ದಾಣಗಳು, ರೈಲ್ವೆ, ಸಮುದ್ರ ತೀರಗಳು, ಕಲ್ಲಿದ್ದಲು ಮತ್ತು ಅನಿಲ ಕ್ಷೇತ್ರಗಳನ್ನು ಮಾರಾಟ ಮಾಡಲಾಗುತ್ತಿದೆ. ಮಾತೃಭೂಮಿಯನ್ನು ಮಾರುವವರು ಮಾತೃಭೂಮಿಗೆ ವಂದನೆ ಸಲ್ಲಿಸುವವರಾಗಲು ಸಾಧ್ಯವಿಲ್ಲ” ಎಂದು ಸಂಜಯ್ ಸಿಂಗ್ ಗುಡುಗಿದರು.
ದಲಿತರ ಕುರಿತ ಹೇಳಿಕೆಗೆ ವಿರೋಧ ಏಕೆ?
ಸದನದಲ್ಲಿ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ‘ದಲಿತ’ ಎಂಬ ಪದವನ್ನು ಪ್ರಸ್ತಾಪಿಸಿದಾಗ, ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿ ವಿರೋಧ ವ್ಯಕ್ತಪಡಿಸಿದರು ಎಂಬುದನ್ನು ಸಂಜಯ್ ಸಿಂಗ್ ಪ್ರಮುಖವಾಗಿ ಉಲ್ಲೇಖಿಸಿದರು. “ದಲಿತರು, ಹಿಂದುಳಿದವರು ಮತ್ತು ಆದಿವಾಸಿಗಳು ಭಾರತ ಮಾತೆಯ ಮಕ್ಕಳಲ್ಲವೇ? ಅವರ ಬಗ್ಗೆ ಮಾತನಾಡಿದರೆ ನಿಮಗೆ ಏಕೆ ಅಸಮಾಧಾನ? ಈ ಸಮುದಾಯಗಳ ಬಗ್ಗೆ ನಿಮಗೆ ಇಷ್ಟೊಂದು ದ್ವೇಷ ಏಕೆ?” ಎಂದು ಬಿಜೆಪಿ ಸದಸ್ಯರ ಧೋರಣೆಯನ್ನು ತೀವ್ರವಾಗಿ ಟೀಕಿಸಿದರು.
ತ್ರಿವರ್ಣ ಧ್ವಜ ಮತ್ತು ರಾಷ್ಟ್ರಗೀತೆ ವಿರೋಧಿಗಳ ಇತಿಹಾಸ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರ್ಎಸ್ಎಸ್ ಪಾತ್ರದ ಕುರಿತು ಪ್ರಶ್ನಿಸಿದ ಶಹೀದ್ ಖುದೀರಾಮ್ ಬೋಸ್, ರೋಶನ್ ಸಿಂಗ್, ರಾಜೇಂದ್ರ ಲಾಹಿಡಿ, ಅಶ್ಫಾಕುಲ್ಲಾ ಖಾನ್, ರಾಮಪ್ರಸಾದ್ ಬಿಸ್ಮಿಲ್, ಭಗತ್ ಸಿಂಗ್, ಸುಖದೇವ್, ರಾಜಗುರು ಸೇರಿದಂತೆ ಅನೇಕ ಕ್ರಾಂತಿಕಾರಿಗಳು ‘ವಂದೇ ಮಾತರಂ’ ಹೇಳುತ್ತಾ ಗಲ್ಲಿಗೇರಿದರು. ನಾನು ಕಳೆದ 31 ವರ್ಷಗಳಿಂದ ಪ್ರತಿ 3 ಡಿಸೆಂಬರ್ ಖುದೀರಾಮ್ ಬೋಸ್ ಜಯಂತಿ ಆಚರಿಸುತ್ತೇನೆ. ನನ್ನ ಸಂಸ್ಥೆಯ ಹೆಸರು ಚಂದ್ರಶೇಖರ ಆಜಾದ್ ಹೆಸರಿನಲ್ಲಿದೆ. ಆದರೆ ಆ ಕಾಲದಲ್ಲಿ ನಿಮ್ಮ ಪೂರ್ವಜರು ಏನು ಮಾಡುತ್ತಿದ್ದರು? ಭಗತ್ ಸಿಂಗ್ “ವಂದೇ ಮಾತರಂ” ಕೂಗುತ್ತಿದ್ದಾಗ ನಿಮ್ಮ ಪೂರ್ವಜರು ಯಾವ ಬದಿಯಲ್ಲಿದ್ದರು? ಆದರೆ, ‘ವಂದೇ ಮಾತರಂ’ ಕೂಗಿ ಜೈಲಿಗೆ ಹೋದ ನಾಲ್ಕು ಆರ್ಎಸ್ಎಸ್ ನಾಯಕರ ಹೆಸರನ್ನು ಹೇಳುವ ಧೈರ್ಯ ಇದೆಯೇ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು. “ಸ್ವಾತಂತ್ರ್ಯ ಹೋರಾಟದಲ್ಲಿ ನಿಮಗೆ ಯಾವುದೇ ಇತಿಹಾಸವಿಲ್ಲ” ಎಂದು ಖಾರವಾಗಿ ನುಡಿದರು.
52 ವರ್ಷಗಳ ಕಾಲ ರಾಷ್ಟ್ರಧ್ವಜಕ್ಕೆ ಅಗೌರವ
ಸರ್ದಾರ್ ಪಟೇಲ್ ನಿಮ್ಮವರೆಂದು ಹೇಳುತ್ತೀರಿ, ಆದರೂ ಅವರೇ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಆರ್ಎಸ್ಎಸ್ ಅನ್ನು ನಿಷೇಧಿಸಿದ್ದನ್ನು ಸ್ಮರಿಸಿದ ಸಂಜಯ್ ಸಿಂಗ್, ಆರ್ಎಸ್ಎಸ್ 52 ವರ್ಷಗಳ ಕಾಲ ತಮ್ಮ ಪ್ರಧಾನ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿರಲಿಲ್ಲ. ಗಾಂಧೀಜಿ ಹತ್ಯೆ ನಂತರ 18 ತಿಂಗಳು ಜೈಲಿನಲ್ಲಿದ್ದ RSS ಬಿಡುಗಡೆಯಾದಾಗ
ಷರತ್ತು ಇಟ್ಟರು: “ತ್ರಿವರ್ಣ ಧ್ವಜವನ್ನು ಗೌರವಿಸಬೇಕು.” ಅಂದರೆ ನೀವು ಕೂಡ ತ್ರಿವರ್ಣವನ್ನು ಒಪ್ಪುತ್ತಿರಲಿಲ್ಲ! 28 ಡಿಸೆಂಬರ್ 1949ರ “ಆರ್ಗನೈಜರ್” ಪತ್ರಿಕೆಯಲ್ಲಿ “ಜನ ಗಣ ಮನ”ವನ್ನು ರಾಷ್ಟ್ರಗೀತೆಯನ್ನು ಹಾಕಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದೀರಿ. ನೀವು ರಾಷ್ಟ್ರಗೀತೆ, ರಾಷ್ಟ್ರಧ್ವಜ – ಎಲ್ಲವನ್ನೂ ವಿರೋಧಿಸಿದ್ದೀರಿ. ಶ್ಯಾಮಪ್ರಸಾದ ಮುಖರ್ಜಿ ಫಜಲುಲ್ ಹಕ್ ಸರ್ಕಾರದಲ್ಲಿ ಸಚಿವರಾಗಿ ಬ್ರಿಟಿಷ್ ಗವರ್ನರ್ಗೆ ಪತ್ರ ಬರೆದು “ಕ್ವಿಟ್ ಇಂಡಿಯಾ ಚಳವಳಿಯನ್ನು ಯಾವ ರೀತಿಯಲ್ಲಾದರೂ ತಡೆಯಿರಿ” ಎಂದಿದ್ದರು. ಜಿನ್ನಾ ಜೊತೆಗಿನ ನಿಮ್ಮ ಸಂಬಂಧಗಳೂ ದಾಖಲೆಯಲ್ಲಿವೆ. ತ್ರಿವರ್ಣ ಧ್ವಜ ಹಾರಿಸಿದ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿ 13 ವರ್ಷಗಳ ಕಾಲ ಮೊಕದ್ದಮೆ ನಡೆಸಿದರು. ಅಲ್ಲದೆ, 1949ರಲ್ಲಿ ಆರ್ಎಸ್ಎಸ್ ಮುಖವಾಣಿ ‘ಆರ್ಗನೈಸರ್’ ಪತ್ರಿಕೆಯಲ್ಲಿ ‘ಜನ ಗಣ ಮನ’ ರಾಷ್ಟ್ರಗೀತೆಯನ್ನು ಕೇವಲ ಮನರಂಜನೆಯ ವಸ್ತು ಎಂದು ಟೀಕಿಸಿರುವುದನ್ನು ಉಲ್ಲೇಖಿಸಿ, “ರಾಷ್ಟ್ರಗೀತೆಯನ್ನು ವಿರೋಧಿಸಿದ ಈ ನಾಯಕರು ದೇಶದ ಕ್ಷಮೆ ಕೇಳಬೇಕು” ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಗಳು ಬದಲಾದರೂ ಉತ್ತರ ಕರ್ನಾಟಕದ ಜನರ ಬದುಕು ಬದಲಾಗಲಿಲ್ಲವೇಕೆ?
ಸೈನಿಕರಿಗೆ ದ್ರೋಹ ಬಗೆದ ‘ಅಗ್ನಿವೀರ್’
ದೇಶದ ಗಡಿಯನ್ನು ರಕ್ಷಿಸುವ ಸೈನಿಕರ ಬಗ್ಗೆ ಪ್ರಸ್ತಾಪಿಸಿದ ಸಿಂಗ್, “ವಂದೇ ಮಾತರಂ’ ಘೋಷಿಸುವ ನಮ್ಮ ಸೈನಿಕರಿಗೆ ನೀವು ನಾಲ್ಕು ವರ್ಷಗಳ ‘ಅಗ್ನಿವೀರ್’ ಯೋಜನೆಯನ್ನು ತಂದು ಬೆನ್ನಿಗೆ ಚೂರಿ ಹಾಕಿದ್ದೀರಿ. -50 ಡಿಗ್ರಿ ತಾಪಮಾನದಲ್ಲಿ ಸಿಯಾಚಿನ್ನಲ್ಲಿ ಮತ್ತು +50 ಡಿಗ್ರಿ ತಾಪಮಾನದಲ್ಲಿ ಜೈಸಲ್ಮೇರ್ನಲ್ಲಿ ಮಾತೃಭೂಮಿಯನ್ನು ರಕ್ಷಿಸುವ ಯೋಧರಿಗೆ ದ್ರೋಹ ಬಗೆದು, ದೇಶಭಕ್ತಿಯ ಪಾಠ ಹೇಳಲು ಹೊರಟಿದ್ದೀರಿ ಎಂದು ಕಿಡಿಕಾರಿದರು.
ಮತ ಕಳ್ಳ ಸರ್ಕಾರ
ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದ ಸಿಂಗ್, “ಸೈಕಲ್ ಕಳ್ಳ, ಲೂಟಿ ಕಳ್ಳರ ಬಗ್ಗೆ ಕೇಳಿದ್ದೆ. ಆದರೆ ನೀವು ಮತ ಕಳ್ಳರು ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದಲ್ಲಿ 3 ಕೋಟಿ,ಬಿಹಾರದಲ್ಲಿ 80 ಲಕ್ಷ ವೋಟ್ ಕಡಿತಗೊಂಡಿದೆ. ಜೊತೆಗೆ, ದೇಶದ ಮೇಲೆ 200 ಲಕ್ಷ ಕೋಟಿ ರೂಪಾಯಿಗಳ ಭಾರೀ ಸಾಲವನ್ನು ಹೇರಲಾಗಿದೆ. ಈ ದುಃಸ್ಥಿತಿಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಅವರು ಆರೋಪಿಸಿದರು.
ನಿಜವಾದ ದೇಶಭಕ್ತರು ಬಡವರು
ಸಂಸ್ಕೃತ ಜ್ಞಾನವಿಲ್ಲದ ಅಥವಾ ಕಡಿಮೆ ವಿದ್ಯಾವಂತರಾದ ಕಾರ್ಮಿಕರು, ರೈತರು ಮತ್ತು ದಲಿತರು ‘ವಂದೇ ಮಾತರಂ’ ಹೇಳಲು ಬರದ ಕಾರಣ ಅವರನ್ನು ದೇಶಭಕ್ತರಲ್ಲ ಎಂದು ಪರಿಗಣಿಸುವ ಧೋರಣೆ ಸರಿಯಿಲ್ಲ. ದೇಶವನ್ನು ಲೂಟಿ ಮಾಡುವ ಅದಾನಿ ಅವರಂತಹ ಬಂಡವಾಳಶಾಹಿಗಳಿಗಿಂತ, ತಮ್ಮ ಮಕ್ಕಳಿಗಾಗಿ ದುಡಿಯುವ, ದೇಶಕ್ಕೆ ಸೇವೆ ಸಲ್ಲಿಸುವ ಈ ಬಡವರೇ ನಿಜವಾದ ದೇಶಭಕ್ತರು ಎಂದು ಸಂಜಯ್ ಸಿಂಗ್ ಹೇಳಿದರು.
ಮುಸ್ಲಿಮರನ್ನು ಗುರಿಯಾಗಿಸಿ ರಾಜಕೀಯ
ಎನ್ಆರ್ಸಿ (NRC) ಪ್ರಕ್ರಿಯೆಯಡಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಬಂಧನ ಕೇಂದ್ರಗಳನ್ನು ನಿರ್ಮಿಸುವ ಕುರಿತು ಮಾತನಾಡಿದ್ದನ್ನು ಸಿಂಗ್ ಉಲ್ಲೇಖಿಸಿದರು. ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ದೊಡ್ಡ ದೊಡ್ಡ ಬಂಧನ ಕೇಂದ್ರಗಳನ್ನು ನಿರ್ಮಿಸುತ್ತಿದೆ. ಇದನ್ನು ಮುಸ್ಲಿಮರನ್ನು ಗುರಿಯಾಗಿಸಿ ಮಾಡಲಾಗುತ್ತಿದೆ. ಬಿಹಾರದಲ್ಲಿ ಮತದಾರರ ಪಟ್ಟಿಯಿಂದ 80 ಲಕ್ಷ ಜನರ ಹೆಸರನ್ನು ಅಳಿಸಲಾಗಿದೆ. ಆದರೆ ಆ 80 ಲಕ್ಷದೊಳಗೆ ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದವರು ಕೇವಲ 78 ಮುಸ್ಲಿಮರು ಮತ್ತು 315 ಇತರರು ಮಾತ್ರ ಇದ್ದರು. ಉಳಿದ 79 ಲಕ್ಷ 99 ಸಾವಿರದಷ್ಟು ಜನರೆಲ್ಲ ಭಾರತೀಯ ಪ್ರಜೆಗಳಾಗಿದ್ದರು. ಹಾಗಿದ್ದರೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಾರತೀಯರ ಹೆಸರೇಕೆ ತೆಗೆದರು? ಬಂಧನ ಕ್ಯಾಂಪುಗಳನ್ನೇಕೆ ಕಟ್ಟುತ್ತಿದ್ದಾರೆ? ಇದೆಲ್ಲವೂ ಅಕ್ರಮ ಬಾಂಗ್ಲಾದೇಶಿಗಳನ್ನು ಹಿಡುಕುವ ನೆಪದಲ್ಲಿ ದೇಶದ ಮುಸ್ಲಿಂ-ಅಲ್ಪಸಂಖ್ಯಾತರನ್ನು ಭಯಭೀತರನ್ನಾಗಿ ಮಾಡಿ, ಗಲಭೆ-ಅಶಾಂತಿಯ ವಾತಾವರಣ ಸೃಷ್ಟಿಸುವ ದೊಡ್ಡ ರಾಜಕೀಯ ಷಡ್ಯಂತ್ರ ನಿರ್ಮಿಸುವುದು ನಿಮ್ಮ ಉದ್ದೇಶ ಎಂದು ಸಂಜಯ್ ಸಿಂಗ್ ಆರೋಪಿಸಿದರು.
ದೇಶವನ್ನು ಲೂಟಿ ಮಾಡಲು ಅವಕಾಶವಿಲ್ಲ
ಡಾಕುಗಳು ‘ಜೈ ಭವಾನಿ’ ಎಂದು ಹೇಳಿಕೊಂಡು ಹಳ್ಳಿಗಳನ್ನು ಲೂಟಿ ಮಾಡಿಕೊಂಡು ಹೋಗುವ ಸಿನಿಮಾದ ದೃಶ್ಯಗಳನ್ನು ನಾವು ನೋಡಿದ್ದೇವೆ. ಅದೇ ರೀತಿ, ಈ ದೇಶದಲ್ಲಿ ‘ವಂದೇ ಮಾತರಂ’ ಮತ್ತು ‘ಭಾರತ ಮಾತಾ ಕೀ ಜೈ’ ಘೋಷಣೆಗಳನ್ನು ಕೂಗಿಕೊಂಡು ದೇಶವನ್ನು ಲೂಟಿ ಮಾಡಲು ಯಾವುದೇ ಸರ್ಕಾರಕ್ಕೆ ನಾವು ಅವಕಾಶ ನೀಡುವುದಿಲ್ಲ. ನಿರುದ್ಯೋಗ, ದರ ಏರಿಕೆ, ದಲಿತರ ಮೇಲಿನ ದೌರ್ಜನ್ಯ – ಇವೆಲ್ಲದರ ಬಗ್ಗೆ ಮಾತನಾಡುವುದಿಲ್ಲ. ಸಂಸ್ಕೃತ ತಿಳಿಯದ ದಿನ ದಲಿತ-ಹಿಂದುಳಿದ-ಆದಿವಾಸಿ ಕಾರ್ಮಿಕರನ್ನು “ನೀವು ವಂದೇ ಮಾತರಂ ಹಾಡಲಾರಿರಿ, ದೇಶಭಕ್ತರಲ್ಲ” ಎನ್ನುವುದು ಅನ್ಯಾಯ. ಯಾರು ನಿಷ್ಠಾವಂತರು, ಯಾರು ದೇಶದ್ರೋಹಿಗಳು ಎಂಬುದನ್ನು ಕಾಲವೇ ನಿರ್ಧರಿಸುತ್ತದೆ ಎಂದು ವಂದೇ ಮಾತರಂ ಗೀತೆ ಹಾಡುತ್ತಾ ತಮ್ಮ ಚರ್ಚೆಯನ್ನು ಮುಕ್ತಾಯಗೊಳಿಸಿದರು.





