ಸ್ಫೋಟಕ ತಯಾರಿಕಾ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ಸಂಭವಿಸಿ ಕನಿಷ್ಠ 17 ಮಂದಿ ಸಾವನ್ನಪ್ಪಿ, 18 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ನಗರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಕಲ್ಮೇಶ್ವರ ತಹಸಿಲ್ನ ರೌಲ್ಗಾಂವ್ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ನೋನಲ್ ಕ್ರಿಂಪಿಂಗ್ ಪ್ಲಾಂಟ್ ಪ್ರದೇಶದಲ್ಲಿ ಬೆಳಿಗ್ಗೆ 6.45ಕ್ಕೆ ಅಗ್ನಿ ಅವಘಡ ಸಂಭವಿಸಿ ಪ್ರಬಲ ಸ್ಫೋಟವಾಗಿದೆ. ಬೆಳಿಗ್ಗೆ 6 ಗಂಟೆಗೆಯೇ ಹಲವು ಕಾರ್ಮಿಕರು ಕಾರ್ಖಾನೆಗೆ ಬಂದು ನಿತ್ಯದಂತೆ ಕೆಲಸ ನಿರ್ವಹಿಸುತ್ತಿದ್ದರು. ಘಟನೆಯ ಸಮಯದಲ್ಲಿ ಇಬ್ಬರು ಮೇಲ್ವಿಚಾರಕರು ಮತ್ತು ಸುಮಾರು 35 ಕಾರ್ಮಿಕರಿದ್ದರು. ಮೃತರಲ್ಲಿ ಬಹುತೇಕರು ಮಹಿಳೆಯರು ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಆಂಧ್ರ ಪ್ರದೇಶ | ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; 20 ಮಂದಿ ಸಾವು
ಕೈಗಾರಿಕಾ ಸ್ಫೋಟಕಗಳನ್ನು ತಯಾರಿಸುವ ಪ್ರಮುಖ ಕಾರ್ಖಾನೆ ಇದಾಗಿದ್ದು, ಗಣಿಗಾರಿಕೆ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಬಳಸುವ ಡಿಟೋನೇಟರ್ಗಳು ಮತ್ತು ಸ್ಫೋಟಕ ಕಾರ್ಟ್ರಿಡ್ಜ್ಗಳು ಮೊದಲಾದವುಗಳನ್ನು ಉತ್ಪಾದಿಸುತ್ತಿತ್ತು ಎಂದು ವರದಿಯಾಗಿದೆ.
ಅಗ್ನಿಶಾಮಕ ದಳದ ತಂಡಗಳು ತ್ವರಿತವಾಗಿ ಸ್ಥಳಕ್ಕೆ ಧಾವಿಸಿದ್ದು, ಇದಕ್ಕೂ ಮುನ್ನವೇ ಕಲ್ಮೇಶ್ವರ ಪೊಲೀಸರು ತಕ್ಷಣದ ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದರು. ಸ್ಥಳೀಯ ಆಂಬ್ಯುಲೆನ್ಸ್ಗಳು ಗಾಯಾಳುಗಳನ್ನು ತುರ್ತು ಚಿಕಿತ್ಸೆಗಾಗಿ ನಾಗ್ಪುರ ನಗರದ ಆಸ್ಪತ್ರೆಗಳಿಗೆ ಸಾಗಿಸಿದೆ.
ಸದ್ಯ 17 ಮಂದಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಪೊಲೀಸರು ನಿಖರ ಸಂಖ್ಯೆ ಇನ್ನೂ ದೃಢವಾಗಿಲ್ಲ ಎಂದಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ತಜ್ಞರು ಸ್ಥಳಕ್ಕೆ ಧಾವಿಸಿದ್ದಾರೆ.
ಇನ್ನು ನಿನ್ನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಸಮಲ್ಕೋಟ್ ಮಂಡಲದ ವೆಟಂಪಲ್ಲೆಯಲ್ಲಿ ಪಟಾಕಿ ಉತ್ಪಾದನ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 12 ಮಂದಿ ಸಾವನ್ನಪ್ಪಿದ್ದರು.





