ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ನೆಪವೊಡ್ಡಿ ವ್ಯಕ್ತಿಯೊಬ್ಬನನ್ನು ಕರೆಸಿಕೊಂಡು, ಆತನನ್ನು ಬಿಎಲ್ಒ ಹತ್ಯೆಗೈದಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಬಿಎಲ್ಒ ಮತ್ತು ಮೃತನ ಪತ್ನಿ ಪ್ರೇಮಿಗಳಾಗಿದ್ದು, ವಿವಾಹೇತರ ಸಂಬಂಧ ಹೊಂದಿದ್ದರು. ಆಕೆಗಾಗಿ ಆಕೆಯ ಪತಿಯನ್ನು ಬಿಎಲ್ಒ ಹತ್ಯೆಗೈದಿದ್ದಾನೆ ಎಂದು ಆರೋಪಿಸಲಾಗಿದೆ.
ಮೃತನನ್ನು ನಾಸಿರ್ ಅಲಿ ಎಂದು ಗುರುತಿಸಲಾಗಿದೆ. ಅವರ ಮೃತದೇಹ ಬದುರಿಯಾದ ಕಾಲುವೆಯಲ್ಲಿ ಛಿದ್ರಗೊಂಡ ರೀತಿಯಲ್ಲಿ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಿಎಲ್ಒ ರಿಜ್ವಾನ್ ಹಸನ್ ಮೊಂಡಲ್ ಮತ್ತು ಅವರ ಸಹಚರ ಸಾಗರ್ ಗೈನ್ ಎಂಬಾತನನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಅಲಿ ಅವರ ಪತ್ನಿಯೊಂದಿಗೆ ಮೊಂಡಲ್ ವಿವಾಹೇತರ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅಲ್ಲದೆ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಚರ್ಚಿಸುವ ನೆಪದಲ್ಲಿ ಸೋಮವಾರ (ಫೆ. 9) ಸಂಜೆ ಅಲಿಯನ್ನು ಮೊಂಡಲ್ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದ ಎಂದು ಹೇಳಲಾಗಿದೆ.
ಸೋಮವಾರ ರಾತ್ರಿಯಿಂದ ಅಲಿ ನಾಪತ್ತೆಯಾಗಿದ್ದರು. ಆತನಿಗಾಗಿ ಹುಡುಕಾಟ ನಡೆಸಿದ ಕುಟುಂಬಸ್ಥರು ಮಂಗಳವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಶೋಧ ನಡೆಸಿದಾಗ ಅಲಿಯ ಮೃತದೇಹವು ನಾಲೆಯಲ್ಲಿ ಪತ್ತಡಯಾಗಿದೆ. ಪೊಲೀಸರು ಮೊಂಡಲ್ನ ಫೋನ್ ಕರೆಗಳು ಮತ್ತು ಚಲನವಲನಗಳನ್ನು ಪತ್ತೆಹಚ್ಚಿದ್ದು, ಆತನೇ ಆರೋಪಿಯೆಂದು ಕಂಡುಕೊಂಡಿದ್ದಾರೆ. ಆತನನ್ನು ಬಂಧಿಸಿದ್ದಾರೆ.




