ಮುಂಬೈನಲ್ಲಿ ನಡೆಯುತ್ತಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾಣೆಯಲ್ಲಿ ನಟ ಅಮಿರ್ ಖಾನ್ ಮತಚಲಾಯಿಸಿದ್ದಾರೆ. ಈ ವೇಳೆ, ಮರಾಠಿ ಮತ್ತು ಹಿಂದಿ ನಡುವಿನ ವಿವಾದದಲ್ಲಿ ಅವರು ತಮ್ಮ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ.
ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಾನ್, ಮುಂಬೈ ಜನರಿಗೆ ಮತದಾನ ಮಾಡುವಂತೆ ಮರಾಠಿ ಭಾಷೆಯಲ್ಲಿ ಮನವಿ ಮಾಡಿದರು. ಅದೇ ಸಂದೇಶವನ್ನು ಹಿಂದಿಯಲ್ಲಿಯೂ ಹೇಳುವಂತೆ ಸುದ್ದಿಗಾರರು ಒತ್ತಾಯಿದ್ದಾರೆ.
ಸುದ್ದಿಗಾರರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಖಾನ್, “ಹಿಂದಿಯಲ್ಲಿ? ಇದು ಮಹಾರಾಷ್ಟ್ರ ಭಾಯ್” ಎಂದು ಹೇಳಿದ್ದಾರೆ. ಖಾನ್ ಅವರನ್ನು ಚರ್ಚೆಗೆಳೆದ ಸುದ್ದಿಗಾರ, ‘ನೀವು ಹಿಂದಿಯಲ್ಲಿ ಸಂದೇಶ ನೀಡಿದರೆ ಅದು ದೆಹಲಿಗೂ ತಲುಪುತ್ತದೆ’ ಎಂದಿದ್ದಾರೆ. ಅವರ ಮಾತಿಗೆ ಉತ್ತರಿಸಿದ ಖಾನ್, “ಓಹ್, ಅದು ದೆಹಲಿಗೂ ಹೋಗುತ್ತದೆಯೇ? ಬಹಳ ಉತ್ತಮ ವ್ಯವಸ್ಥೆ ಮಾಡಲಾಗಿದೆ. ನಾನು ಎಲ್ಲರಿಗೂ ಮನವಿ ಮಾಡುತ್ತೇನೆ: ಬಂದು ನಿಮ್ಮ ಅಮೂಲ್ಯ ಮತವನ್ನು ಚಲಾಯಿಸಿ” ಎಂದು ಮರಾಠಿಯಲ್ಲಿಯೇ ಹೇಳಿ ನಡೆದಿದ್ದಾರೆ.
ಈ ಲೇಖನ ಓದಿದ್ದೀರಾ?: ಮಹಾರಾಷ್ಟ್ರ ಚುನಾವಣೆ | ಮುಂಬೈನಲ್ಲಿ ‘ಶಾಯಿ’ ತಿರುಚಿದ, ನಕಲಿ ಮತದಾನದ ಗಂಭೀರ ಆರೋಪ
ಮಹಾರಾಷ್ಟ್ರದಲ್ಲಿ ಮರಾಠಿ ಮತ್ತು ಹಿಂದಿ ನಡುವಿನ ವಿವಾದವು ಸೂಕ್ಷ್ಮ ವಿಷಯವಾಗಿದೆ. ಬಿಎಂಸಿ ಚುನಾವಣೆ ಪ್ರಚಾರದ ಸಮಯದಲ್ಲಿಯೂ ಮರಾಠಿ-ಹಿಂದಿ ವಿವಾದ ಮುನ್ನೆಲೆಯಲ್ಲಿತ್ತು. ಬಿಜೆಪಿ ನಾಯಕ ಕೃಪಾಶಂಕರ್ ಸಿಂಗ್ ಅವರು “ಹಿಂದಿ ಮಾತನಾಡುವವನು ಮುಂಬೈ ಮೇಯರ್ ಆಗುತ್ತಾನೆ” ಎಂದು ಹೇಳಿದ್ದರ ವಿರುದಧ ಠಾಕ್ರೆ ಸಹೋದರರಾದ ಉದ್ಧವ್ ಮತ್ತು ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. 20 ವರ್ಷಗಳಿಂದ ದೂರ ಉಳಿದಿದ್ದ ಠಾಕ್ರೆ ಸಹೋದರರು ಮರಾಠಿ ಭಾಷೆಯ ವಿಚಾರವಾಗಿ ಒಗ್ಗೂಡಿದ್ದಾರೆ.
ಉದ್ಧವ್ ಮತ್ತು ರಾಜ್ ಠಾಕ್ರೆ ಅವರು ‘ಮರಾಠಿ ಮಾನೂಸ್’ (ಮರಾಠಿ ಮನುಷ್ಯರು) ಎಂಬ ವಾದವನ್ನು ಮುನ್ನೆಲೆ ತಂದಿದ್ದಾರೆ. ಭಾಷಾ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು. ಚುನಾವಣೆಯಲ್ಲಿಯೂ ಮತಗಳು ವಿಭಜನೆಯಾಗಬಾರದು ಎಂದು ಹೇಳಿದ್ದಾರೆ. ಯಥಾಪ್ರಕಾರ ಬಿಜೆಪಿ ಹಿಂದಿ ಹೇರಿಕೆಗೆ ಗಂಟುಹಾಕಿಕೊಂಡಿದೆ.




