ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು 118 ಸ್ಥಾನಗಳೊಂದಿಗೆ ಗೆಲುವು ಸಾಧಿಸಿದೆ. ಆದಾಗ್ಯೂ, ಮಹಾಯುತಿ ಭಾಗವಾಗಿರುವ ಶಿಂಧೆ ಶಿವಸೇನೆಯು ತನ್ನ ಚುನಾಯಿತ ಸದಸ್ಯರನ್ನು ‘ರೆಸಾರ್ಟ್’ಗೆ ಸ್ಥಳಾಂತರಿದೆ. ರೆಸಾರ್ಟ್ ರಾಜಕೀಯದ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ (ಯುಬಿಟಿ), “ಪಾಲಿಕೆ ಚುನಾವಣೆಗಳು ಮುಗಿದಿವೆ. ಆದರೆ, ನಿಜವಾದ ರಾಜಕೀಯ ಇನ್ನೂ ಇದೆ” ಎಂದು ಹೇಳಿದೆ.
ಒಟ್ಟು 227 ಸದಸ್ಯರನ್ನು ಹೊಂದಿರುವ ಬಿಎಂಸಿಯಲ್ಲಿ ಆಡಳಿತ ರಚನೆಗೆ ಬಹುಮತ ಸಾಬೀತು ಮಾಡಲು 114 ಸದಸ್ಯರು ಬೇಕು. ಬಿಜೆಪಿ 89 ಸ್ಥಾನಗಳನ್ನು ಗೆದ್ದಿದೆ ಮತ್ತು ಶಿಂಧೆ ಶಿವಸೇನೆ 29 ಸ್ಥಾನಗಳನ್ನು ಹೊಂದಿದೆ. ಒಟ್ಟಾಗಿ, 118 ಸ್ಥಾನಗಳಿವೆ. ಜೊತೆಗೆ, ಏಕಾಂಗಿಯಾಗಿ ಸ್ಪರ್ಧಿಸಿದ್ದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ‘ಅಜಿತ್ ಎನ್ಸಿಪಿ’ 3 ಸ್ಥಾನಗಳನ್ನು ಗೆದ್ದಿದೆ. ಮಹಾಯುತಿ ಮಿತ್ರಪಕ್ಷಗಳನ್ನು ಬೆಂಬಲಿಸುವ ಸಾಧ್ಯತೆಯಿದೆ.
ಮತ್ತೊಂದೆಡೆ, ಶಿವಸೇನೆ (ಯುಬಿಟಿ), ಮಹಾರಾಷ್ಟ್ರ ನವನಿರ್ಮಾಣ ಸೇನೆ ಮತ್ತು ಎನ್ಸಿಪಿ (ಶರದ್ ಪವಾರ್) ಮೈತ್ರಿಯು ಕ್ರಮವಾಗಿ 65, 6 ಮತ್ತು 1 ವಾರ್ಡ್ಗಳನ್ನು ಗೆದ್ದಿವೆ. ಒಟ್ಟು 72 ಸ್ಥಾನಗಳು. ಇನ್ನು, ಸ್ವತಂತ್ರವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ 24, ಎಐಎಂಐಎಂ 8 ಮತ್ತು ಸಮಾಜವಾದಿ ಪಕ್ಷ 2 ವಾರ್ಡ್ಗಳನ್ನು ಗೆದ್ದಿದೆ. ಈ ಎಲ್ಲ ವಿರೋಧ ಪಕ್ಷಗಳು ಒಟ್ಟುಗೂಡಿದರೆ, 106 ಸ್ಥಾನಗಳಾಗುತ್ತವೆ. ಬಹುಮತಕ್ಕೆ 8 ಸ್ಥಾನಗಳು ಕಡಿಮೆಯಾಗಲಿದೆ.
ಹೀಗಾಗಿ, ಶಿಂಧೆ ಶಿವಸೇನೆಯು ಬಿಎಂಸಿಯಲ್ಲಿ ಕಿಂಗ್ಮೇಕರ್ ಆಗಿದೆ. ಮೇಯರ್ ಹುದ್ದೆಗಾಗಿ ಬಿಜೆಪಿ ಬಳಿ ಚೌಕಾಸಿಗೆ ಇಳಿಯಲು ಸಜ್ಜಾಗಿದೆ. ಬಿಜೆಪಿ-ಶಿಂಧೆ ಶಿವಸೇನೆ ನಡುವಿನ ಚೌಕಾಸಿ ರಾಜಕಾರಣದ ನಡುವೆ 106 ಸ್ಥಾನಗಳನ್ನು ಗೆದ್ದಿರುವ ವಿಪಕ್ಷಗಳು ಕುದುರೆ ವ್ಯಾಪಾರದೊಂದಿಗೆ ಶಿಂಧೆ ಅವರ ಸದಸ್ಯರನ್ನು ಖರೀದಿಸುವ ಸಾಧ್ಯತೆಗಳ ಕಾರಣಕ್ಕಾಗಿ ಶಿಂಧೆ ಶಿವಸೇನೆಯು ತಮ್ಮ ಚುನಾಯಿತರನ್ನು ರೆಸಾರ್ಟ್ನಲ್ಲಿ ಕೂಡಿಟ್ಟುಕೊಂಡಿದೆ.
ಮೇಯರ್ ಹುದ್ದೆಗೆ ಸಂಬಂಧಿಸಿದಂತೆ ಎನ್ಡಿಎಯೊಳಗೆ ಜಗಳ ನಡೆಯುತ್ತಿದೆ. ಬಿಜೆಪಿ ತನ್ನ ಕಾರ್ಪೊರೇಟರ್ಗಳಲ್ಲಿ ಒಬ್ಬರನ್ನು ಮೇಯರ್ ಆಗಿ ನೇಮಿಸುವ ಮೂಲಕ ವಾಣಿಜ್ಯ ರಾಜಧಾನಿಯ ಮೇಲೆ ಹಿಡಿತ ಸಾಧಿಸಲು ಬಯಸುತ್ತಿದೆ. ಆದರೂ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಉನ್ನತ ಹುದ್ದೆಯನ್ನು ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಕಳೆದ ವರ್ಷ ರಾಜ್ಯ ಚುನಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆ ತ್ಯಜಿಸಿ, ಉಪಮುಖ್ಯಮಂತ್ರಿ ಹುದ್ದೆಗೆ ತೃಪ್ತರಾಗಿರುವ ಶಿಂಧೆ, ಮುಂಬೈ ಮೇಯರ್ ಹುದ್ದೆಯನ್ನಾದರೂ ತಮ್ಮ ಪಕ್ಷಕ್ಕೆ ತೆಗೆದುಕೊಳ್ಳಬೇಕೆಂದು ಹಠಕ್ಕೆ ಬಿದ್ದಿದ್ದಾರೆ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: 5 ರಾಜ್ಯಗಳ ಚುನಾವಣೆಯನ್ನು ಪ್ರಭಾವಿಸುವುದೇ ಬಿಎಂಸಿ ಫಲಿತಾಂಶ?
ಹಾಗಾಗಿ, ಶಿಂಧೆ ತಂಡವು ರೆಸಾರ್ಟ್ಗೆ ಸ್ಥಳಾಂತರಗೊಂಡಿರುವುದು ವಿರೋಧ ಪಕ್ಷದ ಯೋಜನೆಗಳನ್ನು ವಿಫಲಗೊಳಿಸಲು ಮಾತ್ರವಲ್ಲ. ತನ್ನ ಮಿತ್ರಪಕ್ಷ ಬಿಜೆಪಿ ಮೇಯರ್ ಹುದ್ದೆಯನ್ನು ಪಡೆಯದಂತೆ ಮತ್ತು ಆ ಹುದ್ದೆಯನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನದ ಭಾಗವೂ ಆಗಿದೆ ಎಂದು ಹೇಳಲಾಗುತ್ತಿದೆ.
ರೆಸಾರ್ಟ್ ರಾಜಕೀಯದ ಕುರಿತು ಶಿವಸೇನೆ (ಯುಬಿಟಿ) ತನ್ನ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಪ್ರಕಟಿಸಿದೆ. “ಶಿವಸೇನೆ ಮುಂಬೈಗೆ 23 ಮರಾಠಿ ಮೇಯರ್ಗಳನ್ನು ನೀಡಿದೆ. ಈಗ ಸಂಪ್ರದಾಯ ಮುಂದುವರಿಯುತ್ತದೆಯೇ?” ಎಂದು ಹೇಳಿದೆ.
“ಮುಖ್ಯಮಂತ್ರಿ ಫಡ್ನವಿಸ್ ಅವರು ಚುನಾವಣಾ ಗೆಲುವು ಅಭಿವೃದ್ಧಿ ಕಾರ್ಯಗಳಿಗೆ ಜನರಿಂದ ಬಂದ ಪ್ರತಿಫಲವೆಂದು ಹೇಳುತ್ತಿದ್ದಾರೆ. ವಾಸ್ತವದಲ್ಲಿ, ಅಪಾರ ಹಣ ಮತ್ತು ಅಧಿಕಾರದಿಂದ ದೊರೆತಿರುವ ಗೆಲುವು ಇದು. ಅವರ ವಿಶ್ವಾಸಕ್ಕೂ ಅಭಿವೃದ್ಧಿಗೂ ಯಾವುದೇ ಸಂಬಂಧವಿಲ್ಲ. ಇದು ಸಂಪೂರ್ಣವಾಗಿ ಯಂತ್ರಗಳು, ಹಣ ಮತ್ತು ಒತ್ತಡ ತಂತ್ರಗಳ ಭಾಗವಾಗಿದೆ” ಎಂದಿದೆ.
“ಪುರಸಭೆ ಚುನಾವಣೆಗಳು ಮುಗಿದಿವೆ. ಫಲಿತಾಂಶಗಳು ಹೊರಬಂದಿವೆ. ನಿಜವಾದ ರಾಜಕೀಯ ಇನ್ನೂ ಬಹಿರಂಗಗೊಳ್ಳಬೇಕಿದೆ. ಮೇಯರ್ ಆಯ್ಕೆ ಸುಲಭದ ವಿಷಯವಲ್ಲ” ಎಂದ ಹೇಳಿದೆ.




