ಮುಂಬೈ ನಗರವನ್ನು ಸರಣಿ ಬಾಂಬ್ಗಳಿಂದ ಸ್ಫೋಟಿಸುವುದಾಗಿ ಬೆದರಿಕೆ ಹಾಕುವ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ನೋಯ್ಡಾದ 51 ವರ್ಷದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಬಿಹಾರದ ಪಾಟ್ನಾದ ಪಾಟ್ಲಿಪುತ್ರದ ಜ್ಯೋತಿಷಿ ಮತ್ತು ವಾಸ್ತು ಸಲಹೆಗಾರ ಅಶ್ವಿನಿ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಕಳೆದ ಐದು ವರ್ಷಗಳಿಂದ ನೋಯ್ಡಾದ ಸೆಕ್ಟರ್ 79 ರಲ್ಲಿ ತಮ್ಮ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ. ಅವರ ತಂದೆ ಸುರೇಶ್ ಕುಮಾರ್ ನಿವೃತ್ತ ಶಿಕ್ಷಣ ಇಲಾಖೆಯ ಅಧಿಕಾರಿ ಮತ್ತು ತಾಯಿ ಪ್ರಭಾವತಿ ಗೃಹಿಣಿ.
ಸ್ನಾತಕೋತ್ತರ ಪದವೀಧರರಾಗಿರುವ ಅಶ್ವಿನಿ ಕುಮಾರ್, ಪತ್ನಿ ಅರ್ಚನಾ ಅವರಿಂದ ದೂರವಾಗಿದ್ದಾರೆ. ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 2023 ರಲ್ಲಿ ಬಿಹಾರ ನಿವಾಸಿಯಾಗಿರುವ ಅವರ ಸ್ನೇಹಿತ ಫಿರೋಜ್ ಅವರು ಪಾಟ್ನಾದ ಫುಲ್ವಾರಿ ಷರೀಫ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಅವರು ಮೂರು ತಿಂಗಳ ಕಾಲ ಜೈಲಿನಲ್ಲಿ ಇದ್ದು ಹೊರಗೆ ಬಂದಿದ್ದಾರೆ.
ಫಿರೋಜ್ ಅವರನ್ನು ಭಯೋತ್ಪಾದನಾ ಪ್ರಕರಣದಲ್ಲಿ ಸಿಲುಕಿಸಲು ಕುಮಾರ್ ಫಿರೋಜ್ ಹೆಸರಿನಲ್ಲಿ ಇತ್ತೀಚಿನ ಬೆದರಿಕೆ ಸಂದೇಶವನ್ನು ಕಳುಹಿಸಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನಲ್ಲಿ ಗಣೇಶ ವಿಸರ್ಜನೆ ಆಚರಣೆಗೆ ಒಂದು ದಿನ ಮೊದಲು ಭಯೋತ್ಪಾದಕ ಬೆದರಿಕೆ ಬಂದಿದ್ದರಿಂದ, ವಿಷಯ ಆತಂಕಕಾರಿಯಾಗಿತ್ತು. ಬೆದರಿಕೆ ಸಂದೇಶದ ನಂತರ ಶುಕ್ರವಾರ ನಗರದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿತ್ತು.





