ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಬೋಂಡಿ ಬೀಚ್ನಲ್ಲಿ ಭಾನುವಾರ (ಡಿ.14) ನಡೆದ ಭಯೋತ್ಪಾದಕ ಗುಂಡಿನ ದಾಳಿಯು ಪ್ರಪಂಚವನ್ನೇ ಬೆಚ್ಚಿಬೀಳಿಸಿದೆ. ಯಹೂದಿ ಸಮುದಾಯದ ಹನುಕ್ಕಾ ಉತ್ಸವದ ಸಂದರ್ಭದಲ್ಲಿ ನಡೆದ ಈ ದಾಳಿಯಲ್ಲಿ 15 ನಾಗರಿಕರು ಹತರಾಗಿದ್ದಾರೆ. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯನ್ನು ಆಸ್ಟ್ರೇಲಿಯಾ ಸರ್ಕಾರವು ‘ಐಎಸ್ಐಎಸ್’ ಪ್ರಚೋದಿತ ಭಯೋತ್ಪಾದಕ ಕೃತ್ಯವೆಂದು ಘೋಷಿಸಿದೆ. ದಾಳಿಕೋರ ಸಜೀದ್ ಅಕ್ರಂ ಮತ್ತು ನವೀದ್ ಅಕ್ರಂ, ತಂದೆ-ಮಗನಾಗಿದ್ದಾರೆ. ಸಜೀದ್ ಅಕ್ರಂ ಪೊಲೀಸರ ಗುಂಡೇಟಿಗೆ ಸ್ಥಳದಲ್ಲೇ ಮೃತಪಟ್ಟಿದ್ದು, ಮಗ ನವೀದ್ ಅಕ್ರಂನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಜೀದ್ ಅಕ್ರಂ ಮೂತಃ ಭಾರತದ ಮೂಲದವನಾಗಿದ್ದು, ಆತನ ಕುಟುಂಬ ಹೈದರಾಬಾದ್ನಲ್ಲಿ ನೆಲೆಸಿದೆ. ಆತನ ಮಗ ನವೀದ್ ಅಕ್ರಂ ಆಸ್ಟ್ರೇಲಿಯಾದಲ್ಲೇ ಜನಿಸಿದ್ದು, ಆತ ಆಸ್ಟ್ರೇಲಿಯಾದ ಪೌರತ್ವ ಹೊಂದಿದ್ದಾನೆ. ಸಜೀದ್ ಅಕ್ರಂನ ಕೃತ್ಯ ಮತ್ತು ಆತನ ‘ತೀವ್ರಗಾಗಿ ಮನಸ್ಥಿತಿ’ ಬಗ್ಗೆ ಆ ಕುಟುಂಬಕ್ಕೆ ತಿಳಿದಿರಲಿಲ್ಲ ಎಂದು ಭಾರತೀಯ ಪೊಲೀಸರು ತಿಳಿಸಿದ್ದಾರೆ.
ಸಜೀದ್ ಅಕ್ರಂ (50 ವರ್ಷ) ಹೈದರಾಬಾದ್ನ ಟೋಲಿಚೌಕಿ ಪ್ರದೇಶದ ನಿವಾಸಿಯಾಗಿದ್ದರು. ಅವರು ಮಧ್ಯಮ ವರ್ಗದ ಮುಸ್ಲಿಂ ಕುಟುಂಬದವರು. ಹೈದರಾಬಾದ್ನಲ್ಲಿ ಬಿ.ಕಾಮ್ ಪದವಿ ಪಡೆದು, 1998ರ ನವೆಂಬರ್ನಲ್ಲಿ ಉದ್ಯೋಗಕ್ಕಾಗಿ ಆಸ್ಟ್ರೇಲಿಯಾಗೆ ವಲಸೆ ಹೋಗಿದ್ದರು. ಆರಂಭದಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಆಸ್ಟ್ರೇಲಿಯಾಗೆ ತೆರಳಿದ್ದ ಸಜೀದ್, ಬಳಿಕ, ಪಾರ್ಟ್ನರ್ ವೀಸಾ ಮತ್ತು ರೆಸಿಡೆಂಟ್ ರಿಟರ್ನ್ ವೀಸಾಗಳನ್ನು ಪಡೆದು ಅಲ್ಲಿಯೇ ನೆಲೆಸಿದ್ದರು. ಆದಾಗ್ಯೂ, ಅವರು ಭಾರತೀಯ ಪಾಸ್ಪೋರ್ಟ್ ಹೊಂದಿದ್ದರು. ಹೈದರಾಬಾದ್ ಕುಟುಂಬದೊಂದಿಗೆ ಸೀಮಿತ ಸಂಪರ್ಕ ಮಾತ್ರ ಇಟ್ಟುಕೊಂಡಿದ್ದರು ಎಂದು ಹೈದರಾಬಾದ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಆಸ್ಟ್ರೇಲಿಯಾಗೆ ವಲಸೆಹೋದ ಸಜೀದ್, ಕಳೆದ 27 ವರ್ಷಗಳಲ್ಲಿ ಕೇವಲ 6 ಬಾರಿ ಮಾತ್ರವೇ ಭಾರತಕ್ಕೆ ಭೇಟಿ ನೀಡಿದ್ದರು. ಅದೆಲ್ಲವೂ, ಮುಖ್ಯವಾಗಿ ಕುಟುಂಬದ ಆಸ್ತಿಗೆ ಸಂಬಂಧಿತ ಕಾರಣಗಳಿಗಾಗಿಯೇ ಆಗಿವೆ ಎಂದು ಹೇಳಲಾಗಿದೆ. 2017ರಲ್ಲಿ ತಮ್ಮ ತಂದೆ ಮೃತಪಟ್ಟಾಗಲೂ ಸಜೀದ್ ಭಾರತಕ್ಕೆ ಬಂದಿರಲಿಲ್ಲ. ಸಜೀದ್ ಅವರು ಯುರೋಪಿಯನ್ ಮೂಲದ ಕ್ರಿಶ್ಚಿಯನ್ ಮಹಿಳೆಯನ್ನು ಮದುವೆಯಾಗಿದ್ದರೆಂದು ಹೈದರಾಬಾದ್ನಲ್ಲಿದ್ದ ಕುಟುಂಬವು ಕೇಳಿ-ತಿಳಿದುಕೊಂಡಿತ್ತಷ್ಟೇ ಎಂದು ಪೊಲೀಸರು ವಿವರಿಸಿದ್ದಾರೆ.
ಅವರ ಮಗ ನವೀದ್ ಅಕ್ರಂ (24 ವರ್ಷ) ಆಸ್ಟ್ರೇಲಿಯಾದಲ್ಲಿ ಜನಿಸಿದ್ದು, ಆಸ್ಟ್ರೇಲಿಯನ್ ನಾಗರಿಕ. ಅವರು ಹಾರ್ಡ್ಲೈನ್ ಪ್ರೀಚರ್ ವಿಸಾಮ್ ಹದ್ದಾದ್ ಅವರ ಅನುಯಾಯಿಯೂ ಆಗಿದ್ದರು. ನವೀದ್ ಅಕ್ರಂ 2019ರಲ್ಲಿ ಸಿಡ್ನಿಯಲ್ಲಿ ಸ್ಟ್ರೀಟ್ ದಾವಾ ಆಂದೋಲನದಲ್ಲಿ ಭಾಗವಹಿಸಿದ್ದರು. ಆ ಕಾರಣಕ್ಕಾಗಿ, ಅವರನ್ನು ಆಸ್ಟ್ರೇಲಿಯಾ ಸಿಕ್ಯೂರಿಟಿ ಇಂಟೆಲಿಜೆನ್ಸ್ ಆರ್ಗನೈಸೇಷನ್ (ASIO) 2019ರಲ್ಲಿ ತನಿಖೆಗೆ ಒಳಪಡಿಸಿತ್ತು. ಆತನಿಂದ ಯಾವುದೇ ಅಪಾಯವಿಲ್ಲ ಎಂದು ತೀರ್ಮಾನಿಸಿತ್ತು.
ಆದರೆ, ಇದೀಗ ಸಜೀದ್ ಮತ್ತು ನವೀದ್ – ಭಯಾನಕ ದಾಳಿ ನಡೆಸಿದ್ದಾರೆ. ಇದು ಕಳೆದ ಸುಮಾರು 30 ವರ್ಷಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿರುವ ಅತ್ಯಂತ ಭೀಕರ ಸಾಮೂಹಿಕ ಗುಂಡಿನ ದಾಳಿಯಾಗಿದೆ. ಯಹೂದಿ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದನಾ ಕೃತ್ಯವೆಂದು ಆರೋಪಿಸಲಾಗಿದೆ.
ದಾಳಿಯಲ್ಲಿ ಬಳಸಲಾಗಿರುವ ಆಯುಧಗಳ ಪರವಾನಗಿ ಸಜೀದ್ ಹೆಸರಿನಲ್ಲಿವೆ. ಅವರ ವಾಹನದಲ್ಲಿ ಹೋಮ್ಮೇಡ್ ISIS ಬಾವುಟಗಳು ಮತ್ತು ಇಂಪ್ರೊವೈಸ್ಡ್ ಎಕ್ಸ್ಪ್ಲೋಸಿವ್ ಡಿವೈಸ್ಗಳು ಸಿಕ್ಕಿವೆ ಎಂದು ಆಸ್ಟ್ರೇಲಿಯಾ ಪೊಲೀಸರು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಪಾಕಿಸ್ತಾನಕ್ಕೆ ಸಾಲ ನೀಡಲು ಅಂತಾರಾಷ್ಟ್ರೀಯ ವಿತ್ತ ನಿಧಿ ಹೇರಿದ 11 ಷರತ್ತುಗಳೇನು?
ಆಸ್ಟ್ರೇಲಿಯಾ ಪೊಲೀಸರು ಮತ್ತು ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿಕೆ ಪ್ರಕಾರ, ತಂದೆ-ಮಗ ನಡೆಸಿರುವ ಈ ಕ್ರೂರ ದಾಳಿಯ ಹಿಂದೆ ಐಎಸ್ಐಎಸ್ ಇದೆ. ಜೊತೆಗೆ, ತಂದೆ-ಮಗನ ಪ್ರತಿಗಾಮಿ ಮನಸ್ಥಿತಿಯೂ ಕಾರಣವಾಗಿದೆ.
ದಾಳಿ ನಡೆಯುವ ಒಂದು ತಿಂಗಳ ಮೊದಲು ನವೆಂಬರ್) ತಂದೆ-ಮಗ ಇಬ್ಬರೂ ಪ್ರವಾಸಕ್ಕಾಗಿ ಫಿಲಿಪೈನ್ಸ್ಗೆ ತೆರಳಿದ್ದರು. ಆಗ, ಸಜೀದ್ – ಭಾರತೀಯ ಪಾಸ್ಪೋರ್ಟ್ನಲ್ಲಿಯೂ, ನವೀದ್ – ಆಸ್ಟ್ರೇಲಿಯಾದ ಪಾಸ್ಪೋರ್ಟ್ನಲ್ಲಿಯೂ ಪ್ರಯಾಣಿಸಿದ್ದರು. ಅಲ್ಲಿನ ಮಿಂಡನಾವೋ ದ್ವೀಪದ ಡಾವೋ ನಗರವು ಐಎಸ್ಐಎಸ್ಗೆ ಸಂಬಂಧಿತ ಉಗ್ರಗಾಮಿ ಗುಂಪುಗಳ (ಅಬು ಸಯ್ಯಾಫ್ ಇತ್ಯಾದಿ) ತಾಣವಾಗಿದೆ. ಆ ಉಗ್ರಗಾಮಿ ಗುಂಪುಗಳು ಇವರಿಬ್ಬರಿಗೂ ಶಸ್ತ್ರಾಸ್ತ್ರ ಬಳಕೆಯ ಕುರಿತು ಮಿಲಿಟರಿ ಶೈಲಿಯಲ್ಲಿ ತರಬೇತಿ ನೀಡಿರುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾ ಪೊಲೀಸರು ಊಹಿಸಿದ್ದಾರೆ. ಆದರೆ, ಇದನ್ನು ದೃಢಪಡಿಸಲು ಯಾವುದೇ ಪುರಾವೆಗಳಿಲ್ಲ. ಅವರ ಪ್ರವಾಸದ ಉದ್ದೇಶಗಳ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




