ರಾಜಸ್ಥಾನದ ಝಾಲವರ್ ಜಿಲ್ಲೆಯಲ್ಲಿ ಸುಮಾರು 32 ಅಡಿ ಆಳದ ಬೋರ್ವೆಲ್ ಗುಂಡಿಗೆ ಐದು ವರ್ಷದ ಬಾಲಕ ಬಿದ್ದಿದ್ದು ಸತತ 16 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಆದರೆ ಸೋಮವಾರ ಮುಂಜಾನೆ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ಗೆ ಬಾಲಕನ ಮೃತದೇಹ ಪತ್ತೆಯಾಗಿದೆ.
ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ವಿಪತ್ತು ಸ್ಪಂದನೆ ಪಡೆ (ಎಸ್ಡಿಆರ್ಎಫ್) ಸೋಮವಾರ ಮುಂಜಾನೆ ಸುಮಾರು 4 ಗಂಟೆಗೆ ಬಾಲಕನ ಮೃತದೇಹವನ್ನು ಹೊರತೆಗೆದಿದೆ ಎಂದು ಗಂಗ್ಧಾರ್ನ ಎಸ್ಡಿಎಂ ಛತರ್ಪಾಲ್ ಚೌಧರಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ರಾಜಸ್ಥಾನ | ಬೋರ್ವೆಲ್ಗೆ ಬಿದ್ದ ಬಾಲಕಿ; 10 ದಿನಗಳ ಬಳಿಕ ರಕ್ಷಣೆ
ಸ್ಥಳದಲ್ಲೇ ಇದ್ದ ವೈದ್ಯಕೀಯ ತಂಡವು ಬಾಲಕನ ತಪಾಸಣೆ ನಡೆಸಿದ್ದು, ಬಾಲಕ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ.
ಮೃತ ಬಾಲಕನನ್ನು ದುಗ್ ಪೊಲೀಸ್ ಠಾಣೆ ವ್ಯಾಪ್ತಿಯ ಪರಲಿಯಾ ಗ್ರಾಮದ ಪ್ರಹ್ಲಾದ್ ಅವರ ಪುತ್ರ ಕುಲಲಾಲ್ ಭಾಗರಿಯಾ ಎಂದು ಗುರುತಿಸಲಾಗಿದೆ. ಗದ್ದೆಯಲ್ಲಿ ಪೋಷಕರು ಕೆಲಸ ಮಾಡುತ್ತಿದ್ದಾಗ, ಸಮೀಪದಲ್ಲೇ ಆಟವಾಡುತ್ತಿದ್ದ ಬಾಲಕ ಬೋರ್ವೆಲ್ ಗುಂಡಿಗೆ ಬಿದ್ದಿದ್ದಾನೆ ಎಂದು ಹೇಳಲಾಗಿದೆ.
ಭಾನುವಾರ ಬಾಲಕ ಅಚಾನಕ್ ಆಗಿ ಬೋರ್ವೆಲ್ ಗುಂಡಿಗೆ ಬಿದಿದ್ದು, ಘಟನೆ ನಡೆದ ಒಂದು ಗಂಟೆಯ ಬಳಿಕ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಅದಾದ ಬಳಿಕ ರಕ್ಷಣಾ ಕಾರ್ಯಾಚರಣೆಗೆ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಕೈ ಜೋಡಿಸಿದೆ ಎಂದು ಎಸ್ಡಿಎಂ ಚೌಧರಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ರಾಜಸ್ಥಾನ | ಮೂರು ದಿನ ಬೋರ್ವೆಲ್ನಲ್ಲಿ ಸಿಲುಕಿದ್ದ ಮಗು; ರಕ್ಷಣಾ ಕಾರ್ಯಾಚರಣೆಯ ನಂತರ ಸಾವು
ಬಾಲಕನಿಗೆ ಪೈಪ್ ಮೂಲಕ ಆಮ್ಲಜನಕ (ಆಕ್ಸಿಜನ್) ಸರಬರಾಜು ಮಾಡಲಾಗಿದೆ. ಆದರೆ ಬಾಲಕ ಬದುಕುಳಿಯಲಿಲ್ಲ. ಸದ್ಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಡಿಎಸ್ಪಿ ಜೈಪ್ರಕಾಶ್ ಅಟಲ್ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಾಲಕನ ಪೋಷಕರು ದೂರು ನೀಡಿದ್ದು ಪ್ರಕರಣ ದಾಖಲಿಸಿ ಮುಂದಿನ ಕಾರ್ಯಾಚರಣೆ ನಡೆಸಲಾಗುವುದು ಎಂದು ಕೂಡಾ ಡಿಎಸ್ಪಿ ಹೇಳಿದ್ದಾರೆ.
ದೇಶದಲ್ಲಿ ಅಧಿಕವಾಗಿರುವ ಬೋರ್ವೆಲ್ ದುರಂತ
ಬೋರ್ವೆಲ್ ಅಗೆಯುವವರು, ಅದಕ್ಕೆ ಮುಚ್ಚಳಿಕೆ ವ್ಯವಸ್ಥೆ ಮಾಡದೆ ಹಾಗೆಯೇ ಬಿಟ್ಟಿರುವುದು ಹಲವು ಮಕ್ಕಳ ಸಾವಿಗೆ ಕಾರಣವಾಗಿದೆ. ಅದರಲ್ಲೂ ಮುಖ್ಯವಾಗಿ ಇಂತಹ ಘಟನೆಗಳು ಹರಿಯಾಣ, ತಮಿಳುನಾಡು, ಗುಜರಾತ್, ರಾಜಸ್ಥಾನದಲ್ಲಿ ಅಧಿಕವಾಗಿ ವರದಿಯಾಗುತ್ತಿದೆ.
ಇದನ್ನು ಓದಿದ್ದೀರಾ? ಬೋರ್ವೆಲ್ ಕೊರೆಯುತ್ತಿರುವ ಜಲಮಂಡಳಿ; ಧೂಳಿನಲ್ಲಿ ಮುಳುಗಿದ ಬೆಂಗಳೂರು
ನೂರಾರು ಮಕ್ಕಳು ಪ್ರಾಣ ಕಳೆದುಕೊಂಡರೂ ಕೂಡಾ ಇಂದಿಗೂ ಕಟ್ಟಡ ನಿರ್ಮಾಣ, ಗದ್ದೆಗಳಲ್ಲಿ ಅಗೆಯಲಾಗುವ ತಾತ್ಕಾಲಿಕ ಬೋರ್ವೆಲ್ಗಳನ್ನು ಮುಚ್ಚುವೆಡೆ ಮಾಲೀಕರು ಗಮನ ಹರಿಸುತ್ತಿಲ್ಲ. ಅದರಲ್ಲೂ ಮುಖ್ಯವಾಗಿ ಗದ್ದೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳು, ಕಟ್ಟಡ ಕಾರ್ಮಿಕರ ಮಕ್ಕಳು ಈ ಅನಾಹುತಗಳಿಗೆ ಬಲಿಯಾಗುತ್ತಿದ್ದಾರೆ.
ವರದಿ ಪ್ರಕಾರ ಬೋರ್ವೆಲ್ಗೆ ಬಿದ್ದ ಬಹುತೇಕ ಮಕ್ಕಳು ಜೀವಂತವಾಗಿ ಹೊರಬಂದಿಲ್ಲ. ರಕ್ಷಿಸಲಾಗಿದ್ದರೂ, ಒಂದೆರಡು ದಿನಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ರಾಜಸ್ಥಾನದಲ್ಲಿ ಚೇತನ ಚೌಧರಿ ಎಂಬ ಮೂರು ವರ್ಷದ ಬಾಲಕಿ ಸುಮಾರು 700 ಅಡಿ ಆಳದ ಬೋರ್ವೆಲ್ಗೆ ಬಿದ್ದಿದ್ದು ಸತತ ಹತ್ತು ದಿನಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಆದರೆ ಬಾಲಕಿ ಬದುಕುಳಿಯಲಿಲ್ಲ.





