ಖಾಸಗಿ ಡಯಾಗ್ನೋಸ್ಟಿಕ್ ಕೇಂದ್ರದಲ್ಲಿ ಎಂಆರ್ಐ ಸ್ಕ್ಯಾನ್ ಮಾಡುವ ಸಮಯದಲ್ಲಿ 6 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಬಾಲಕನ ಸಾವಿಗೆ ಡಯಾಗ್ನೋಸ್ಟಿಕ್ ಕೇಂದ್ರದವರ ನಿರ್ಲಕ್ಷ್ಯ ಮತ್ತು ಅವಧಿ ಮೀರಿದ ಔಷಧಿ ನೀಡಿದ್ದೇ ಕಾರಣವೆಂದು ಮೃತನ ಪೋಷಕರು ಆರೋಪಿಸಿದ್ದಾರೆ.
ಬಾಲಕನ ಸಾವಿನ ಬಳಿಕ, ಡಯಾಗ್ನೋಸ್ಟಿಕ್ ಕೇಂದ್ರವನ್ನು ಪೊಲೀಸರು ಸೀಲ್ ಮಾಡಿದ್ದಾರೆ. ಪ್ರಕರಣದ ತನಿಖೆಗಾಗಿ ನಾಲ್ವರು ಸದಸ್ಯರಿರುವ ಸಮಿತಿಯನ್ನು ರಚಿಸಲಾಗಿದೆ. ತನಿಖೆಯಲ್ಲಿ ಸಾವಿಗೆ ನಿಖರ ಕಾರಣವೇನೆಂದು ಗೊತ್ತಾದ ಬಳಿಕ, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಗೌತಮ್ ಬುದ್ಧನಗರದ ಆರೋಗ್ಯ ಅಧಿಕಾರಿ ಡಾ. ಚಂದನ್ ಸೋನಿ ಹೇಳಿದ್ದಾರೆ.
ನೋಯ್ಡಾ ಬಳಿಯ ಡುಂಗರಪುರ ಗ್ರಾಮದ ವಿಕಿ ಎಂಬವರು ತಮ್ಮ ಮಗನನ್ನು ಎಂಆರ್ಐ ಸ್ಕ್ಯಾನ್ಗಾಗಿ ಪೈ-3 ಪ್ರದೇಶದಲ್ಲಿರುವ ಡಯಾಗ್ನೋಸ್ಟಿಕ್ ಕೇಂದ್ರಕ್ಕೆ ಕರೆತರಲಾಗಿತ್ತು. ಎಂಆರ್ಐ ಸ್ಕ್ಯಾನ್ ನಡೆಸುವಾಗ ಬಾಲಕ ಮೃತಪಟ್ಟಿದ್ದಾನೆ. ಎಂಆರ್ಐ ಪ್ರಕ್ರಿಯೆ ಆರಂಭಿಸುವ ಮೊದಲು ಬಾಲಕ ಆರೋಗ್ಯವಾಗಿಯೇ ಇದ್ದನೆಂದು ಕುಟುಂಬದ ಸದಸ್ಯರು ಹೇಳಿದ್ದಾರೆ.





