ದೇಶದ ಪ್ರಗತಿಗೆ ಹೊಸ ಶಕ್ತಿ ತುಂಬಲು ವಿಕಸಿತ ಭಾರತ, ಆತ್ಮ ನಿರ್ಭರ, ಸ್ವದೇಶಿ ಮುಂತಾದ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ಸಂಸದರು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ನಿಲ್ಲಬೇಕು’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಲಹೆ ನೀಡಿದರು.
ಬಜೆಟ್ ಅಧಿವೇಶನದ ಮೊದಲ ದಿನ ಲೋಕಸಭೆ ಹಾಗೂ ರಾಜ್ಯಸಭೆಯ ಜಂಟಿ ಅಧಿವೇಶನ ಉದ್ದೇಶಿಸಿ ಸುಮಾರು ಒಂದು ಗಂಟೆ ಭಾಷಣ ಮಾಡಿದ ಅವರು, ‘ವಿವಿಧ ಜಾಗತಿಕ ಬಿಕ್ಕಟ್ಟುಗಳ ಹೊರತಾಗಿಯೂ ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿದಿದೆ’ ಎಂದು ಪ್ರತಿಪಾದಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮನೆಮುರುಕ ಮಹಾ‘ನಾಯಕ’ ಮೊದಲಿಗನಲ್ಲ, ಕಡೆಯವನೂ ಆಗಿರುವುದಿಲ್ಲ!
ಸುಮಾರು 6,000 ಪದಗಳ ಅವರ ಭಾಷಣವು ರವೀಂದ್ರನಾಥ ಟ್ಯಾಗೋರ್, ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ (ಪಶ್ಚಿಮ ಬಂಗಾಳ), ಶ್ರೀ ನಾರಾಯಣ ಗುರು (ಕೇರಳ), ಭೂಪೇನ್ ಹಜಾರಿಕಾ (ಅಸ್ಸಾಂ), ರಾಜೇಂದ್ರ ಚೋಳ ಮತ್ತು ತಿರುವಳ್ಳುವರ್ (ತಮಿಳುನಾಡು) ಸೇರಿದಂತೆ ಚುನಾವಣೆಗೆ ಸಜ್ಜಾಗಿರುವ ರಾಜ್ಯಗಳ ಮಹಾನ್ ಸಾಧಕರ ಉಲ್ಲೇಖಗಳನ್ನು ಹೊಂದಿತ್ತು ಹಾಗೂ ಆ ರಾಜ್ಯಗಳಲ್ಲಿ ಕೈಗೊಂಡ ಅಭಿವೃದ್ಧಿ ಯೋಜನೆಗಳ ಪ್ರಸ್ತಾಪಗಳನ್ನು ಒಳಗೊಂಡಿತ್ತು.
ಕೃತಕ ಬುದ್ಧಿಮತ್ತೆಯ ದುರುಪಯೋಗದಿಂದ ಉಂಟಾಗುವ ಅಪಾಯಗಳ ಬಗ್ಗೆಯೂ ರಾಷ್ಟ್ರಪತಿ ಎಚ್ಚರಿಕೆ ನೀಡಿದರು. ‘ಡೀಪ್ ಫೇಕ್, ತಪ್ಪು ಮಾಹಿತಿ ಮತ್ತು ನಕಲಿ ವಿಷಯಗಳು ಪ್ರಜಾಪ್ರಭುತ್ವ, ಸಾಮಾಜಿಕ ಸಾಮರಸ್ಯ ಮತ್ತು ಸಾರ್ವಜನಿಕ ನಂಬಿಕೆಗೆ ಗಮನಾರ್ಹ ಬೆದರಿಕೆಯಾಗುತ್ತಿವೆ ಮತ್ತು ಈ ಗಂಭೀರ ವಿಷಯದ ಬಗ್ಗೆ ಸಂಸದರೆಲ್ಲರೂ ಚರ್ಚಿಸುವುದು ಅತ್ಯಗತ್ಯ‘ ಎಂದು ಹೇಳಿದರು.





