ತನ್ನ ಹಿಂದೂ ಪತಿಯ ಯೋಗಕ್ಷೇಮಕ್ಕಾಗಿ ಉತ್ತರ ಪ್ರದೇಶದ ಮುಸ್ಲಿಂ ಮಹಿಳೆಯೊಬ್ಬರು 170 ಕಿ.ಮೀ. ಕಾಲ್ನಡಿಗೆ ಮೂಲಕ ಕನ್ವರ್ ಯಾತ್ರೆ ಸಾಗಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬುರ್ಖಾ ಧರಿಸಿದ ಮುಸ್ಲಿಮ್ ಮಹಿಳೆ ಕನ್ವರ್ ಯಾತ್ರೆ ಸಾಗಿ ಹರಿದ್ವಾರದಲ್ಲಿರುವ ತಮ್ಮ ಮನೆಗೆ ಗಂಗಾಜಲದೊಂದಿಗೆ ಮರಳಿ, ಶಿವನಿಗೆ ಅಭಿಷೇಕ ಮಾಡಿಸಿದ್ದಾರೆ.
ಸುಮಾರು ಮೂರು ವರ್ಷಗಳ ಹಿಂದೆ ಕೈಗೊಂಡ ಪ್ರತಿಜ್ಞೆಯನ್ನು ಪೂರೈಸಲು ಮುಸ್ಲಿಂ ಮಹಿಳೆಯನ್ನು ಹರ್ ಹರ್ ಮಹಾದೇವ ಎನ್ನುತ್ತಾ ಗ್ರಾಮಸ್ಥರು ಸ್ವಾಗತಿಸಿದ್ದಾರೆ. ಭಾನುವಾರ ಮಹಾಶಿವರಾತ್ರಿಯಂದು, ಬುರ್ಖಾ ಧರಿಸಿದ ತಮನ್ನಾ ಮಲಿಕ್ ಸಂಭಾಲ್ನ ಕ್ಷೇಮ್ ನಾಥ್ ದೇವಾಲಯದಲ್ಲಿ ಶಿವನಿಗೆ ಗಂಗಾಜವನ್ನು ಅಭಿಷೇಕ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ಕನ್ವರ್ ಯಾತ್ರೆ: ಮಾಂಸಾಹಾರಿ ರೆಸ್ಟೋರೆಂಟ್ಗಳ ಮುಚ್ಚಿಸಿದ ಹಿಂದೂ ಸಂಘಟನೆ, ಆಹಾರ ಹೇರಿಕೆ ವಿರುದ್ಧ ಆಕ್ರೋಶ
ಬದನ್ಪುರ್ ಬಸಾಯಿ ಗ್ರಾಮದ ನಿವಾಸಿ ಮೂರುವರೆ ವರ್ಷಗಳ ಹಿಂದೆ ಅದೇ ಗ್ರಾಮದ ಹಿಂದೂ ಯುವಕ ಅಮನ್ ತ್ಯಾಗಿ ಅವರನ್ನು ವಿವಾಹವಾಗಿದ್ದು, ದಂಪತಿಗೆ ಆರ್ಯನ್ ಮತ್ತು ದಕ್ಷ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ದಂಪತಿ ಗ್ರಾಮದಿಂದ ಬೇರೆಡೆ ಹೋಗಿ ವಿವಾಹವಾಗಿದ್ದು, ಒಂದು ವರ್ಷದ ಹಿಂದೆ ಹಿಂತಿರುಗಿದ್ದರು.
ಅಂತರ್ಧರ್ಮೀಯ ವಿವಾಹಕ್ಕೆ ಅಡೆತಡೆಗಳು ಉಂಟಾದಾಗ ತ್ಯಾಗಿಯನ್ನು ವಿವಾಹವಾದರೆ ‘ಜಲಾಭಿಷೇಕ’ ಮಾಡುವುದಾಗಿ ಮಲಿಕ್ ಪ್ರತಿಜ್ಞೆ ಮಾಡಿದ್ದರು. ಹಾಗೆಯೇ ಇದೀಗ ಹಿಂದೂ ಪತಿಯ ಕ್ಷೇಮಕ್ಕಾಗಿ 170 ಕಿ.ಮೀ. ಕಾಲ್ನಡಿಗೆ ಸಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಮುಸ್ಲಿಂ ಧರ್ಮಗಳು ಮತ್ತು ಸಂಪ್ರದಾಯವಾದಿಗಳು ಪ್ರತಿಭಟನೆ ನಡೆಸಲು ಆರಂಭಿಸಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮಲಿಕ್, “ನನ್ನ ಪತಿ ನನಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಜನರು ಅನೇಕ ಸ್ಥಳಗಳಲ್ಲಿ ಹೂವುಗಳ ಸುರಿಮಳೆಯೊಂದಿಗೆ ನನ್ನನ್ನು ಸ್ವಾಗತಿಸಿದ್ದಾರೆ. ಹಿಂದೂ ಧರ್ಮದ ಜನರು ನಮ್ಮನ್ನು ಅನೇಕ ಸ್ಥಳಗಳಲ್ಲಿ ಸ್ವಾಗತಿಸಿದರು. ಪ್ರತಿಭಟನೆ ನಡೆಸುತ್ತಿರುವವರು ಅಜ್ಞಾನಿಗಳು. ನಾವು ಅವರ ಬಗ್ಗೆ ಏಕೆ ಗಮನ ಹರಿಸಬೇಕು” ಎಂದು ಹೇಳಿದ್ದಾರೆ.
ಇನ್ನು ತಾನು ಬುರ್ಖಾ ಧರಿಸಿ ಕನ್ವರ್ ಯಾತ್ರೆ ತೆರಳಿದ ಬಗ್ಗೆ ಮಾತನಾಡಿದ ಮಲಿಕ್, “ನಾನು ಈ ಹಿಂದೆಯೂ ಬುರ್ಖಾ ಧರಿಸುತ್ತಿದ್ದೆ, ಅದರಲ್ಲಿ ಯಾರಿಗಾದರೂ ಏನಾದರೂ ಸಮಸ್ಯೆ ಏಕೆ” ಎಂದು ಪ್ರಶ್ನಿಸಿದ್ದಾರೆ. ಮಲಿಕ್ ಫೆಬ್ರವರಿ 10ರಂದು ತನ್ನ ಪತಿಯೊಂದಿಗೆ ಹರಿದ್ವಾರಕ್ಕೆ ತೆರಳಿದ್ದು ಮರುದಿನ ತನ್ನ ಗ್ರಾಮಕ್ಕೆ ಮರಳಿದ್ದಾರೆ.





