ಪಶ್ಚಿಮ ಬಂಗಾಳದ ಕಾಂಚನ್ಜುಂಗಾ ಎಕ್ಸ್ಪ್ರೆಸ್ ರೈಲಿನ ಅಪಘಾತದ ನಂತರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿದೆ. ರೈಲ್ವೆ ಸಚಿವರ ದುರಾಡಳಿತದಿಂದ ಅಪಘಾತವುಂಟಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ರೀಲ್ಸ್ ತಯಾರಿಕೆಯಲ್ಲಿ ರೈಲ್ವೆ ಸಚಿವರು ನಿರತರಾಗಿದ್ದು, ಜನರ ಸುರಕ್ಷತೆಯ ಬಗ್ಗೆ ಚರ್ಚಿಸಲು ಅವರಿಗೆ ಸಮಯವಿಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಇಂದು ಬೆಳಿಗ್ಗೆ ಪಶ್ಚಿಮ ಬಂಗಾಳ ಸಿಲಿಗುರಿಯಲ್ಲಿ ಸರಕು ಸಾಗಣೆ ರೈಲು ಕಾಂಚನ್ಜುಂಗ ಎಕ್ಸ್ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 9ಕ್ಕೂ ಹೆಚ್ಚು ಮಂದಿ ಮೃತಪಟ್ಟು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನರೇಂದ್ರ ಮೋದಿ ಸರ್ಕಾರ ವ್ಯವಸ್ಥಿತವಾಗಿ ರೈಲ್ವೆ ಇಲಾಖೆಯನ್ನು ಕ್ಯಾಮೆರಾ ಚಾಲಿತ ಸ್ವಪ್ರಚಾರ ವೇದಿಕೆಯನ್ನಾಗಿ ಪರಿವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನೀಟಾಗಿಲ್ಲ ಎನ್ನುವುದು ಗೊತ್ತಿದ್ದೂ ಭಂಡತನ ಮೆರೆದ ಬಿಜೆಪಿ
“ಕಳೆದ 10 ವರ್ಷಗಳಲ್ಲಿ, ನರೇಂದ್ರ ಮೋದಿ ಸರ್ಕಾರ ರೈಲ್ವೆ ಇಲಾಖೆಯನ್ನು ಅತ್ಯಂತ ದುರಾಡಳಿತದಲ್ಲಿ ನಿರ್ವಹಿಸಿದೆ. ಭಾರತೀಯ ರೈಲ್ವೆಯನ್ನುಅಪರಾಧಿಯನ್ನಾಗಿ ಕೈಬಿಟ್ಟಿರುವುದಕ್ಕೆ ಮೋದಿ ಸರ್ಕಾರವೆ ಹೊಣೆಯಾಗಿರುವುದರಿಂದ ನಮ್ಮ ಪ್ರಶ್ನೆಗಳು ನಿರಂತರವಾಗಿ ಉಳಿಯುತ್ತವೆ” ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಅಶ್ವಿನಿ ವೈಷ್ಣವ್ ಅವರ ರಾಜೀನಾಮೆಗೆ ಒತ್ತಾಯಿಸಿರುವ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ, ಒಡಿಶಾದ ಕೋರ್ಮಂಡಲ್ ಎಕ್ಸ್ಪ್ರೆಸ್ ದುರಂತದಲ್ಲಿ 290 ಮಂದಿ ಮೃತಪಟ್ಟ ಒಂದು ವರ್ಷದ ನಂತರ ಮತ್ತೊಂದು ಅಪಘಾತ ಸಂಭವಿಸಿರುವುದನ್ನು ಉಲ್ಲೇಖಿಸಿದರು.
ಅಶ್ವಿನಿ ವೈಷ್ಣವ್ ಅವರ ಅವಧಿಯ ಆಗಸ್ಟ್ 2021ರಿಂದ ರೈಲ್ವೆ ಅಪಘಾತಗಳು ಹಾಗೂ ಸುರಕ್ಷತೆಯ ಸಮಸ್ಯೆಗಳಿಂದಾಗಿ 329ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇವರ ಅವಧಿಯಲ್ಲಿ ಗರಿಷ್ಠ ಪ್ರಚಾರ, ಪಿಆರ್ ಹಾಗೂ ಸಾಮಾಜಿಕ ಮಾಧ್ಯಮಗಳ ಚಟುವಟಿಕೆಗಳೆ ಹೆಚ್ಚಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್ನಲ್ಲಿ ವಾಗ್ದಾಳಿ ನಡೆಸಿದ್ದಾರೆ.





